Udupi Mahalakshmi Cooperative Bank fraud case: ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಅವ್ಯವಹಾರ ; ಕಲಂ 64ರಡಿಯಲ್ಲಿ ತನಿಖೆ ನಡೆಸುವಂತೆ ಸಹಕಾರಿ ನಿಬಂಧಕರ ಆದೇಶ 

07-12-24 05:41 pm       Udupi Correspondent   ಕರಾವಳಿ

ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಹಕಾರಿ ಸಂಘಗಳ ಕಾಯ್ದೆ ಕಲಂ 64ರಡಿಯಲ್ಲಿ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶ ನೀಡಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರನ್ನು ವಿಚಾರಣೆಗೆ ನೇಮಿಸಲಾಗಿದೆ. 

ಉಡುಪಿ, ಡಿ.7: ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಸಹಕಾರಿ ಸಂಘಗಳ ಕಾಯ್ದೆ ಕಲಂ 64ರಡಿಯಲ್ಲಿ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರು ಆದೇಶ ನೀಡಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರನ್ನು ವಿಚಾರಣೆಗೆ ನೇಮಿಸಲಾಗಿದೆ. 

ಮಹಾಲಕ್ಷ್ಮಿ ಬ್ಯಾಂಕಿನ ಮಲ್ಪೆ ಶಾಖೆಯ ಗ್ರಾಹಕ ಪ್ರಸಾದ್ ಕುಲಾಲ್ ಮತ್ತು ಇತರರು ನೀಡಿರುವ ದೂರಿನಲ್ಲಿ, ಬ್ಯಾಂಕಿನ ಗ್ರಾಹಕರಿಂದ ಆಧಾರ್ ಕಾರ್ಡ್ ಮತ್ತು ಪಾನ್‌ ಕಾರ್ಡ್ ಪಡೆದು ಕ್ರಿಮಿನಲ್ ಸಂಚು ರೂಪಿಸಿ ನಕಲಿ ಸಹಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು ಅದನ್ನು ಸ್ವಂತಕ್ಕೆ ಬಳಸಿಕೊಂಡು ನಷ್ಟ ಉಂಟು ಮಾಡಿ ನಂಬಿಕೆ ದ್ರೋಹ ಮಾಡಿರುವುದಾಗಿ ತಿಳಿಸಲಾಗಿದೆ.

2023ರ ಮಾ.8ರಿಂದ 2024ರ ಜು.1ರ ವರೆಗೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಬ್ಯಾಂಕಿನ 1413 ಸದಸ್ಯರಿಗೆ ತಲಾ 2 ಲಕ್ಷ ರೂ.ನಂತೆ 28.26 ಕೋಟಿ ರೂ. ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ತೆಗೆದಿದ್ದು ಅದನ್ನು ಸ್ವಂತಕ್ಕೆ ಬಳಸಿರುವ ಬಗ್ಗೆ ಸಹಕಾರಿ ಸಂಘಗಳ ಲೆಕ್ಕಪರಿ ಶೋಧನಾಧಿಕಾರಿ 2023ರ ಜು.10ರಂದು ವರದಿ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. 

ಗಂಭೀರ ಪ್ರಕರಣ ಇದಾಗಿದ್ದು ಈ ಸಂಬಂಧ ಶಾಸನಾತ್ಮಕ ವಿಚಾರಣೆ ನಡೆಸುವುದು ಅಗತ್ಯವೆಂದು ಸಹಕಾರಿ ಸಂಘಗಳ ರಾಜ್ಯ ನಿಬಂಧಕರು ಅಭಿಪ್ರಾಯಪಟ್ಟಿದ್ದು, ಈ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 64ರಡಿ ಆರೋಪಿತರನ್ನು ವಿಚಾರಣೆಗೆ ಒಳಪಡಿಸುವಂತೆ ಆದೇಶ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿನ ಹಣವನ್ನು ಬೇನಾಮಿ ಹೆಸರಿನಲ್ಲಿ ಸ್ವಂತಕ್ಕೆ ಬಳಸಿರುವ ಬಗ್ಗೆ ಹಾಗೂ ಇನ್ನಿತರ ಲೋಪ ದೋಷಗಳ ಬಗ್ಗೆ ವಿಚಾರಣೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಎರಡು ತಿಂಗಳೊಳಗಾಗಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಸಾಲ ಪತ್ರಕ್ಕೆ ಸಹಿಯೇ ಪೋರ್ಜರಿ ! 

ವಂಚನೆಗೆ ಸಂಬಂಧಿಸಿ ಸುಮಾರು 31 ಜನ ಬ್ಯಾಂಕಿನ ಸಾಲ ಪತ್ರಕ್ಕೆ ಸಹಿಯನ್ನೇ ಹಾಕಿರಲಿಲ್ಲ. ಬ್ಯಾಂಕಿನ ದಾಖಲೆಗಳಲ್ಲಿ ನಮ್ಮ ಸಹಿಯನ್ನು ಫೋರ್ಜರಿ ಮಾಡಿದ್ದು, ನಮ್ಮ ಮನೆಗೆ ಬಂದು ಕೇವಲ 20,000 ರೂ. ಮಾತ್ರ ನೀಡಿ, ಈಗ 3 ಲಕ್ಷ ರೂ. ವರೆಗೆ ಪಾವತಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ನನ್ನ ಬಳಿ ದೂರಿದ್ದಾರೆ. ಬ್ಯಾಂಕಿನ ಸಾಲ ಪತ್ರದಲ್ಲಿರುವ 31 ಮಂದಿಯ ಸಹಿಯ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಇಲಾಖೆ (ಎಫ್‌ಎಸ್‌ಎಲ್) ಮೂಲಕ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ವಿಚಾರಣಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು.

Udupi Mahalakshmi Cooperative Bank fraud case, probe ordered. Co-operative Regulatory orders to conduct investigation under Section 64