Mahesh Thimarodi, Sowjanya protest at Udupi: ಧರ್ಮವನ್ನು ಮಂಜುನಾಥ ಕಾಯುತ್ತಾನೆ, ಸತ್ಯವನ್ನು ಅಣ್ಣಪ್ಪ ಸ್ವಾಮೀ ಹೊರಗೆಳೆದೇ ತೀರುತ್ತಾನೆ ; ನಮ್ಮ ಹೋರಾಟ ಅತ್ಯಾಚಾರಿಗಳ ವಿರುದ್ಧ ಹೊರತು ಯಾವುದೇ ಕ್ಷೇತ್ರದ ವಿರುದ್ಧ ಅಲ್ಲ.. 

25-08-23 10:55 pm       Mangalore Correspondent   ಕರಾವಳಿ

ಸೌಜನ್ಯ ಅತ್ಯಾಚಾರಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಕುಂದಾಪುರದಲ್ಲಿ ಭಾರೀ ಸಂಖ್ಯೆಯ ಜನರ ಮುಂದೆ ಗರ್ಜನೆ ತೋರಿದ್ದಾರೆ.

ಉಡುಪಿ, ಆಗಸ್ಟ್ 25: ಸೌಜನ್ಯ ಅತ್ಯಾಚಾರಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಕುಂದಾಪುರದಲ್ಲಿ ಭಾರೀ ಸಂಖ್ಯೆಯ ಜನರ ಮುಂದೆ ಗರ್ಜನೆ ತೋರಿದ್ದಾರೆ. ಇದಕ್ಕೂ ಮುನ್ನ ಕೋಟ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಸೌಜನ್ಯ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ತಿಮರೋಡಿ, ನಿರಂತರ ಹೋರಾಟಗಳ ಮೂಲಕ ಸಮಾಜಕ್ಕೆ ಸತ್ಯವನ್ನು ತೋರಿಸುವ ಕೆಲಸ ಮಾಡುತ್ತಿದ್ದೇವೆ. 11 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ, ಅದೆಷ್ಟೋ ಘಟನೆಗಳು ಧರ್ಮಸ್ಥಳದಲ್ಲಿ ನಡೆದಿವೆ. ಹಾಗಾದರೆ ಇಂತಹ ಘಟನೆಗಳ ವಿರುದ್ಧ ಹೋರಾಟ ನಡೆಸುವುದೇ ತಪ್ಪಾ.. ನ್ಯಾಯ‌ ಕೇಳುವುದು ತಪ್ಪಾದರೆ ಈ ದೇಶದ ಕಾನೂನನ್ನು ಏಕೆ ಉಳಿಸಿಕೊಂಡಿದ್ದಾರೆ? 

ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಧರ್ಮ ವಿರೋಧಿ ಕೃತ್ಯಗಳನ್ನು ಕೆಲವರು ಮಾಡುತ್ತಿದ್ದಾರೆ. ಇದಕ್ಕೆಲ್ಲ ಪೂರ್ಣ ವಿರಾಮ ನೀಡಬೇಕಿದೆ. ಧರ್ಮವನ್ನು ಮಂಜುನಾಥ ಕಾಯುತ್ತಾನೆ, ಸತ್ಯವನ್ನು ಅಣ್ಣಪ್ಪ ಸ್ವಾಮೀ ಹೊರಗೆಳೆದೇ ತೀರುತ್ತಾನೆ. ಈ ರೀತಿಯ ನಂಬಿಕೆ ಮೇಲೆ ಹೋರಾಟದ ಕಾವು ಏರುತ್ತಿದೆ. ಅತ್ಯಾಚಾರಿಗಳ ರಕ್ಷಣೆ ಎಷ್ಟು ಸಮಂಜಸ ಎಂದು ಜನರು ಕೇಳುತ್ತಿದ್ದಾರೆ. ಇದರ ಹಿಂದೆ ಇರುವ ಕಾಣದ ಕೈಗಳು ಯಾರವು? ಇದು ಜಗತ್ತಿಗೆ ತಿಳಿಯಬೇಕಾಗಿದೆ. ಶತಮಾನಗಳಿಂದ ಭಕ್ತಿಯನ್ನು ಇಟ್ಟು ಬರುವ ಜನರ ಭಾವನೆಗಳ‌ ಮೇಲೆ ಅತ್ಯಾಚಾರ ಇಂದಿಗೂ ನಡೆಯುತ್ತಿದೆ.

ನಮ್ಮ ಹೋರಾಟ ಯಾವ ಧರ್ಮಾಧಿಕಾರಿಯ ವಿರುದ್ಧ ಅಲ್ಲ. ನೈಜ ಅತ್ಯಾಚಾರಿಗಳ ವಿರುದ್ಧವೇ ಹೊರತು ಯಾವ ಕ್ಷೇತ್ರದ ಮೇಲಲ್ಲ. ಅಲ್ಲಿನ ನ್ಯಾಯ ದೇವರ ಮುಖಕ್ಕೆ ಅಂಟಿದ ಕಳಂಕವನ್ನು ತೊಡೆದುಹಾಕಿ ಪಾವಿತ್ರತ್ಯೆಯನ್ನು ಉಳಿಸುವ ನಿಟ್ಟಿನಲ್ಲಿ ನಾವುಗಳು ಅಣಿಯಾಗಿದ್ದೇವೆ. ಆರೋಪಿಗಳನ್ನು ರಕ್ಷಣೆ ಮಾಡಿದವರಿಗೂ ಕಠಿಣ ಶಿಕ್ಷೆಯಾಗಬೇಕು. ಸರಕಾರದ ಮೇಲೆ ಭರವಸೆ ಇರಿಸಿದ್ದೇವೆ. ಸತ್ಯ ಯಾವತ್ತೂ ಕಹಿಯಾಗಿ ಇರುತ್ತದೆ. ನಾವು 11 ವರ್ಷದಿಂದ ಆಡಳಿತದಲ್ಲಿರುವರಿಗೆ ನ್ಯಾಯ ದೊರಕಿಸಲು ಕೇಳುತ್ತಿದ್ದೇವೆ.

ಆದರೆ ಅದು ಆಗಿಲ್ಲ‌. ದೇಶದ ಉನ್ನತ ತನಿಖಾ ಸಂಸ್ಥೆ ಸಂತೋಷ್ ರಾವ್ ನಿರ್ದೋಷಿ ಎಂದು ಪ್ರಕಟಿಸಿದೆ. ಪ್ರಸ್ತುತ ಸಂತೋಷ್ ರಾವ್ ಆರೋಪಿ ಅನ್ನುವವರು ಆರೋಪಿಗಳ‌ ಸಾಲಿನಲ್ಲಿ ಇದ್ದಾರೆ. ಹಾಗಾದರೆ ಅತ್ಯಾಚಾರಿಗಳು ಯಾರು? ನಮ್ಮ ಹೋರಾಟ ವೈಯುಕ್ತಿಕ ಇಲ್ಲ. ಸತ್ಯ ಹೊರ ಬಂದೇ ಬರುತ್ತದೆ. ಧರ್ಮ ಸ್ಥಾಪನೆಗೆ ಸಮಯ ನಿಗದಿಯಾಗಿದೆ ಎಂದು ತಿಮರೋಡಿ ಹೇಳಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ, ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಗಾಣಿಗ, ಮಾನವ ಹಕ್ಕುಗಳ ಆಯೋಗದ ಜೊತೆ ಕಾರ್ಯದರ್ಶಿ ನಾಗರಾಜ್ ಗಾಣಿಗ, ಹಿಂದು ಸಂಘಟನೆಯ ಯುವ ಮುಖಂಡ ಕೀರ್ತಿರಾಜ್,ಭರತ್ ಗಾಣಿಗ ಮೊದಲದವರು ಉಪಸ್ಥಿತರಿದ್ದರು.

Our fight is against accused not at any Temple says Mahesh Thimarodi, Sowjanya protest at Udupi.