ಮರಗಳ ಅಕ್ರಮ‌ ಮಾರಾಟ, ರೈತರ ಕುಮ್ಕಿ ಜಾಗಕ್ಕೂ ಕನ್ನ ಹಾಕಿದ ಮುನ್ನೂರು ಗ್ರಾಪಂ ; ಕಿಸಾನ್ ಸಂಘ ಪ್ರತಿಭಟನೆ 

15-10-22 09:52 pm       Mangalore Correspondent   ಕರಾವಳಿ

ಮುನ್ನೂರು ಗ್ರಾಮ ಪಂಚಾಯತ್ ಆಡಳಿತದಲ್ಲಿ ಅವ್ಯವಹಾರಗಳೇ ತುಂಬಿದ್ದು, ಭಂಡಾರಬೈಲು ಸಮೀಪ ಅಕ್ರಮವಾಗಿ ಮರ ಕಡಿದು ಮಾರಾಟ ಮಾಡಿದ್ದಲ್ಲದೆ ರೈತರ ಕುಮ್ಕಿ ಜಾಗದ ಕುರಿತಾಗಿ ಸರಿಯಾದ ಕಾನೂನು ಜಾರಿ ಬರೋದಕ್ಕೂ ಮುನ್ನವೇ ರೈತರೊಬ್ಬರ ಕುಮ್ಕಿ ಜಾಗವನ್ನು ಸರಕಾರಿ ಜಾಗ ಎಂದು ಅತಿಕ್ರಮಣ ಮಾಡಿದ್ದು ಅಪರಾಧಿಗಳಿಗೆ ಕಾನೂನು ಪ್ರಕಾರ ತಕ್ಕ ಶಾಸ್ತಿ ಆಗುವ ತನಕ ಹೋರಾಟ ನಿಲ್ಲದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು. 

ಉಳ್ಳಾಲ, ಅ.15 : ಮುನ್ನೂರು ಗ್ರಾಮ ಪಂಚಾಯತ್ ಆಡಳಿತದಲ್ಲಿ ಅವ್ಯವಹಾರಗಳೇ ತುಂಬಿದ್ದು, ಭಂಡಾರಬೈಲು ಸಮೀಪ ಅಕ್ರಮವಾಗಿ ಮರ ಕಡಿದು ಮಾರಾಟ ಮಾಡಿದ್ದಲ್ಲದೆ ರೈತರ ಕುಮ್ಕಿ ಜಾಗದ ಕುರಿತಾಗಿ ಸರಿಯಾದ ಕಾನೂನು ಜಾರಿ ಬರೋದಕ್ಕೂ ಮುನ್ನವೇ ರೈತರೊಬ್ಬರ ಕುಮ್ಕಿ ಜಾಗವನ್ನು ಸರಕಾರಿ ಜಾಗ ಎಂದು ಅತಿಕ್ರಮಣ ಮಾಡಿದ್ದು ಅಪರಾಧಿಗಳಿಗೆ ಕಾನೂನು ಪ್ರಕಾರ ತಕ್ಕ ಶಾಸ್ತಿ ಆಗುವ ತನಕ ಹೋರಾಟ ನಿಲ್ಲದು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ ಹೇಳಿದರು. 

ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮ ಪಂಚಾಯತ್ ಆಡಳಿತವು ರೈತ ವಿರೋಧಿ ಆಡಳಿತ ನಡೆಸುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಭ್ರಷ್ಟರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಉಳ್ಳಾಲ ಘಟಕದ ವತಿಯಿಂದ ಮುನ್ನೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಶನಿವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ರೈತರು ಒಗ್ಗಟ್ಟಾಗಿ ಜಾಗೃತರಾಬೇಕು. ಪರಿಸ್ಥಿತಿ‌ ಹೇಗಿದೆ ಎಂದರೆ ಈ ಭ್ರಷ್ಟರಿಂದಾಗಿ ನಮ್ಮ ಭೂಮಿಯನ್ನು ಉಳಿಸಲು ನಾವು ಹೋರಾಟ ಮಾಡುವಂತಾಗಿದೆ ಎಂದರು. ಪಂಚಾಯತ್ ಅಧಿಕಾರಿಗಳಿಗೆ ಆರೋಗ್ಯ ಕೆಟ್ಟರೆ ಅವರ ಆಸ್ಪತ್ರೆ ಖರ್ಚನ್ನು ಸರಕಾರ ಭರಿಸುತ್ತದೆ, ಆದರೆ ದೇಶದ ಜನತೆಯ ಹೊಟ್ಟೆ ತುಂಬಿಸುವ ರೈತನ ಗೋಳನ್ನು ಯಾರಲ್ಲಿ ಹೇಳೋದು ಎಂದು ಪ್ರಶ್ನಿಸಿದರು. 

ರೈತರ ಕುಮ್ಕಿ ಜಾಗದ ಕುರಿತಾದ ನೂತನ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ. ಕುಮ್ಕಿ ಹಕ್ಕು ಇತ್ಯರ್ಥವಾಗುವುದಕ್ಕೆ ಮುನ್ನವೇ ಸರಕಾರಿ ಜಮೀನು ಎಂದು ಅತಿಕ್ರಮಣ ಮಾಡಿರುವ ಮುನ್ನೂರು ಗ್ರಾಮ ಪಂಚಾಯತ್ ಆಡಳಿತದಲ್ಲಿ ಭ್ರಷ್ಟಾಚಾರಗೈದವರೆಲ್ಲರಿಗೂ ಶಿಕ್ಷೆ ಆಗಲಿದೆ ಎಂದರು. 
ಕಿಸಾನ್ ಸಂಘ ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ, ಮುಖಂಡರಾದ ಪ್ರೇಮಚಂದ್ರ ಶೆಟ್ಟಿ, ಶಿವರಾಜ್ ಕಾವ, ಬಾಬು ಶ್ರೀಶಾಸ್ತಾ ಕಿನ್ಯ ಮೊದಲಾದವರು ಪ್ರತಿಭಟನೆಯಲ್ಲಿದ್ದರು.

Mangalore Illegal sand mining in Ullal, farmers land being used for mining at Munnuru, farmers protest.