ನ್ಯಾಯಾಲಯ ಕಟ್ಟಡದ ಮುಖ್ಯ ದ್ವಾರದಲ್ಲಿ ವಕೀಲರಿಗೆ ನಿರ್ಬಂಧ ; ನ್ಯಾಯಾಧೀಶರಿಗೆ ಮಾತ್ರ ಎಂದು ಬೋರ್ಡ್ ! ವಕೀಲರ ಸಂಘದ ಆಕ್ಷೇಪ 

16-10-22 04:48 pm       Mangalore Correspondent   ಕರಾವಳಿ

ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ದ್ವಾರದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಲಯ ಸಿಬಂದಿಗೆ ಮಾತ್ರ ಪ್ರವೇಶ ಎಂದು ಬೋರ್ಡ್ ಹಾಕಲಾಗಿದೆ.

ಮಂಗಳೂರು, ಅ.16 : ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ದ್ವಾರದಲ್ಲಿ ನ್ಯಾಯಾಧೀಶರು ಮತ್ತು ನ್ಯಾಯಾಲಯ ಸಿಬಂದಿಗೆ ಮಾತ್ರ ಪ್ರವೇಶ ಎಂದು ಬೋರ್ಡ್ ಹಾಕಲಾಗಿದೆ. ಈ ಬಗ್ಗೆ ವಕೀಲರ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. 

ನ್ಯಾಯಾಲಯ ಕಟ್ಟಡವು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಹೊಂದಿರುವ ಕಟ್ಟಡವಾಗಿದ್ದರೂ ಜಿಲ್ಲಾ ನ್ಯಾಯಾಧೀಶರು ಜಿಲ್ಲಾ ನ್ಯಾಯಾಲಯದ ಸಂಕೀರ್ಣದ ಮುಖ್ಯ ದ್ವಾರವನ್ನು ಕೇವಲ ನ್ಯಾಯಾಧೀಶರಿಗೆ ಮಾತ್ರ ಪ್ರವೇಶ ಎನ್ನುವ ನಿರ್ಬಂಧ ಹಾಕಿರುವುದು ವಕೀಲ ಸಮುದಾಯದಲ್ಲಿ ಅಸಮಾಧಾನ ತರಿಸಿದೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯವಾದಿಗಳಿಗೂ ಪ್ರವೇಶ ನಿರ್ಬಂಧಿಸಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ‌

ಈ ಬಗ್ಗೆ ಶನಿವಾರ ಕಟ್ಟಡದ ಮುಂಭಾಗದ ಪ್ರಮುಖ ದ್ವಾರದಲ್ಲಿ ಈ ರೀತಿ ಬೋರ್ಡ್ ಹಾಕಿರುವುದು ತಿಳಿಯುತ್ತಿದ್ದಂತೆ ವಕೀಲರ ಸಂಘದ ಪ್ರತಿನಿಧಿಗಳು ಮುಖ್ಯ ನ್ಯಾಯಾಧೀಶರನ್ನು ಭೇಟಿಯಾಗಿದ್ದಾರೆ. ಭದ್ರತೆ ಸಲುವಾಗಿ ಈ ರೀತಿಯ ನಿರ್ಣಯ ಮಾಡಲಾಗಿದೆ. ಅದನ್ನು ನೀವು ಪ್ರಶ್ನೆ ಮಾಡುವಂತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆಂದು ವಕೀಲರ ಸಂಘದ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ತಿಳಿಸಿದ್ದಾರೆ. 

ಈ ಬಗ್ಗೆ ಅ.18ರಂದು ವಕೀಲರ ಸಂಘದ ಎಲ್ಲ ಸದಸ್ಯರ ಸಭೆಯನ್ನು ಕರೆಯಲಾಗಿದ್ದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ವಕೀಲರು ನ್ಯಾಯಾಂಗದ ಭಾಗ ಆಗಿರುವಾಗ 30 ಮಂದಿ ನ್ಯಾಯಾಧೀಶರ ಸಲುವಾಗಿ ಮುಖ್ಯ ಪ್ರವೇಶವನ್ನೇ ನಿರ್ಬಂಧಿಸಿದ್ದು ಸರಿಯಲ್ಲ. ಈ ರೀತಿ ನಿರ್ಣಯ ಯಾಕೆ ಕೈಗೊಂಡಿದ್ದಾರೆ ಎನ್ನುವುದೂ ಸ್ಪಷ್ಟವಾಗಿಲ್ಲ. ವಕೀಲರು, ಸಾರ್ವಜನಿಕರಿಗೂ ನ್ಯಾಯಾಲಯ ಪ್ರವೇಶಕ್ಕೆ ಬೇರೆ ಬಾಗಿಲು ಮಾಡುತ್ತಾರೆಯೇ ಎಂದವರು ಪ್ರಶ್ನಿಸಿದ್ದಾರೆ.

Mangalore Lawyers go angry after the court main door reserved only for Judicial officers only and not for any advocates.