Mangalore Accident, Kallapu: ನಿಯಂತ್ರಣ ತಪ್ಪಿ ಆಡಂಕುದ್ರು ನೇತ್ರಾವತಿ ಹಿನ್ನೀರಿಗೆ ಉರುಳಿದ ಕಾರು ; ಐವರು ಯುವಕರನ್ನ ರಕ್ಷಿಸಿದ ಬುರ್ದುಗೋಳಿ ಕ್ಷೇತ್ರದ ಸ್ವಾಗತ ಫಲಕ, ಯರ್ರಾಬಿರ್ರಿ ಕಾರು ಓಡಿಸಿದ್ದ ಹುಡುಗರನ್ನ ಬೆನ್ನಟ್ಟಿದ್ದ ಕುದ್ರು ನಿವಾಸಿಗಳು 

17-03-25 08:01 pm       Mangalore Correspondent   ಕರಾವಳಿ

ಯರ್ರಾಬಿರ್ರಿ ಚಲಿಸಿದ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಾ.ಹೆ. 66ರ ಕಲ್ಲಾಪು ಬಳಿಯ ಆಡಂಕುದ್ರು ಎಂಬಲ್ಲಿ ನೇತ್ರಾವತಿ ನದಿಯ ಹಿನ್ನೀರಿಗೆ ಉರುಳಿ ಬಿದ್ದಿದೆ.

ಉಳ್ಳಾಲ, ಮಾ.17 : ಯರ್ರಾಬಿರ್ರಿ ಚಲಿಸಿದ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಾ.ಹೆ. 66ರ ಕಲ್ಲಾಪು ಬಳಿಯ ಆಡಂಕುದ್ರು ಎಂಬಲ್ಲಿ ನೇತ್ರಾವತಿ ನದಿಯ ಹಿನ್ನೀರಿಗೆ ಉರುಳಿ ಬಿದ್ದಿದೆ. ಹೆದ್ದಾರಿ ಬದಿಯಲ್ಲಿದ್ದ ಕಲ್ಲಾಪು ಬುರ್ದುಗೋಳಿ ಗುಳಿಗ-ಕೊರಗಜ್ಜ ಕ್ಷೇತ್ರದ ಸ್ವಾಗತ ಫಲಕದ ಕಮಾನಿಗೆ ಗುದ್ದಿದ ಪರಿಣಾಮ ಕಾರಿನ ವೇಗ ನಿಯಂತ್ರಣಕ್ಕೆ ಬಂದು ಕಾರಿನಲ್ಲಿದ್ದ ಉಳ್ಳಾಲದ ಐವರು ಮುಸ್ಲಿಂ ಹುಡುಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಮಧ್ಯಾಹ್ನದ ವೇಳೆ ಉಳ್ಳಾಲ ಮೂಲದ ಐವರು‌ ಸಣ್ಣ ಪ್ರಾಯದ ಹುಡುಗರಿದ್ದ ಕಾರು ತೊಕ್ಕೊಟ್ಟಿನ ಕಡೆಗೆ ಧಾವಿಸುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯಲ್ಲಿದ್ದ ಬುರ್ದುಗೋಳಿ ಕೊರಗಜ್ಜನ‌ ನಾಮಫಲಕದ ಕಬ್ಬಿಣದ ಕಮಾನಿನ ಸಲಾಕೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿ ಬಿದ್ದಿದೆ. ಭಯಗೊಂಡ ಹುಡುಗರು ಕಾರಿನಿಂದಿಳಿದು ಅಪಘಾತ ನಡೆದ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಿಂದ ಹೆದ್ದಾರಿ ಸಂಚಾರದಲ್ಲಿ ಸ್ವಲ್ಪ ಹೊತ್ತು ವ್ಯತ್ಯಯ ಉಂಟಾಯಿತು.

ಅಪಘಾತದಿಂದ ಕೊರಗಜ್ಜನ ನಾಮಫಲಕದ ಕಮಾನು ಕೂಡ ಉರುಳಿ ಬಿದ್ದು ಹಾನಿಯುಂಟಾಗಿದೆ. ಕಾರಲ್ಲಿದ್ದ ಇಬ್ಬರು ಹುಡುಗರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ.

ಹುಡುಗರನ್ನ ಓಡಿಸಿದ್ದ ಸ್ಥಳೀಯರು 

ಅಪಘಾತಕ್ಕೂ ಮುನ್ನ ಐವರು ಸಣ್ಣ ಪ್ರಾಯದ ಹುಡುಗರಿದ್ದ ಸ್ವಿಫ್ಟ್ ಕಾರು ಅಡಂಕುದ್ರುವಿನ ಒಳ ರಸ್ತೆಯಲ್ಲಿ ಯರ್ರಾಬಿರ್ರಿ ಓಡಾಡಿ, ಗದ್ದಲ ಎಬ್ಬಿಸಿದ್ದು ಸ್ಥಳೀಯ ಕ್ರೈಸ್ತ ನಿವಾಸಿಗಳು ಹುಡುಗರನ್ನ ಬೆನ್ನಟ್ಟಿರುವುದಾಗಿ ಘಟನಾ ಸ್ಥಳಕ್ಕೆ ಬಂದಿದ್ದ ಟ್ರಾಫಿಕ್ ಪೊಲೀಸರಲ್ಲಿ ಸ್ಥಳೀಯರೇ ಮಾಹಿತಿ ನೀಡಿದ್ದಾರೆ. ಕೊರಗಜ್ಜನ‌ ನಾಮಫಲಕ‌ ಇಲ್ಲದೇ ಇರುತ್ತಿದ್ದರೆ ಕಾರು ನೇರ ನದಿ ನೀರಿಗೆ ಬಿದ್ದು ಪ್ರಾಣ ಹಾನಿ ಸಂಭವಿಸುತ್ತಿತ್ತೆಂದು ಟ್ರಾಫಿಕ್ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನದಿಯ ಇಳಿಜಾರಿನಲ್ಲಿ ಉಳಿದಿದ್ದ ಕಾರನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಕ್ರೇನ್ ಮುಖಾಂತರ ಮೇಲಕ್ಕೆತ್ತಿ ವಶಕ್ಕೆ ಪಡೆದಿದ್ದು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Local Residents Save Five Youths After Car Plunges into Adankadu Netravati Backwaters at kallapu in mangalore