ಸೆಪ್ಟಂಬರ್ 2ಕ್ಕೆ ಮಂಗಳೂರಿಗೆ ಪ್ರಧಾನಿ ಕರೆಸಲು ಸಿದ್ಧತೆ ; ಕೊಚ್ಚಿ ನೌಕಾನೆಲೆಗೆ ಬರುವ ಮೋದಿ ಇಲ್ಲಿಗೂ ಬರುತ್ತಾರೆಯೇ?

22-08-22 07:10 pm       Mangalore Correspondent   ಕರಾವಳಿ

ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್ 2ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪಣಂಬೂರಿನ ಎನ್ಎಂಪಿಟಿಯಲ್ಲಿ ಹೊಸತಾಗಿ ಬರ್ತ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವುದಕ್ಕಾಗಿ ಮೋದಿ ಆಗಮಿಸುತ್ತಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.

ಮಂಗಳೂರು, ಆಗಸ್ಟ್ 22: ಪ್ರಧಾನಿ ನರೇಂದ್ರ ಮೋದಿ ಸೆಪ್ಟಂಬರ್ 2ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪಣಂಬೂರಿನ ಎನ್ಎಂಪಿಟಿಯಲ್ಲಿ ಹೊಸತಾಗಿ ಬರ್ತ್ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುವುದಕ್ಕಾಗಿ ಮೋದಿ ಆಗಮಿಸುತ್ತಿದ್ದಾರೆಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಂದು ಸಂಜೆ ನಾಲ್ಕು ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಎನ್ಎಂಪಿಟಿ ತೆರಳಲಿದ್ದಾರೆ. ಅಲ್ಲಿ ನಿಗದಿಯಾದ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಬಿಜೆಪಿ ವತಿಯಿಂದ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಬಿಜೆಪಿ ಮೂಲಗಳು ಹೇಳುತ್ತಿವೆ. ಚುನಾವಣೆ ಕಾಲದಲ್ಲಿ ಮೋದಿ ಬರುತ್ತಿರುವುದರಿಂದ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಕುಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಸುವುದಕ್ಕೂ ತಯಾರಿ ನಡೆದಿದೆ.

ಆದರೆ ಸೆಪ್ಟಂಬರ್ 2ರಂದೇ ಪ್ರಧಾನಿ ಮೋದಿಯವರು ಕೊಚ್ಚಿಗೆ ಬರಲಿದ್ದಾರೆ. ಕೊಚ್ಚಿ ನೌಕಾನೆಲೆಯಲ್ಲಿ ಐಎನ್ಎಸ್ ವಿಕ್ರಾಂತ್ ಯುದ್ಧನೌಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮ ಫಿಕ್ಸ್ ಆಗಿದೆ. ನಾಲ್ಕು ಬಾರಿ ಟ್ರಯಲ್ ಆಗಿರುವ ಯುದ್ಧನೌಕೆ ಭಾರತದ ನೌಕಾಪಡೆ ಪಾಲಿಗೆ ಅತ್ಯಂತ ಮಹತ್ವದ್ದು. 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದು, ಭಾರತದ ಮೊದಲ ಸ್ವದೇಶಿ ನಿರ್ಮಿತ ಏರ್ ಕ್ರಾಫ್ಟ್ ಹೊತ್ತೊಯ್ಯಬಲ್ಲ ಯುದ್ಧನೌಕೆಯೂ ಆಗಿದೆ. ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಸೇರಿದಂತೆ ಸೇನಾ ಪ್ರಮುಖರು, ರಾಜ್ಯ ಸರಕಾರದ ಪ್ರಮುಖರು ಭಾಗವಹಿಸಲಿದ್ದಾರೆ.

ಪ್ರಧಾನಿ ಕೊಚ್ಚಿಗೆ ಬರುವುದು ಫೈನಲ್ ಆಗಿರುವುದರಿಂದ ಅದೇ ಸಂದರ್ಭದಲ್ಲಿ ಮಂಗಳೂರಿಗೂ ಕರೆಸುವ ಸನ್ನಾಹದಲ್ಲಿ ಕರ್ನಾಟಕದ ಬಿಜೆಪಿ ನಾಯಕರಿದ್ದಾರೆ. ಆದರೆ ಕೋಮು ಸಂಘರ್ಷದ ಕರಾಳ ಛಾಯೆ ಮತ್ತು ಸೆಪ್ಟಂಬರ್ ಮೊದಲ ವಾರ ಕರಾವಳಿಯಲ್ಲಿ ಗಣೇಶೋತ್ಸವದ ಸಡಗರ ಇರುವುದರಿಂದ ಅತಿ ಗಣ್ಯ ವ್ಯಕ್ತಿಯ ಆಗಮನಕ್ಕೆ ಸೆಕ್ಯುರಿಟಿ ಕ್ಲಿಯರೆನ್ಸ್ ಸಿಗುತ್ತಾ ಅನ್ನುವುದು ಇನ್ನೂ ದೃಢಪಟ್ಟಿಲ್ಲ. ಪ್ರಧಾನಿ ಕಾರ್ಯಕ್ರಮ ಆಗುವುದಿದ್ದರೆ, 15 ದಿನಗಳ ಮೊದಲೇ ಎನ್ಎಸ್ ಜಿ ಪಡೆಗಳು ಬಂದು ಸೆಕ್ಯುರಿಟಿ ಚೆಕ್ ಮಾಡಿ ಹೋಗುತ್ತಾರೆ. ದಿಢೀರ್ ಆಗಿ ಕಾರ್ಯಕ್ರಮ ಏರ್ಪಡಿಸುವುದಿಲ್ಲ.

PM Modi to visit Mangalore on Septmeber 2nd after PM's visit to Kochi naval base. The BJP is also planning for a rally in Mangaluru.