ಚಂದ್ರಯಾನ ಯಶಸ್ಸಿನಲ್ಲಿ ಕರಾವಳಿಯ ಸಾಧಕರು ; ಸುಳ್ಯದ ಮೂವರು, ಪುತ್ತೂರು, ಉಡುಪಿ, ಕುಂದಾಪುರದ ವಿಜ್ಞಾನಿಗಳ ಕೊಡುಗೆ

25-08-23 09:40 pm       Mangalore Correspondent   ಕರಾವಳಿ

ಚಂದ್ರಯಾನದ ಮೂಲಕ ಇಸ್ರೋ ವಿಜ್ಞಾನಿಗಳು ಯಾರೂ ಮಾಡಿರದ ವಿಕ್ರಮ ಸಾಧಿಸಿದ್ದಾರೆ. ಇದಕ್ಕಾಗಿ ದೇಶದ ಮೂಲೆ ಮೂಲೆಯ ನೂರಾರು ವಿಜ್ಞಾನಿಗಳು, ಇಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ.

ಮಂಗಳೂರು, ಆಗಸ್ಟ್ 25: ಚಂದ್ರಯಾನದ ಮೂಲಕ ಇಸ್ರೋ ವಿಜ್ಞಾನಿಗಳು ಯಾರೂ ಮಾಡಿರದ ವಿಕ್ರಮ ಸಾಧಿಸಿದ್ದಾರೆ. ಇದಕ್ಕಾಗಿ ದೇಶದ ಮೂಲೆ ಮೂಲೆಯ ನೂರಾರು ವಿಜ್ಞಾನಿಗಳು, ಇಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ. ಇವರ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೂವರು ಸೇರಿದಂತೆ ಕರಾವಳಿಯ 11 ವಿಜ್ಞಾನಿಗಳಿದ್ದಾರೆ ಎನ್ನುವುದು ನಮ್ಮ ಹೆಮ್ಮೆ.
 
ಸುಳ್ಯ ತಾಲೂಕಿನ ದುಗ್ಗಲಡ್ಕಡ ಮಾನಸ ಜಯಕುಮಾರ್, ರ್ಉಬರಡ್ಕದ ವೇಣುಗೋಪಾಲ್, ನೆಲ್ಲೂರು ಕೆಮ್ರಾಜೆ ಗ್ರಾಮದ ಶಂಭಯ್ಯ ಎಂಬ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಾನಸ, ಮಂಗಳೂರು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದರು. ಅಲ್ಲಿರುವಾಗಲೇ ಗುಜರಾತಿನ ಅಹಮದಾಬಾದ್ನಲ್ಲಿ ನಡೆದ ಚಂದ್ರಯಾನ -3 ಕುರಿತ ಪ್ರಾಜೆಕ್ಟ್ ವರ್ಕ್ ಶಾಪ್‌ನಲ್ಲಿ ಭಾಗವಹಿಸಿದ್ದರು. ಆ್ಯಂಟೆನಾ ತಯಾರಿಕೆಯ ಐವರಲ್ಲಿ ಮಾನಸ ಕೂಡ ಒಬ್ಬರು. ಸುಳ್ಯದ ಮಂಡೆಕೋಲು ಶಾಲೆಯಲ್ಲಿ ಪ್ರಾಥಮಿಕ, ಅಜ್ಜಾವರದಲ್ಲಿ ಪ್ರೌಢ ಶಿಕ್ಷಣ, ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ, ಮಂಗಳೂರು‌ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.
 
ಇಸ್ರೋದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿರುವ ಉಬರಡ್ಕ ನಿವಾಸಿ ವೇಣುಗೋಪಾಲ್ ಟೀಂ ಸ್ಯಾಟ್‌ಲೈಟ್ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಸುಳ್ಯದಲ್ಲಿ ಪಾಲಿಟೆಕ್ನಿಕ್ ಪೂರೈಸಿ ಬೆಂಗಳೂರಿನಲ್ಲಿ ಬಿಇ, ಎಂಇ ಶಿಕ್ಷಣ ಪಡೆದು, ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ. ನೆಲ್ಲೂರು ಕೆಮ್ರಾಜೆಯ ಶಂಭಯ್ಯ ಅವರು ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ಚಂದ್ರಯಾನ ಮಿಷನ್‌ನಲ್ಲಿ ಯೂನಿಟ್ ಹೆಡ್ ಆಗಿದ್ದರು. ಬೊಳ್ಳಾಜೆಯಲ್ಲಿ ಪ್ರಾಥಮಿಕ ಶಿಕ್ಷಣ, ಅಳಿಕೆ ಸತ್ಯಸಾಯಿ ಸಂಸ್ಥೆಯಲ್ಲಿ ಪ್ರೌಢ, ಮೈಸೂರಿನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರೈಸಿ ಇಸ್ರೋದಲ್ಲಿ 34 ವರ್ಷಗಳಿಂದ ವಿಜ್ಞಾನಿಯಾಗಿದ್ದಾರೆ.

Shivaprasad KARANTH | Scientist | Indian Space Research Organization,  Bengaluru | ISRO | Mems & detector | Research profile
 
ಪುತ್ತೂರು ತಾಲೂಕಿನ ಇಬ್ಬರು ಸಾಧಕರು
 
ಉಪ್ಪಿನಂಗಡಿಯ ಶಿವಪ್ರಸಾದ್ ಕಾರಂತ್ ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ಗೋಳಿತ್ತೊಟ್ಟು ಗ್ರಾಮದ ಕಾಂಚನ ನಿವಾಸಿ. ಪರಮೇಶ್ವರ ಕಾರಂತ ಮತ್ತು ರಮಾದೇವಿ ಅವರ ಪುತ್ರನಾದ ಇವರು ತನ್ನ ಪ್ರಾಥಮಿಕ ಶಿಕ್ಷಣ ಕಾಂಚನದ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾಂಚನದ ವೆಂಕಟಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ಪ್ರೌಢ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪೂರೈಸಿದ್ದರು. ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಂಟೆಕ್ ಪೂರೈಸಿ ಇಸ್ರೋ ಸೇರಿದ್ದರು.
 
ಪುತ್ತೂರಿನ ರಾಧಾಕೃಷ್ಣ ವಾಟೆಡ್ಕ ಎಂಟು ವರ್ಷಗಳಿಂದ ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿ. ಪುತ್ತೂರು ತಾಲೂಕಿನ ವಾಟೆಡ್ಕ ನಿವಾಸಿ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಆರ್ಲಪದವು ಶಾಲೆಯಲ್ಲಿ, ಪದವಿಪೂರ್ವ ಶಿಕ್ಷಣವನ್ನು ಉಜಿರೆ ಎಸ್‌ಡಿಎಂ ಕಾಲೇಜು, ಮಂಗಳೂರಿನ ಅಲೋಶಿಯಸ್‌ ನಲ್ಲಿ ಪದವಿ, ಮಂಗಳೂರು ವಿವಿಯಲ್ಲಿ ಎಂಎಸ್ಸಿ ಪೂರೈಸಿದ್ದರು. ಬೆಂಗಳೂರಿನ ಐಐಎಸ್ಸಿಯಲ್ಲಿ ಪಿಹೆಚ್‌ಡಿ ಮಾಡಿ ಇಸ್ರೋಗೆ ಸೇರಿದ್ದರು. ಯುವಿ ಫೋಟೋನ್‌ ಡಿಟೆಕ್ಟರ್‌ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ಇವರು ಚಂದ್ರಯಾನ-2ರ ತಂಡದಲ್ಲೂ ಕೆಲಸ ನಿರ್ವಹಿಸಿದ್ದರು.

Chandrayaan-3 ಯಶಸ್ಸಿನಲ್ಲಿ ಧರ್ಮಸ್ಥಳದ ಪಿ.ವಾಸುದೇವ ರಾವ್‌ - NESARANEWSWORLD
 
ಬೆಳ್ತಂಗಡಿ ತಾಲೂಕಿನ ವಾಸುದೇವ ರಾವ್
 
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕನ್ಯಾಡಿ ಗ್ರಾಮದ ವಾಸುದೇವ ರಾವ್‌ ಇಸ್ರೋದಲ್ಲಿ ಹಿರಿಯ ವಿಜ್ಞಾನಿ. ಚಂದ್ರಯಾನದ ಉಪಗ್ರಹ ಹೊತ್ತೊಯ್ಯುವ ರಾಕೆಟ್‌ ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದರ ಬಿಡಿ ಭಾಗವನ್ನು ಬೆಂಗಳೂರು ಹೆಚ್‌ಎಎಲ್‌ನಲ್ಲಿ ಸಿದ್ಧಪಡಿಸಿದ್ದರಲ್ಲಿ ಮಹತ್ವದ ಪಾತ್ರ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ, ಉಜಿರೆ ಎಸ್‌ಡಿಎಂನಲ್ಲಿ ಪಿಯುಸಿ, ಮಂಗಳೂರು ಕೆಪಿಟಿಯಲ್ಲಿ ಡಿಪ್ಲೊಮಾ, ಮಂಡ್ಯ ಡಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಜ್ಯಕ್ಕೆ 6ನೇ ರ್‍ಯಾಂಕ್‌ ಪಡೆದು ಇಸ್ರೋದ ತಿರುವನಂತಪುರಂ ಕಚೇರಿಗೆ ನೇಮಕಗೊಂಡಿದ್ದರು. ಸುದೀರ್ಘ 32 ವರ್ಷ ಸೇವೆ ಬಳಿಕ ಇದೇ ಆಗಸ್ಟ್ ನಲ್ಲಿ ನಿವೃತ್ತರಾಗಲಿದ್ದಾರೆ.
 
ಉಡುಪಿ ಮೂಲದ ಇಬ್ಬರು ಸಾಧಕರ ಕೊಡುಗೆ  
 
ಉಡುಪಿ ಜಿಲ್ಲೆಯ ಸಾಲಿಗ್ರಾಮ ಪೆರಂಪಳ್ಳಿಯ ಸೌಭಾಗ್ಯ ಐತಾಳ್, ಇಸ್ರೋ ಸಂಸ್ಥೆಯ ಯುವ ವಿಜ್ಞಾನಿ. ಪ್ರಾಥಮಿಕ ಶಿಕ್ಷಣವನ್ನು ಚಿತ್ರಪಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ, ಪ್ರೌಢ ಮತ್ತು ಪ.ಪೂ. ಶಿಕ್ಷಣವನ್ನು ಕೋಟ ಬಾಲಕಿಯರ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ, ಮಣಿಪಾಲ ಎಂಐಟಿಯಲ್ಲಿ ಎಂಜಿನಿಯರಿಂಗ್‌, ರಾಜಸ್ಥಾನದ ಬಿರ್ಲಾ ಇನ್‌ ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಎಂಟೆಕ್‌ ಪದವಿ ಪಡೆದಿದ್ದಾರೆ. ಚಂದ್ರಯಾನದ ವಿಕ್ರಮ್‌ ಲ್ಯಾಂಡರ್‌ ತಯಾರಿಸಿದ ವಿಜ್ಞಾನಿಗಳಲ್ಲಿ ಬಾರಕೂರು ಮೂಲದ ಸುಬ್ರಹ್ಮಣ್ಯ ಉಡುಪ ಕೂಡ ಒಬ್ಬರು. ಇಸ್ರೋ ಸಂಸ್ಥೆಯಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿದ್ದಾರೆ. ಚಂದ್ರಯಾನ-2 ಮತ್ತು 3ರಲ್ಲಿ ತಂತ್ರಜ್ಞರಾಗಿದ್ದರು. ಇವರು ತೀರ್ಥಹಳ್ಳಿ ಅರಳಸುರಳಿಯ ನಿವೃತ್ತ ಶಿಕ್ಷಕ ಗೋವಿಂದ ರಾಮ ಹಾಗೂ ಶಾರದಾ ಉಡುಪ ದಂಪತಿಯ ಪುತ್ರ.
 
ಕುಂದಾಪುರದ ಇಬ್ಬರು ವಿಜ್ಞಾನಿಗಳು ಸಾಥ್‌
 
ಕುಂದಾಪುರ ತಾಲೂಕಿನ ಇಬ್ಬರು ವಿಜ್ಞಾನಿಗಳ ಕೊಡುಗೆ ಚಂದ್ರಯಾನಕ್ಕಿದೆ. ಗುಜ್ಜಾಡಿ ಮಂಕಿಯ ಆಕಾಶ್‌ ಶೆಟ್ಟಿ ಹಾಗೂ ಕೆರಾಡಿ ಗ್ರಾಮದ ರಮೇಶ್‌ ಆಚಾರ್ಯ ಕುಂದಾಪುರ ತಾಲೂಕಿನವರು. ಮಂಕಿ ಕೇಳಾಮನೆ ಪಾರ್ವತಿ ಶೆಟ್ಟಿ -ದಿ. ಅಶೋಕ ಶೆಟ್ಟಿ ದಂಪತಿ ಪುತ್ರನಾಗಿರುವ ಆಕಾಶ್, ಭಟ್ಕಳದ ನ್ಯೂ ಇಂಗ್ಲಿಷ್‌ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕೋಟ ವಿವೇಕ ಪ.ಪೂ. ಕಾಲೇಜಿನಲ್ಲಿ ಪಿಯುಸಿ, ಹಾಸನದ ಮಲ್ನಾಡ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಟೆಕ್‌ ಮುಗಿಸಿ, 2015ರಲ್ಲಿ ಇಸ್ರೋಗೆ ಸೇರಿದ್ದರು. ಕೆರಾಡಿ ಗ್ರಾಮದ ಬೆಳ್ಳಾಲ ಮಂಜುನಾಥ ಆಚಾರ್ಯ ಮತ್ತು ಗಿರಿಜಾ ಆಚಾರ್ಯ ದಂಪತಿ ಪುತ್ರ ರಮೇಶ್, 2012ರಲ್ಲಿ ಇಸ್ರೋಗೆ ಸೇರಿದ್ದು, ಬೆಂಗಳೂರಿನಲ್ಲಿದ್ದಾರೆ. ಇಸ್ರೋದಲ್ಲಿ ಇಸ್ಟ್ರಾಕ್‌ ಪ್ರಮುಖ ವಿಭಾಗವಾಗಿದ್ದು, ಚಂದ್ರನಿಂದ ಬರುವ ಡೇಟಾಗಳನ್ನು ಪಡೆದು ವಿಶ್ಲೇಷಿಸುವುದು ಕೆಲಸವಾಗಿದೆ.

കൃഷ്ണമോഹൻ: ചന്ദ്രയാൻ 3ൽ കാസർകോടിന്റെ സ്പർശം; ജില്ലയ്ക്കും ആവേശമായി  അമ്പിളിമുത്തം | Chandrayaan 3 | Chandrayaan 3 Landing | Chandrayaan 3  Latest Update | Chandrayaan 3 Launch ...
 
ಕಾಸರಗೋಡು ಜಿಲ್ಲೆಯ ಕೃಷ್ಣಮೋಹನ

ಗಡಿಭಾಗ ಕಾಸರಗೋಡು ಜಿಲ್ಲೆಯ ಚೆಂಗಳದ ದಿ.ವಿಷ್ಣು ಶ್ಯಾನುಭೋಗ್‌ ಮತ್ತು ಪ್ರೇಮಾವತಿ ದಂಪತಿಯ ಪುತ್ರ ಕೃಷ್ಣಮೋಹನ ಚಂದ್ರಯಾನಕ್ಕೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳಲ್ಲಿ ಒಬ್ಬರು. ಕಾಸರಗೋಡಿನ ಬಿಇಎಂ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ, ಬಿ.ಟೆಕ್‌. ಶಿಕ್ಷಣವನ್ನು ಭೋಪಾಲದಲ್ಲಿ, ಸುರತ್ಕಲ್‌ನ ಎನ್ಐಟಿಕೆಯಲ್ಲಿ ಎಂಟೆಕ್ ಗಳಿಸಿದ್ದರು. ಇಸ್ರೋದ ತಿರುವನಂತಪುರದ ಘಟಕದಲ್ಲಿ ಉದ್ಯೋಗ ಸೇರಿದ್ದು ಚಂದ್ರಯಾನ ಸಿದ್ಧತೆಗಾಗಿ ಬೆಂಗಳೂರು ಘಟಕಕ್ಕೆ ಬಂದಿದ್ದರು.

Scientists from Dakshina Kannada Udupi and Kasaragod Contribute to Chandrayaan 3s Success.