Mangalore Heavy Rain, Traffic, Pumpwell: ಒಂದೇ ಗಂಟೆ ಮಳೆಗೆ ಮುಳುಗಿದ ಮಂಗಳೂರು ; ಮತ್ತೆ 'ಪಂಪ್ವೆಲ್ ಬಲೆ' , ಅಡ್ಯಾರ್, ಕೊಟ್ಟಾರದಲ್ಲಿ ನೀರೇ ನೀರು ! ಕೊಡಿಯಾಲ್ ಬೈಲಿನಲ್ಲಿ ಸಂತ್ರಸ್ತರ ಬೋಟ್ ಸಂಚಾರ ! 

14-06-25 09:00 pm       Mangalore Correspondent   ಕರಾವಳಿ

ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ 5 ಗಂಟೆ ವರೆಗೆ ನಿರಂತರ ಧಾರಾಕಾರವಾಗಿ ಮಳೆ ಸುರಿದಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.‌ ಪಡೀಲ್, ಪಂಪ್ವೆಲ್, ಅತ್ತಾವರ, ಕೊಡಿಯಾಲ್ ಬೈಲ್ ಪ್ರದೇಶದಲ್ಲಿ ಕೃತಕ ನೆರೆ ಎದುರಾಯಿತು. ‌

ಮಂಗಳೂರು, ಜೂನ್ 14 : ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದ 5 ಗಂಟೆ ವರೆಗೆ ನಿರಂತರ ಧಾರಾಕಾರವಾಗಿ ಮಳೆ ಸುರಿದಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.‌ ಪಡೀಲ್, ಪಂಪ್ವೆಲ್, ಅತ್ತಾವರ, ಕೊಡಿಯಾಲ್ ಬೈಲ್ ಪ್ರದೇಶದಲ್ಲಿ ಕೃತಕ ನೆರೆ ಎದುರಾಯಿತು. ‌

ಮಂಗಳೂರಿನ ಪಂಪ್ವೆಲ್ ಹೆದ್ದಾರಿಯಲ್ಲಿ ಫ್ಲೈ ಓವರ್ ಕೆಳಗಡೆ ಮಳೆ ನೀರು ನುಗ್ಗಿದ್ದು ನಾಲ್ಕು ಅಡಿ ವರೆಗೆ ನೀರು ನಿಂತಿದ್ದರಿಂದ ಸಂಜೆ ವೇಳೆಗೆ ಮಂಗಳೂರು ನಗರ ಪೂರ್ತಿಯಾಗಿ ಬ್ಲಾಕ್ ಆಗಿತ್ತು. ‌ಮಳೆ ನೀರು ಹರಿಯಲಾಗದೆ ಪಂಪ್ವೆಲ್ ಕೆಳಗಡೆ ಕೆಂಪಗಿನ ನೀರು ನಿಂತಿದ್ದರಿಂದ ನಾಲ್ಕು ಕಡೆಯಿಂದಲೂ ನೀರು ಹರಿಯಲಾಗದೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.‌ 

ಇದರಿಂದಾಗಿ ಪಂಪ್ವೆಲ್ ಹಾದು ಹೋಗುವ ವಾಹನಗಳು ಹೆಚ್ಚಾಗಿ ನಂತೂರು ವೃತ್ತದ ಮೂಲಕ ಬಂದಿದ್ದು ಅಲ್ಲಿಯೂ ಭಾರೀ ಬ್ಲಾಕ್ ಎದುರಾಯಿತು. ಪಡೀಲ್, ಅಡ್ಯಾರ್ ಭಾಗದಲ್ಲು ಕೃತಕ ನೆರೆ ಉಂಟಾಗಿ ವಾಹನ ಸಂಚಾರಕ್ಕೆ ತೊಡಕಾಯಿತು. ಪಡೀಲ್ ನಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯ ಒಳಗಡೆಯೂ ನೀರು ನುಗ್ಗಿದ್ದು ಅಲ್ಲಿಂದ ಎದುರು ಭಾಗದಲ್ಲಿ ಹೆದ್ದಾರಿಯೂ ಮುಳುಗಡೆಯಾಗಿತ್ತು. ನಂತೂರಿನಲ್ಲಿ ನಾಲ್ಕು ಕಡೆಯೂ ಟ್ರಾಫಿಕ್ ಜಾಮ್ ಆಗಿ ವಾಹನಗಳು ಕಿಮೀ ಉದ್ದಕ್ಕೆ ಸಾಲುಗಟ್ಟಿದ್ದರೆ, ಪಡೀಲಿನಲ್ಲು ಅಂತಹದ್ದೆ ಸ್ಥಿತಿಯಾಗಿತ್ತು. 

ಇತ್ತ ಕೊಟ್ಟಾರದಲ್ಲಿಯೂ ಹೆದ್ದಾರಿಗೆ ನೀರು ಬಂದು ವಾಹನ ಸಂಚಾರಕ್ಕೆ ತೊಡಕಾಯಿತು. ವಾಹನಗಳು ಉದ್ದಕ್ಕೂ ಸಾಲುಗಟ್ಟಿ ಟ್ರಾಫಿಕ್ ಬ್ಲಾಕ್ ಆಯಿತು. ಕೊಡಿಯಾಲಬೈಲಿನಲ್ಲಿ ಭಾರೀ ಮಳೆಯಿಂದಾಗಿ ನೀರು ರಸ್ತೆಯಲ್ಲೇ ಹರಿದು ತೋಡಿನಂತಾಗಿತ್ತು.‌ ಎರಡು ಗಂಟೆ ಕಾಲ ಧಾರಾಕಾರ ಮಳೆಯಾಗಿದ್ದು ವಾಹನಗಳಲ್ಲಿದ್ದ ಜನರು ಗಂಟೆಗಟ್ಟಲೆ ಪರದಾಟ ನಡೆಸಿದರು.

ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ 

ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಎಲ್ಲಾ ತಹಶೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್ ಗಳು ಅಪಾಯದಂಚಿನಲ್ಲಿರುವ ಮನೆಗಳ ಕುಟುಂಬಗಳನ್ನು ಕಾಳಜಿ ಕೇಂದ್ರ /ಸುರಕ್ಷಿತ ಸ್ಥಳಗಳಿಗೆ ಕೂಡಲೇ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.

ನೆರೆ ಉಂಟಾಗುವ ಪ್ರದೇಶಗಳ ಮೇಲೆ ತೀರಾ ನಿಗಾ ವಹಿಸಿ ಎಲ್ಲಾ ರಕ್ಷಣಾ ಸಾಮಾಗ್ರಿಗಳನ್ನು ಸನ್ನದ್ಧವಾಗಿರಿಸಬೇಕು. ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರಿಕೆಯನ್ನು ವಹಿಸಬೇಕು. ಎಲ್ಲಾ ತಾಲೂಕು ಹಾಗೂ ಮಹಾನಗರಪಾಲಿಕೆ ಕಂಟ್ರೋಲ್‌ ರೂಂ ನಿರಂತರ ಕಾರ್ಯಾಚರಣೆಯಲ್ಲಿರಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರಾಕೃತಿಕ ವಿಕೋಪ ಕಾರ್ಯಾಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಮಳೆ ಅನಾಹುತ ಸ್ಥಳಗಳಿಗೆ ಭೇಟಿ 

ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ಶನಿವಾರ ನಗರದಲ್ಲಿ ಮಳೆ ನೀರು ನಿಂತು ಸಮಸ್ಯೆಗೀಡಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಂಪ್ ವೆಲ್ ಗೆ ಭೇಟಿ ನೀಡಿ, ಮಳೆ ನೀರು ಸರಾಗ ಹರಿವಿನ ಸಮಸ್ಯೆಗಳ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.

12 ಕುಟುಂಬಗಳು ಪುನರ್ವಸತಿ ಕೇಂದ್ರಕ್ಕೆ 

ಮಂಗಳೂರು‌ ನಗರದ ಅತ್ತಾವರ ಸೇರಿದಂತೆ ಕೇಂದ್ರ ಭಾಗದ ವಿವಿದೆಡೆ ಮಳೆ ನೀರು ಮನೆಗಳಿಗೆ ನುಗ್ಗಿ ತೊಂದರೆಗೀಡಾದ 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇವರಿಗೆ ಮಹಾನಗರಪಾಲಿಕೆ ವತಿಯಿಂದ ಪುರಭವನ ಆವರಣದಲ್ಲಿ ತಾತ್ಕಾಲಿಕ ಪುನರ್ವಸತಿ‌ ಕೇಂದ್ರದಲ್ಲಿ ಆಶ್ರಯ ನೀಡಿ‌, ಆಹಾರ ಮತ್ತು ಅಗತ್ಯ ಸಾಮಾಗ್ರಿಗಳನ್ನು ಒದಗಿಸಲಾಗಿದೆ. ನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Heavy rains pounded Mangalore on Saturday, leading to severe flooding in several parts of the city. The Pumpwell area was among the worst affected, with waterlogging disrupting traffic and daily activities. In a related incident, a compound wall reportedly collapsed due to continuous downpour, raising safety concerns among local residents. No casualties have been reported so far, but the incident caused panic in the neighborhood.