Mangalore, Police, criminial escapes: ಪಾಂಡೇಶ್ವರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಬಾಗಲಕೋಟ ಮೂಲದ ನಟೋರಿಯಸ್‌ ಕ್ರಿಮಿನಲ್‌ ! ಪೊಲೀಸರ ಮೇಲೆ ಹಲ್ಲೆ ಮಾಡಿ ಹ್ಯಾಂಡ್‌ ಕಫ್‌ನೊಂದಿಗೆ ಪರಾರಿ, ಸಾರ್ವಜನಿಕರ ಸಹಕಾರ ಕೇಳಿದ ಖಾಕಿ !

27-06-26 10:54 am       HK News Staffer   ಕ್ರೈಂ

ಮಂಗಳೂರಿನಲ್ಲಿ ಪೊಲೀಸರನ್ನೇ ಬೆಚ್ಚಿಬೀಳಿಸುವಂತಹ ಸಿನಿಮೀಯ ಘಟನೆ ನಡೆದಿದ್ದು, ಬಂಧಿತನಾಗಿದ್ದ ಖತರ್ನಾಕ್ ಸರಗಳ್ಳನೊಬ್ಬ ಹ್ಯಾಂಡ್‌ಕಫ್‌ನೊಂದಿಗೇ ಐವರು ಪೊಲೀಸ್ ಸಿಬ್ಬಂದಿಯ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ನಾಗರದ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಪೊಲೀಸರನ್ನು ತಳ್ಳಿ ಪರಾರಿಯಾಗಿರುವ ಈತನಿಗಾಗಿ ನಗರಾದ್ಯಂತ ಬಲೆ ಬೀಸಲಾಗಿದ್ದು, ಬಂಧನಕ್ಕೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.

ಮಂಗಳೂರು, ಜೂನ್ 27:  ಮಂಗಳೂರಿನಲ್ಲಿ ಪೊಲೀಸರನ್ನೇ ಬೆಚ್ಚಿಬೀಳಿಸುವಂತಹ ಸಿನಿಮೀಯ ಘಟನೆ ನಡೆದಿದ್ದು, ಬಂಧಿತನಾಗಿದ್ದ ಖತರ್ನಾಕ್ ಸರಗಳ್ಳನೊಬ್ಬ ಹ್ಯಾಂಡ್‌ಕಫ್‌ನೊಂದಿಗೇ ಪಾಂಡೇಶ್ವರದ ಐವರು ಪೊಲೀಸ್ ಸಿಬ್ಬಂದಿಯ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ನಾಗರದ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಪೊಲೀಸರನ್ನು ತಳ್ಳಿ ಪರಾರಿಯಾಗಿರುವ ಈತನಿಗಾಗಿ ನಗರಾದ್ಯಂತ ಬಲೆ ಬೀಸಲಾಗಿದ್ದು, ಬಂಧನಕ್ಕೆ ಸಾರ್ವಜನಿಕರ ಸಹಕಾರ ಕೋರಲಾಗಿದೆ.

ಪರಾರಿಯಾಗಿರುವ ಆರೋಪಿ ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಎನ್ನಲಾಗಿದೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರ ಎಂಬ ಇಬ್ಬರು ಸಹಚರರೊಂದಿಗೆ ಸೇರಿ ವಾಹನ ಕಳ್ಳತನ, ಸರಗಳ್ಳತನ ಹಾಗೂ ಸುಲಿಗೆ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಈತನ ವಿರುದ್ಧ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಮಂಗಳೂರಿನ ಜಪ್ಪಿನಮೊಗರು ಸರಗಳ್ಳತನ ಪ್ರಕರಣದ ತನಿಖೆ ನಡೆಸುತ್ತಿದ್ದ ಪಾಂಡೇಶ್ವರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಅಲ್ತಾಫ್ ಹುಸೇನ್ ಗ್ಯಾಂಗ್ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಕೃತ್ಯ ಎಸಗಿದ ಬಳಿಕ ಗ್ಯಾಂಗ್ ನಗರ ಬಿಟ್ಟು ಪರಾರಿಯಾಗಿದ್ದರೂ, ಅವರು ಮಂಗಳೂರಿನ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಬಂದಿರುವ ಮಾಹಿತಿ ಪೊಲೀಸರಿಗೆ ದೊರಕಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಅಲ್ತಾಫ್ ಹುಸೇನ್, ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರರನ್ನು ಬಂಧಿಸಿ ಠಾಣೆಗೆ ಕರೆತರುತ್ತಿದ್ದರು.

ಬಂಧಿತ ಆರೋಪಿಗಳನ್ನು ಪಾಂಡೇಶ್ವರ ಠಾಣೆಗೆ ಕರೆತರುತ್ತಿದ್ದ ವೇಳೆ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಅಲ್ತಾಫ್ ಹುಸೇನ್ ಏಕಾಏಕಿ ಪೊಲೀಸರನ್ನು ತಳ್ಳಿ ಹಲ್ಲೆ ಮಾಡಿ, ಕೈಗೆ ಹ್ಯಾಂಡ್‌ಕಫ್ ಇದ್ದ ಸ್ಥಿತಿಯಲ್ಲೇ ಓಡಿ ಪರಾರಿಯಾಗಿದ್ದಾನೆ. ಈ ವೇಳೆ ಆತನ ಸಹಚರರಾದ ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರ ಕೂಡ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ಐವರು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟು ಇಬ್ಬರನ್ನೂ ಮತ್ತೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಅಲ್ತಾಫ್ ಹುಸೇನ್ ಮಾತ್ರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. 

ಸಿಸಿಟಿವಿಯಲ್ಲಿ ಪರಾರಿ ದೃಶ್ಯ ಸೆರೆ ;

ಅಲ್ತಾಫ್ ಪರಾರಿಯಾಗುತ್ತಿರುವ ಸಂಪೂರ್ಣ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ಆಧಾರದಲ್ಲಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತನಿಗಾಗಿ ಬಲೆ ಬೀಸಿದ್ದಾರೆ.

ಆರೋಪಿ ಅಲ್ತಾಫ್ ಹಾಗೂ ಗ್ಯಾಂಗ್ ವಿರುದ್ಧ ಮಂಗಳೂರು, ಹೈದರಾಬಾದ್, ಬಾಗಲಕೋಟೆ, ಗದಗ ಸೇರಿದಂತೆ ವಿವಿಧ ನಗರಗಳಲ್ಲಿ ವಾಹನ ಕಳ್ಳತನ, ಸರಗಳ್ಳತನ ಹಾಗೂ ಸುಲಿಗೆ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಾರ್ವಜನಿಕರಿಗೆ ಪೊಲೀಸರ ಮನವಿ;

ಪರಾರಿಯಾಗಿರುವ ಅಲ್ತಾಫ್ ಬಂಧನಕ್ಕಾಗಿ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ. ಈತನ ಬಗ್ಗೆ ಯಾವುದೇ ಸುಳಿವು ದೊರೆತರೆ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.