UT Khader, Netravathi Bridge Ring road: ನೇತ್ರಾವತಿಗೆ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಅನುಮೋದನೆ, ಮಂಗಳೂರು ಬಂದರಿನಿಂದ ಉಳ್ಳಾಲ ಕೋಟೆಪುರ ಸಂಪರ್ಕ, ಸುಮಾರು 200 ಕೋಟಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ, ಯುಟಿ ಖಾದರ್ ಕನಸಿನ ಕುಡ್ಲದ ರಿಂಗ್ ರೋಡ್ !

07-12-24 01:20 pm       Mangalore Correspondent   ಕರಾವಳಿ

ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ನೇರವಾಗಿ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸಬೇಕು.

ಮಂಗಳೂರು, ಡಿ.7: ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ನೇರವಾಗಿ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸಬೇಕು. ಆಮೂಲಕ ಬಂದರಿಗೆ ಬರುವ ಸರಕು ವಾಹನಗಳು ಮಂಗಳೂರು ನಗರಕ್ಕೆ ಬರದೆ, ನೇರವಾಗಿ ಉಳ್ಳಾಲದ ಮೂಲಕ ಕೇರಳದ ಕಡೆಗೆ ಸಾಗುವಂತಾಗಬೇಕು ಎನ್ನುವುದು ಉಳ್ಳಾಲ ಕ್ಷೇತ್ರದ ಶಾಸಕ ಯುಟಿ ಖಾದರ್ ಕನಸಾಗಿತ್ತು. ಬೋಳಾರದಿಂದ ಉಳ್ಳಾಲದ ಕೋಟೆಪುರಕ್ಕೆ ಸೇತುವೆ ನಿರ್ಮಿಸುವ ಖಾದರ್ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಹೊಸತೊಂದು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಸುಮಾರು 200 ಕೋಟಿ ರೂ. ವೆಚ್ಚದ ಈ ಯೋಜನೆಗೆ ಸಚಿವ ಸಂಪುಟ ಅನುಮತಿ ನೀಡಿದ್ದು, ಆಮೂಲಕ ಈ ಭಾಗದ ಜನರ ದಶಕದ ಬೇಡಿಕೆಗೆ ಅಸ್ತು ಸಿಕ್ಕಿದೆ.

ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು- ಆಡಂಕುದ್ರು ಮಧ್ಯೆ ಸೇತುವೆ ಇದೆ. ಹಿಂದೆ ಒಂದೇ ಸೇತುವೆ ಇದ್ದ ಜಾಗದಲ್ಲಿ 2012ರ ವೇಳೆಗೆ ಮತ್ತೊಂದು ಸೇತುವೆ ರಚಿಸಿ, ಹೋಗುವುದಕ್ಕೆ ಬರುವುದಕ್ಕೆ ಪ್ರತ್ಯೇಕ ರಸ್ತೆ ಮಾಡಲಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಬಹುತೇಕ ಟ್ರಾಫಿಕ್ ಜಾಮ್ ಕಡಿಮೆಯಾಗಿತ್ತು. ಇದೀಗ ಮಂಗಳೂರಿನ ಮೀನುಗಾರಿಕಾ ಬಂದರು ಇರುವ ಬೋಳಾರ ಅಳಿವೆಬಾಗಿಲಿನ ಸಮೀಪದಲ್ಲೇ ಉಳ್ಳಾಲದ ಕೋಟೆಪುರಕ್ಕೆ ಸಂಪರ್ಕಿಸಲು ಸೇತುವೆ ರಚಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದೆ. ಕೋಟೆಪುರ- ಬೋಳಾರ ಮಧ್ಯೆ 1400 ಮೀಟರ್ ಉದ್ದಕ್ಕೆ ಸೇತುವೆ ರಚನೆಯಾಗಲಿದೆ.

ಈ ಭಾಗದಲ್ಲಿ ಹೊಸ ಸೇತುವೆ ರಚನೆಯಾದರೆ ಮಂಗಳೂರು ನಗರಕ್ಕೆ ಬಹುತೇಕ ಸರಕು ವಾಹನಗಳ ಎಂಟ್ರಿ ತಪ್ಪಲಿದೆ. ಬಂದರಿಗೆ ಕೇರಳ ಭಾಗದಿಂದ ಬಹಳಷ್ಟು ವಾಹನಗಳು ಬರುತ್ತಿದ್ದು, ಅವೆಲ್ಲ ಹೊಸ ಸೇತುವೆಯಿಂದ ಉಳ್ಳಾಲದ ಮೂಲಕ ಕೇರಳ ಕಡೆಗೆ ಸಾಗಲಿವೆ. ಮಂಗಳೂರು ನಗರಕ್ಕೆ ಎಂಟ್ರಿಯಾಗದೆ ಅಲ್ಲಿನ ಟ್ರಾಫಿಕ್ ಜಾಮ್ ತಪ್ಪಲಿದೆ ಎನ್ನುವುದು ದೂರದೃಷ್ಟಿಯ ಯೋಜನೆ. ಇದರಿಂದ ಉಳ್ಳಾಲ ಪೇಟೆಯ ಅಭಿವೃದ್ಧಿಗೂ ಒತ್ತು ಸಿಗಲಿದ್ದು, ಉಳ್ಳಾಲ – ಮಂಗಳೂರು ಮತ್ತಷ್ಟು ಹತ್ತಿರವಾಗುತ್ತದೆ. ಸಮುದ್ರದಿಂದ ಹತ್ತಿರದಲ್ಲೇ ಈ ಸೇತುವೆ ಇರುವುದರಿಂದ ಪ್ರವಾಸಿಗರು ಕೂಡ ಈ ಸೇತುವೆಯತ್ತ ಆಕರ್ಷಿಸುವ ಸಾಧ್ಯತೆಯಿದೆ. ಇದಲ್ಲದೆ, ಮಂಗಳೂರು- ಉಳ್ಳಾಲದ ನಡುವೆ ರಿಂಗ್ ರೋಡ್ ಆಗಿಯೂ ಹೊಸ ಖದರ್ ಮೂಡಿಸಲಿದೆ.

Approval for construction of another bridge to Netravati from Bunder to Kotepura Ullal says Khader. The cost of this project is estimated to 200 crores.