ರಾಜ್ಯ ಸರಕಾರದಿಂದ ಧ್ವನಿವರ್ಧಕಕ್ಕೆ ಮಿತಿ ; ಕಟೀಲು ಮೇಳದ ರಾತ್ರಿ ಯಕ್ಷಗಾನಕ್ಕೆ ಬ್ರೇಕ್, ಕಾಲಮಿತಿ ಯಕ್ಷಗಾನಕ್ಕೆ ಜೋತು ಬಿದ್ದ ಕಟೀಲು ಮೇಳ ! 

24-08-22 12:11 pm       Mangalore Correspondent   ಕರಾವಳಿ

ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ಮಿತಿ ಹೇರಿದ್ದು ಯಕ್ಷಗಾನ ಮೇಳಕ್ಕೂ ತಟ್ಟಿದೆ. ರಾಜ್ಯ ಸರಕಾರದ ಆದೇಶದಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಕಾಲಮಿತಿಗೆ ಬದಲಾಯಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.

ಮಂಗಳೂರು, ಆಗಸ್ಟ್ 24: ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ಮಿತಿ ಹೇರಿದ್ದು ಯಕ್ಷಗಾನ ಮೇಳಕ್ಕೂ ತಟ್ಟಿದೆ. ರಾಜ್ಯ ಸರಕಾರದ ಆದೇಶದಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆರು ಯಕ್ಷಗಾನ ಮೇಳಗಳ ಪ್ರದರ್ಶನವನ್ನು ಕಾಲಮಿತಿಗೆ ಬದಲಾಯಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.

ಇಡೀ ರಾತ್ರಿ ಯಕ್ಷಗಾನ ನಡೆಸುವ ಬದಲು ಸಂಜೆಯಿಂದ ರಾತ್ರಿ 11 ಗಂಟೆ ವೇಳೆಗೆ ಮುಗಿಸಲು ನಿರ್ಧರಿಸಲಾಗಿದೆ. ‌ರಾತ್ರಿ ಗಂಟೆ 10.30 ರಿಂದ 50 ಡೆಸಿಬಲ್‌ಗಿಂತ ಹೆಚ್ಚಿನ ಮಿತಿಯ ಧ್ವನಿವರ್ಧಕ ಬಳಸಬಾರದು ಎಂದು ಸರಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ ಬಂದಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸಲು ಕಟೀಲು ದೇವಳದ ಯಕ್ಷಗಾನ ಮೇಳಗಳ ಆಡಳಿತ ಮಂಡಳಿಯೂ ನಿರ್ಧಾರಕ್ಕೆ ಬಂದಿದೆ. 

ಪ್ರತಿ ವರ್ಷ ನವೆಂಬರ್ ನಿಂದ ತೊಡಗಿ ಮೇ ಕೊನೆಯ ವರೆಗೆ ಆರು ತಿಂಗಳ ಕಾಲ ಯಕ್ಷಗಾನ ಮೇಳಗಳ ತಿರುಗಾಟ ಇರುತ್ತದೆ. ರಾತ್ರಿ 10ರಿಂದ ತೊಡಗಿ ಬೆಳಗ್ಗಿನ ಆರು ಗಂಟೆ ವರೆಗೂ ಯಕ್ಷಗಾನ ಇರುತ್ತದೆ. ಆದರೆ ಧ್ವನಿವರ್ಧಕಕ್ಕೆ ಮಿತಿ ಹೇರಿರುವುದು ಮತ್ತು ರಾತ್ರಿಯಿಡೀ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿದ್ದರಿಂದ ಕಾಲಮಿತಿ ಯಕ್ಷಗಾನ ಹೆಚ್ಚು ಪ್ರಚಲಿತವಾಗುತ್ತಿದೆ. ಇದೇ ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಜೆ 5.30ರಿಂದ ರಾತ್ರಿ 10.30ರ ವರೆಗೆ ಕಟೀಲು ಮೇಳದ ಯಕ್ಷಗಾನ ಸೇವೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಟೀಲು ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.‌

Mangalore Kateel Mela Yakshagana artistes anxious after loudspeaker order. Artistes, especially those dabbling in folklore, are on tenterhooks over the recent state government circular on the use of loudspeakers.