ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್ ಈಶ್ವರ್ ಕಾರಿನ ಮೇಲೆ ಚಪ್ಪಲಿ ಎಸೆತ, ರೂಫ್‌ಟಾಪ್ ಏರಿ ಮೀಸೆ ತಿರುಗಿಸಿ ಓಪನ್ ಚಾಲೆಂಜ್ ಹಾಕಿದ ಶಾಸಕ

27-06-26 08:31 pm       HK News Staffer   ಕರ್ನಾಟಕ

ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗ ಮುಖಂಡರು ಹಾಗೂ ಹೆಚ್‌.ಡಿ. ಕುಮಾರಸ್ವಾಮಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ, ಜೂನ್ 27: ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿದ್ದು, ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗ ಮುಖಂಡರು ಹಾಗೂ ಹೆಚ್‌.ಡಿ. ಕುಮಾರಸ್ವಾಮಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕಾರ್ಯಕ್ರಮ ಮುಗಿದ ಬಳಿಕ ಶಾಸಕನ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ಗಲಾಟೆ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆಯೇ ಪ್ರದೀಪ್ ಈಶ್ವರ್ ಕಾರಿನ ರೂಫ್‌ಟಾಪ್ ಏರಿ ತೊಡೆತಟ್ಟಿ, ಮೀಸೆ ತಿರುಗಿಸಿ ಸವಾಲು ಹಾಕಿದರು. ಇದರಿಂದ ಮತ್ತಷ್ಟು ಕೆರಳಿದ ಕೆಲವರು ಪ್ರದೀಪ್‌ ಈಶ್ವರ್‌ ಕಾರಿನ ಮೇಲೆ ಚಪ್ಪಲಿ ಎಸೆದು ಆಕ್ರೋಶ ಹೊರಹಾಕಿದರು.

ನಗರದ ಕನ್ನಡ ಭವನದಲ್ಲಿ ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಬೆಳಗ್ಗಿನಿಂದಲೇ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಒಕ್ಕಲಿಗ ಮುಖಂಡರು ಹಾಗೂ ಹೆಚ್‌.ಡಿ. ಕುಮಾರಸ್ವಾಮಿ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದರು. ಕುಮಾರಸ್ವಾಮಿ ವಿರುದ್ಧ ಶಾಸಕ ನಿರಂತರವಾಗಿ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗಿತ್ತು.

ಕಾರ್ಯಕ್ರಮ ಮುಗಿದ ಬಳಿಕ ಪ್ರದೀಪ್ ಈಶ್ವರ್ ಕಾರಿನಲ್ಲಿ ಸ್ಥಳದಿಂದ ತೆರಳಲು ಮುಂದಾದಾಗ ಪ್ರತಿಭಟನಾಕಾರರು ಕಾರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಶಾಸಕ ಕಾರಿನ ರೂಫ್‌ಟಾಪ್ ಮೇಲೆ ಏರಿ ನಿಂತು ಮೀಸೆ ತಿರುಗಿಸಿ, ತೊಡೆ ತಟ್ಟಿ ಪ್ರತಿಭಟನಾಕಾರರಿಗೆ ಪ್ರತಿಸವಾಲು ಹಾಕಿದರು. ಇದರಿಂದ ಕೋಪಗೊಂಡ ಪ್ರತಿಭಟನಾಕಾರರು "ಹುಚ್ಚ... ಹುಚ್ಚ..." ಎಂದು ಘೋಷಣೆ ಕೂಗುತ್ತಾ ಧಿಕ್ಕಾರ ವ್ಯಕ್ತಪಡಿಸಿದರು.

ಶಾಸಕ ಮತ್ತೆ ಕಾರಿನೊಳಗೆ ಇಳಿದು ತೆರಳಲು ಮುಂದಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳು ಕಾರಿನ ಮೇಲೆ ಚಪ್ಪಲಿ ಎಸೆದರು. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಚಪ್ಪಲಿ ಎಸೆದ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ ಪ್ರತಿಭಟನಾಕಾರರು ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪೊಲೀಸರನ್ನು ತಡೆದ ಪರಿಣಾಮ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆಯಿತು. ಹೆಚ್ಚುವರಿ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು.

ಘಟನೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಹೆಚ್‌.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಕುಮಾರಣ್ಣ, ನಿನ್ನ ಚೇಲಾಗಳಿಗೆ ಹೆದರುವ ಮಗ ನಾನು ಅಲ್ಲ. ತಾಕತ್ತಿದ್ದರೆ ನೀನೇ ಚಿಕ್ಕಬಳ್ಳಾಪುರಕ್ಕೆ ಬಂದು ನಿಂತುಕೋ. ಬೇರೆಯವರ ಕೈಯಲ್ಲಿ ಸವಾಲು ಹಾಕಿಸುವುದು ಬೇಡ. ನಾನು ಒಕ್ಕಲಿಗ ನಾಯಕ ಡಿ.ಕೆ. ಶಿವಕುಮಾರ್ ಪರವಾಗಿ ನಿಂತಿದ್ದೇನೆ. ನನಗೆ ಯಾರ ಭಯವೂ ಇಲ್ಲ" ಎಂದು ನೇರ ಸವಾಲು ಹಾಕಿದರು.

ಇದೇ ವೇಳೆ ಒಕ್ಕಲಿಗ ಸಮುದಾಯದ ಕೆಲವು ಮುಖಂಡರ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, "ನನ್ನ ತಾಯಿ ಬಗ್ಗೆ ಮಾತನಾಡುತ್ತಾರೆ, ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ನಾವು ಯಾವಾಗಲೂ ನಿಮ್ಮ ಮನೆ ಆಳುಗಳಾಗಿ ಬದುಕಬೇಕಾ?" ಎಂದು ಪ್ರಶ್ನಿಸಿದರು.

ಕೆಂಪೇಗೌಡ ದಿನಾಚರಣೆ ವೇಳೆ ಆರಂಭವಾದ ಈ ರಾಜಕೀಯ ಸಂಘರ್ಷ, ಕಾರಿಗೆ ಮುತ್ತಿಗೆ, ಚಪ್ಪಲಿ ಎಸೆತ, ರೂಫ್‌ಟಾಪ್ ಮೇಲೆ ನಿಂತು ಮೀಸೆ ತಿರುಗಿಸಿದ ಶಾಸಕನ ನಡೆ ಹಾಗೂ ನಂತರದ ಮಾತಿನ ಸಮರದಿಂದ ಚಿಕ್ಕಬಳ್ಳಾಪುರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.