ಹರ್ ಘರ್ ತಿರಂಗಾ ; 13-15ಕ್ಕೆ ಪ್ರತಿ ಮನೆ, ಕಟ್ಟಡಗಳಲ್ಲಿ ರಾಷ್ಟ್ರಧ್ವಜಕ್ಕೆ ಕರೆ ; ಪ್ಲಾಸ್ಟಿಕ್ ಧ್ವಜ ಇಲ್ಲ, ವಾಹನಕ್ಕಿಲ್ಲ ಧ್ವಜ ! 

06-08-22 08:31 pm       Mangalore Correspondent   ಕರಾವಳಿ

​​​​​​​ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆ.13 ರಿಂದ 15ರ ವರೆಗೆ ಜಿಲ್ಲೆಯ ಎಲ್ಲಾ ಮನೆಗಳು, ಅಪಾರ್ಟ್‍ಮೆಂಟ್‍ಗಳು, ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ದೇಶದ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಕರೆ ನೀಡಿದ್ದಾರೆ. 

ಮಂಗಳೂರು, ಆಗಸ್ಟ್ 6  : ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆ.13 ರಿಂದ 15ರ ವರೆಗೆ ಜಿಲ್ಲೆಯ ಎಲ್ಲಾ ಮನೆಗಳು, ಅಪಾರ್ಟ್‍ಮೆಂಟ್‍ಗಳು, ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ದೇಶದ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಕರೆ ನೀಡಿದ್ದಾರೆ. 

ಶನಿವಾರ ನಗರದ ಉರ್ವಾ ಸ್ಟೋರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಸಂಜೀವಿನಿ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಸ್ವಚ್ಛ ಭಾರತ ಮಿಷನ್ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದಡಿ ಕಂದಾವರದ ಬೆಳಕು ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಸದಸ್ಯರು ತಯಾರಿಸಿದ ರಾಷ್ಟ್ರ ಧ್ವಜಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.


 
ಆ.13ರಿಂದ 15ರ ಮೂರು ದಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮನೆಗಳು, ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಾಡಬೇಕು. ಆ.8 ಮತ್ತು 9ರಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳಲ್ಲಿ ಪೂರ್ವ ತಯಾರಿ ನಡೆಸಬೇಕು, ಯುವಕ, ಯುವತಿ ಮಂಡಲಗಳ ಮೂಲಕ ಮನೆಗಳಿಗೆ ಧ್ವಜ ತಲುಪಿಸುವ ಕೆಲಸವಾಗಬೇಕು, ಆ.10 ಮತ್ತು 11ರಂದು ಎಲ್ಲ ಮನೆಗಳಿಗೆ ಏಕಕಾಲದಲ್ಲಿ ಧ್ವಜ ವಿತರಣೆ ನಡೆಸಬೇಕು ಎಂದು ಹೇಳಿದರು.

ಆ.13ರಂದು ಮನೆಯ ಸದಸ್ಯರೊಂದಿಗೆ ಧ್ವಜಾರೋಹಣ ನಡೆಸಬೇಕು. ಧ್ವಜವಂದನೆ ಬಳಿಕ ಸಿಹಿ ಹಂಚಿ ಸಂಭ್ರಮಿಸಬಹುದು, ಧ್ವಜ ಸಂಹಿತೆಯಂತೆ ಧ್ವಜಕ್ಕೆ ಅಲಂಕಾರ ಮಾಡುವಂತಿಲ್ಲ, ಯಾವುದೇ ಲೋಪವಾಗದಂತೆ, ಅವಮಾನ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದವರು ತಿಳಿಸಿದರು.

ರಾಷ್ಟ್ರಧ್ವಜವನ್ನು ಉಚಿತ ಕೇಳಬೇಡಿ 


 

ಎಲ್ಲರೂ ಹಣ ನೀಡಿ ತ್ರಿವರ್ಣ ಧ್ವಜ ಖರೀದಿಸಬೇಕು, ಯಾವುದೇ ಕಾರಣಕ್ಕೂ ಉಚಿತ ಧ್ವಜಕ್ಕೆ ಒತ್ತಾಯ ಮಾಡಬಾರದು. ಗ್ರಾಮೀಣ ಭಾಗದಲ್ಲಿ ಧ್ವಜ ಆರೋಹಣಕ್ಕೆ ಕಡ್ಡಿಗಳು ಸಿಗುತ್ತವೆ. ನಗರ ಪ್ರದೇಶಗಳಲ್ಲಿ ಧ್ವಜದ ಜತೆ ಕಡ್ಡಿಯನ್ನೂ ನೀಡಿದರೆ ಉತ್ತಮ. ಮಹಾನಗರ ಪಾಲಿಕೆಯವರು ಅಗತ್ಯ ಕ್ರಮ ವಹಿಸಬೇಕು. ಧ್ವಜವನ್ನು ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಮಾರಾಟ ಕೇಂದ್ರಗಳಿಂದ ಪಡೆಯಬಹುದು. ಮನೆ, ಕಟ್ಟಡಗಳಲ್ಲಿ ಧ್ವಜ ಆರೋಹಣದ ಪೋಟೋಗಳನ್ನು ಜಿಲ್ಲಾಡಳಿತ ನೀಡುವ ಪ್ರತ್ಯೇಕ ವಾಟ್ಸ್ ಅಪ್ ನಂಬರಿಗೆ ಕಳುಹಿಸಬೇಕು ಎಂದು ಸಚಿವರು ತಿಳಿಸಿದರು. 

ಜಿಲ್ಲೆಯಲ್ಲಿ 6 ಲಕ್ಷ ರಾಷ್ಟ್ರ ಧ್ವಜ 


 

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕಳುಹಿಸಿದ ಧ್ವಜಕ್ಕೆ 22 ರೂ., ರಾಜ್ಯ ಸರ್ಕಾರದ ಧ್ವಜಕ್ಕೆ 25 ರು. ಹಾಗೂ ಸ್ತ್ರೀಶಕ್ತಿ ಗುಂಪುಗಳು ಸಿದ್ಧಪಡಿಸಿದ ಧ್ವಜಕ್ಕೆ 30 ರೂ. ನಿಗದಿ ಪಡಿಸಲಾಗಿದೆ. ಪ್ಲಾಸ್ಟಿಕ್ ಧ್ವಜಕ್ಕೆ ಅವಕಾಶ ಇಲ್ಲ. ಕೇಂದ್ರದಿಂದ 1.75 ಲಕ್ಷ ಧ್ವಜ, ರಾಜ್ಯದಿಂದ 4.25 ಲಕ್ಷ ಧ್ವಜ ಸೇರಿ 6 ಲಕ್ಷ ಧ್ವಜ ಸಿದ್ಧವಿದೆ. ಸ್ತ್ರೀಶಕ್ತಿ ಗುಂಪುಗಳು 4.25 ಲಕ್ಷ ಧ್ವಜವನ್ನು ಸಿದ್ಧಪಡಿಸುತ್ತಿದ್ದು, ಇದನ್ನು ಜಿಲ್ಲೆಯ 16 ಕಡೆಗಳಲ್ಲಿ ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ. ಸ್ವ ನಿಧಿ ಬಳಸಿ ಪ್ರತಿ ಗ್ರಾಮ ಪಂಚಾಯತ್‍ಗಳಿಗೆ ತಲಾ 500 ಧ್ವಜ ಖರೀದಿಗೆ ಸೂಚನೆ ನೀಡಲಾಗಿದೆ. ಅದನ್ನು ಸರ್ಕಾರದ ವಿವಿಧ ಕಚೇರಿಗಳಿಗೆ ನೀಡಬಹುದಾಗಿದೆ. ರಾಜ್ಯ ಸರ್ಕಾರದಿಂದ ಬಂದ ಧ್ವಜವನ್ನು 17 ವಿವಿಧ ಇಲಾಖೆಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ಲಾಸ್ಟಿಕ್ ಧ್ವಜ ಇಲ್ಲ, ವಾಹನಕ್ಕಿಲ್ಲ ಧ್ವಜ 


ಎಲ್ಲಿಯೂ ಪ್ಲಾಸ್ಟಿಕ್ ಧ್ವಜ ಹಾರಾಟಕ್ಕೆ ಅವಕಾಶ ಇಲ್ಲ. ಅದೇ ರೀತಿ ಯಾವುದೇ ರೀತಿಯ ವಾಹನಗಳಲ್ಲೂ ಧ್ವಜ ಹಾರಾಟಕ್ಕೆ ಆಸ್ಪದ ಇಲ್ಲ. ಸರ್ಕಾರದ ನಿಯಮದಂತೆ ಅತಿ ಗಣ್ಯರ ವಾಹನಗಳಲ್ಲಿ ಮಾತ್ರ ಎದುರು ಭಾಗದಲ್ಲಿ ಧ್ವಜ ಹಾಕಬಹುದು. ಆದರೆ ವಾಹನದ ಒಳಭಾಗದಲ್ಲಿ ಸ್ಟೇರಿಂಗ್ ಎದುರು ಮಾತ್ರ ಪುಟ್ಟ ಧ್ವಜ ಹಾಕಲು ಅಡ್ಡಿ ಇಲ್ಲ. ಕೈಮಗ್ಗ, ಖಾದಿ, ರೇಷ್ಮೆ, ಉಣ್ಣೆ, ಪಾಲಿಸ್ಟರ್ ಧ್ವಜ ಹಾಕಲು ಅವಕಾಶ ಇದೆ. ಇಲ್ಲಿ ಪಾಲಿಸ್ಟರ್, ಖಾದಿ, ಕಾಟನ್ ಧ್ವಜ ನೀಡಲಾಗುತ್ತಿದೆ. ರಾಷ್ಟ್ರಧ್ವಜ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಸ್ವಾತಂತ್ರ್ಯೋತ್ಸವದ ಅಮೃತೋತ್ಸವ ಸಂದರ್ಭ ರಾತ್ರಿಯೂ ಇಳಿಸದೆ ಧ್ವಜ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಕುಮಾರ್ ಮಾಹಿತಿ ನೀಡಿದರು.

ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಿದರೆ ಜೈಲು ಶಿಕ್ಷೆ 

ರಾಷ್ಟ್ರಧ್ವಜವನ್ನು ಎಲ್ಲರೂ ಮನೆಗಳಲ್ಲಿ ಹಾಗೂ ಕಟ್ಟಡಗಳಲ್ಲಿ ಹಾರಾಟಕ್ಕೆ ತೊಂದರೆ ಇಲ್ಲ. ಆದರೆ ಧ್ವಜಸಂಹಿತೆಯನ್ನು ಪಾಲಿಸದಿದ್ದರೆ ಪ್ರಕರಣ ದಾಖಲಿಸಲಾಗುವುದು ಮತ್ತು ಜೈಲು ಶಿಕ್ಷೆ ಶತಸಿದ್ಧ. ಧ್ವಜ ಸಂಹಿತೆ ಪ್ರಕಾರ, ರಾಷ್ಟ್ರಧ್ವಜಕ್ಕೆ ಅಗೌರವ, ನಾಶ, ಅಪಕೀರ್ತಿ, ಹರಿದು ಹಾಕಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಇದೆ. ಇದಕ್ಕೆ ಯಾರ ಅನುಮತಿಗೆ ಕಾಯಬೇಕಾಗಿಲ್ಲ. ಯಾರೇ ನಾಗರಿಕ ದೂರು ನೀಡಿದರೂ ಸಾಕಾಗುತ್ತದೆ. ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಅಟ್ಟಲು ಅವಕಾಶ ಇದೆ. ಕನಿಷ್ಠ 3 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಆ.13ರಿಂದ 15ರ ವರೆಗೆ ಧ್ವಜಾರೋಹಣ ನಡೆಸಿ ಇಳಿಸಿದ ಬಳಿಕ ಧ್ವಜವನ್ನು ಎಸೆಯದೆ, ಜೋಪಾನವಾಗಿ ಮನೆಯಲ್ಲೇ ಇರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಇನ್ನು ಒಂದು ವಾರದೊಳಗೆ ಜಿಲ್ಲೆಯಲ್ಲಿ ಎಲ್ಲರ ಮನೆಗಳಿಗೆ ರಾಷ್ಟ್ರಧ್ವಜವನ್ನು ತಲುಪಿಸಬೇಕು. ಹರಿದ, ಕೊಳಕು ಧ್ವಜವನ್ನು ಆರೋಹಣ ಮಾಡಬಾರದು. ಸೊಂಟದ ಕೆಳಗೂ ಧ್ವಜ ಬಣ್ಣದ ವಸ್ತ್ರವನ್ನು ಧರಿಸುವಂತಿಲ್ಲ ಎಂದರು. 
 
ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ಸಹಾಯಕ ಆಯುಕ್ತ ಮದನಮೋಹನ್, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಉಪಸ್ಥಿತರಿದ್ದರು.

Har Ghar Tiranga Campaign minister Sunil Kumar asks public to ensure maximum availability of the flags to support campaign. The Har Ghar Tiranga campaign was launched on 22nd July 2022 by Prime Minister Narendra Modi to encourage citizens to hoist the national flag at their homes during the period of 13-15 August to celebrate the 75th Independence Day under the Azadi ka Amrit Mahotsav Initiative.