ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ; ಕ್ರೈಸ್ತರ ಹೆಸರಲ್ಲಿ ಮೊಸಳೆ ಕಣ್ಣೀರು ರಾಜಕೀಯ ಅಸ್ತ್ರ, ಎಸ್ಡಿಪಿಐ, ಜಮಾತೆ ಬಗ್ಗೆ ಬಿಜೆಪಿ ಉಪಾಧ್ಯಕ್ಷ ಶಾನ್ ಜಾರ್ಜ್ ಟೀಕೆ  

06-08-25 12:15 pm       HK News Desk   ದೇಶ - ವಿದೇಶ

ಛತ್ತೀಸ್ಗಢದಲ್ಲಿ ಸಿಸ್ಟರ್ ಗಳಿಬ್ಬರ ಬಂಧನ ವಿರೋಧಿಸಿ ಚರ್ಚ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ರೈಸ್ತರ ಪ್ರತಿಭಟನೆಯಲ್ಲಿ ಇಸ್ಲಾಮ್ ಮೂಲಭೂತವಾದಿಗಳು ನುಸುಳಿಕೊಂಡು ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಕೇರಳ ಘಟಕದ ರಾಜ್ಯ ಉಪಾಧ್ಯಕ್ಷ ಶಾನ್ ಜಾರ್ಜ್ ಆಕ್ಷೇಪಿಸಿದ್ದಾರೆ.

ತಿರುವನಂತಪುರಂ, ಆ.6 : ಛತ್ತೀಸ್ಗಢದಲ್ಲಿ ಸಿಸ್ಟರ್ ಗಳಿಬ್ಬರ ಬಂಧನ ವಿರೋಧಿಸಿ ಚರ್ಚ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ರೈಸ್ತರ ಪ್ರತಿಭಟನೆಯಲ್ಲಿ ಇಸ್ಲಾಮ್ ಮೂಲಭೂತವಾದಿಗಳು ನುಸುಳಿಕೊಂಡು ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಕೇರಳ ಘಟಕದ ರಾಜ್ಯ ಉಪಾಧ್ಯಕ್ಷ ಶಾನ್ ಜಾರ್ಜ್ ಆಕ್ಷೇಪಿಸಿದ್ದಾರೆ. ಚರ್ಚ್ ಪ್ರತಿಭಟನೆಯಲ್ಲಿ ಎಸ್ಡಿಪಿಐ, ಪಿಡಿಪಿ ಮತ್ತು ಜಮಾತ್ ಇ-ಇಸ್ಲಾಮಿ ಸಂಘಟಟನೆಯ ಸದಸ್ಯರು ಮೊಸಳೆ ಕಣ್ಣೀರು ಹಾಕುತ್ತಿದ್ದು ಇದೊಂದು ರೀತಿ ಕೇಂದ್ರದ ಬಿಜೆಪಿ ಆಡಳಿತ ವಿರುದ್ಧ ನಡೆಸುತ್ತಿರುವ ಪ್ರೊಪಗಾಂಡಾ ಎಂದು ಶಾನ್ ಜಾರ್ಜ್ ಹೇಳಿದ್ದಾರೆ.

ರಾಜ್ಯದ ಕಣ್ಣೂರು, ತಲಶ್ಶೇರಿ, ಕೋಝಿಕ್ಕೋಡ್, ಕೊಟ್ಟಾಯಂ, ಪತ್ತನಂತಿಟ್ಟ, ಮಾನಂದವಾಡಿ, ಅಂಗಮಾಲಿ, ಎರ್ನಾಕುಲಂ ಸೇರಿದಂತೆ ಹಲವೆಡೆ ಚರ್ಚ್ ಮತ್ತು ಬಿಷಪ್ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದಿದ್ದು, ಎಲ್ಲ ಕಡೆಯೂ ಎಸ್ಡಿಪಿಐ, ಪಿಡಿಪಿ, ಜಮಾತೆ ಸದಸ್ಯರು ಪಾಲ್ಗೊಂಡಿದ್ದಾರೆ. ಈ ಬಗ್ಗೆ ಚರ್ಚ್ ಪಾದ್ರಿಗಳು ಮತ್ತು ಬಿಷಪರ ಜೊತೆಗೆ ಮಾತನಾಡಿದ್ದು, ಇಸ್ಲಾಮಿಕ್ ಮೂಲಭೂತವಾದಿಗಳ ಬಗ್ಗೆ ಗಂಭೀರ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾಗಿ ಹೇಳಿದ್ದಾರೆ.

ಇದನ್ನು ಕೇವಲ ಆರೋಪಕ್ಕಾಗಿ ಮಾಡುತ್ತಿಲ್ಲ. ಹಲವು ಮಾಧ್ಯಮ ಗೆಳೆಯರು, ಇಂಟೆಲಿಜೆನ್ಸ್ ಮಂದಿಯೂ ನನಗೆ ಈ ಬಗ್ಗೆ ತಿಳಿಸಿದ್ದಾರೆ. ನನ್ನ ಮೂಲಗಳಿಂದಲೂ ಈ ಮಾಹಿತಿಯನ್ನು ದೃಢೀಕರಿಸಿದ್ದೇನೆ. ಸಿಸ್ಟರ್ ಗಳನ್ನು ಬಂಧಿಸಿರುವ ನೆಪವನ್ನು ಮುಂದಿಟ್ಟು ರಾಜ್ಯದಲ್ಲಿ ಬಿಜೆಪಿ ಜೊತೆಗಿರುವ ಕ್ರಿಸ್ತಿಯನ್ನರನ್ನು ಚದುರಿಸುವ ಕೆಲಸ ಮಾಡಲಾಗುತ್ತಿದೆ. ಕ್ರೈಸ್ತರು ಕಾಂಗ್ರೆಸ್ ಅಥವಾ ಕಮ್ಯುನಿಸ್ಟ್ ಜೊತೆಗೇ ಇರಬೇಕೆಂದು ಎಸ್ಡಿಪಿಐ, ಜಮಾತೆ ಇಸ್ಲಾಮಿಗಳು ತಮ್ಮನ್ನು ಸೆಕ್ಯುಲರ್ ಎಂದು ತೋರಿಸಿಕೊಳ್ಳಲು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಆಮೂಲಕ ಬಿಜೆಪಿಯನ್ನು ಕಟಕಟೆಯಲ್ಲಿ ತೋರಿಸುತ್ತಿದ್ದಾರೆ ಎಂದು ಶಾನ್ ಜಾರ್ಜ್ ಹೇಳಿದ್ದಾರೆ.

ಸಿಸ್ಟರ್ ಗಳು ಜೈಲಿನಿಂದ ಹೊರ ಬರಬೇಕೆಂಬ ಬಯಕೆ ಕಾಂಗ್ರೆಸ್ ಮತ್ತು ಸಿಪಿಐಎಂ ಪಕ್ಷಕ್ಕೂ ಇಲ್ಲ. ಅವರು ಜೈಲಿನಲ್ಲೇ ಇದ್ದರೆ ಆ ವಿಷಯ ಮುಂದಿಟ್ಟು ಬಿಜೆಪಿಯನ್ನು ದೂರುತ್ತ ಇರಬಹುದು ಮತ್ತು ಆಮೂಲಕ ರಾಜ್ಯದಲ್ಲಿ ಕ್ರೈಸ್ತರ ಬೆಂಬಲ ಪಡೆಯಬಹುದು ಎನ್ನುವ ಇರಾದೆ ಈ ಪಕ್ಷಗಳದ್ದಿದೆ. ಕೇರಳದಲ್ಲಿ ಕ್ರೈಸ್ತರು ಬಿಜೆಪಿ ಪರ ವಾಲುತ್ತಿರುವುದನ್ನು ತಪ್ಪಿಸಲು ಕಾಂಗ್ರೆಸ್, ಕಮ್ಯುನಿಸ್ಟರು ಈ ವಿಷಯವನ್ನು ರಾಜಕೀಯಕ್ಕೆ ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಎಸ್ಡಿಪಿಐ, ಜಮಾತೆಗಳು ಕೂಡ ಕ್ರೈಸ್ತರ ಜೊತೆಗೆ ನಿಂತು ಬಿಜೆಪಿ ಸರಕಾರವನ್ನು ಟೀಕಿಸಲು ಮುಂದಾಗಿವೆ ಎಂದು ಶಾನ್ ಜಾರ್ಜ್ ಆರೋಪಿಸಿದ್ದಾರೆ.

ಬಲವಂತದ ಮತಾಂತರ ಮಾಡುವುದಕ್ಕೆ ಕಾನೂನು ಸಮ್ಮತಿ ಇಲ್ಲ. ವ್ಯಾಟಿಕನ್ ಕೌನ್ಸಿಲ್ 1964ರಲ್ಲಿಯೇ ಬಲವಂತದ ಮತಾಂತರ ವಿರುದ್ಧ ನಿರ್ಣಯ ತೆಗೆದುಕೊಂಡಿತ್ತು ಎಂದು ಹೇಳಿರುವ ಶಾನ್ ಜಾರ್ಜ್, 200 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ್ ಕತ್ತಿ ಹಿಡಿದು ಬಲವಂತದ ಮತಾಂತರ ಮಾಡದೇ ಇರುತ್ತಿದ್ದರೆ ಕೊಡುಂಗಲ್ಲೂರು ಸ್ಥಿತಿ ಹೀಗಾಗುತ್ತಿರಲಿಲ್ಲ. ಕೇರಳದ ಸಾಮಾಜಿಕ ಸ್ಥಿತಿ ಬೇರೆ ಭಾಗಕ್ಕಿಂತ ಡಿಫರೆಂಟ್ ಇದೆ ಎಂಬುದನ್ನು ತಿಳಿಯಬೇಕು ಎನ್ನುವ ಮೂಲಕ ಇಸ್ಲಾಮಿಕ್ ಮೂಲಭೂತವಾದಿಗಳ ಹಿಡಿತ ಬಲಗೊಂಡರೆ ಏನಾಗುತ್ತದೆ ಎನ್ನುವುದನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.

ಆದರೂ ಬಿಜೆಪಿ ಜೊತೆಗೆ ರಾಷ್ಟ್ರಭಕ್ತ ಮುಸ್ಲಿಮರು ಈಗಲೂ ಇದ್ದಾರೆ ಎಂದು ಹೇಳಿರುವ ಶಾನ್ ಜಾರ್ಜ್, ಇತ್ತೀಚೆಗೆ ನಿಲಂಬೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐಎಂ ಪಕ್ಷಗಳು ತಮ್ಮ ಗೆಲುವಿಗಾಗಿ ಜಮಾತೆ ಇಸ್ಲಾಮಿ ಮತ್ತು ಎಸ್ಡಿಪಿಐ ಬೆಂಬಲ ಯಾಚಿಸಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಕೇರಳದಲ್ಲಿ ಮುಂದಿನ ವರ್ಷ ಪಂಚಾಯತ್ ಮತ್ತು ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಬಿಜೆಪಿ ತಯಾರಿ ನಡೆಸುತ್ತಿದೆ. (ಮಾಹಿತಿ- ದಿ ಹಿಂದು)

BJP Kerala state vice-president Shan George has alleged that Islamist fundamentalist groups have infiltrated the ongoing church-led protests in the state, using the arrest of two nuns in Chhattisgarh as a pretext for political propaganda against the BJP-led central government.