ಕಟೀಲು ದೇಗುಲ ; ಪಾರ್ಕಿಂಗ್ ಶುಲ್ಕ ನಿಯಮಕ್ಕೆ ತಾತ್ಕಾಲಿಕ ಬ್ರೇಕ್, ಭಕ್ತರಿಂದ ಪ್ರಬಲ ಆಕ್ಷೇಪ 

01-08-22 02:54 pm       Mangalore Correspondent   ಕರಾವಳಿ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಭಕ್ತರು ವಾಹನ ನಿಲ್ಲಿಸಬೇಕಿದ್ದರೆ ಹಣ ಪಾವತಿ ಮಾಡಬೇಕೆಂಬ ನಿಯಮ ತರಲಾಗಿತ್ತು.

ಮಂಗಳೂರು, ಆಗಸ್ಟ್ 1 : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಭಕ್ತರು ವಾಹನ ನಿಲ್ಲಿಸಬೇಕಿದ್ದರೆ ಹಣ ಪಾವತಿ ಮಾಡಬೇಕೆಂಬ ನಿಯಮ ತರಲಾಗಿತ್ತು. ಆದರೆ ದೇವಸ್ಥಾನ ಕಮಿಟಿಯ ಹೊಸ ನಿಯಮಕ್ಕೆ ಭಕ್ತರ ಕಡೆಯಿಂದ ಭಾರೀ ಆಕ್ಷೇಪ ವ್ಯಕ್ತವಾಗಿದ್ದು ಶುಲ್ಕ ಪ್ರಸ್ತಾಪಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. 

ಮುಜರಾಯಿ ಇಲಾಖೆ ಆಯುಕ್ತರ ಸುತ್ತೋಲೆ ಮೇರೆಗೆ ದೇವಳದ ರಥಬೀದಿ ಮತ್ತು ಬಸ್ಸು ನಿಲ್ದಾಣದಲ್ಲಿ ವಾಹನ ನಿಲುಗಡೆ ಮಾಡಲು ಶುಲ್ಕ ತೆರುವಂತೆ ಬ್ಯಾನರ್ ಹಾಕಲಾಗಿತ್ತು. ದರದ ಕುರಿತು ಬ್ಯಾನರ್ ಅಳವಡಿಸಿದ್ದು ದ್ವಿಚಕ್ರ ವಾಹನಗಳಿಗೆ 10 ರೂ, ತ್ರಿಚಕ್ರ ವಾಹನ 20 ರೂ, ಲಘು ವಾಹನ 30 ರೂ. ಹಾಗೂ ಘನ ವಾಹನಕ್ಕೆ 50 ರೂ. ನಿಗದಿ ಪಡಿಸಲಾಗಿತ್ತು. ಭಾರೀ ಆದಾಯ ಇರುವ ದೇವಸ್ಥಾನದಲ್ಲಿ ವಾಹನ ಪಾರ್ಕಿಂಗ್ ಶುಲ್ಕ ವಿಧಿಸಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ದೇವಸ್ಥಾನದ ಆಡಳಿತ ಮಂಡಳಿ, ಪೇ ಪಾರ್ಕಿಂಗ್ ಬಗ್ಗೆ ಸರ್ಕಾರದ ಧಾರ್ಮಿಕ ಇಲಾಖೆಯಿಂದ ಆದೇಶ ಬಂದಿದ್ದು ಈ ಬಗ್ಗೆ ಬ್ಯಾನರ್ ಅಳವಡಿಸಲಾಗಿದೆ. ಈವರೆಗೆ ಪೇ ಪಾರ್ಕಿಂಗ್ ಆರಂಭಿಸಿಲ್ಲವೆಂದು ತಿಳಿಸಿದೆ. ಈ ನಡುವೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆಯಂತೆ ಪಾರ್ಕಿಂಗ್ ಶುಲ್ಕ ಸಂಗಹವನ್ನು ತಾತ್ಕಾಲಿಕ ಮುಂದೂಡಲಾಗಿದ್ದು ತಾಂತ್ರಿಕ ಪ್ರಕ್ರಿಯೆಗಳ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇವಳದ ಮೂಲಗಳು ತಿಳಿಸಿವೆ.

Sri Durgaaparameshwari Temple Kateelu parking fees go high, admin puts break after devotees go angry.