ಬಿಜೆಪಿ ಸರಕಾರ ಇದ್ದರೂ ತಮ್ಮದೇ ಕಾರ್ಯಕರ್ತನಿಗೆ ರಕ್ಷಣೆ ಕೊಡಕ್ಕಾಗಿಲ್ಲ, ಹಂತಕರನ್ನು 15 ದಿನದಲ್ಲಿ ಬಂಧಿಸದಿದ್ದರೆ ಹೋರಾಟ ; ಕಾಂಗ್ರೆಸ್

31-07-22 06:38 pm       Mangalore Correspondent   ಕರಾವಳಿ

ರಾಜ್ಯ ಸರಕಾರದ ಗುಪ್ತಚರ ದಳ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರಕಾರ ಇದ್ದರೂ, ತಮ್ಮದೇ ಕಾರ್ಯಕರ್ತನ ರಕ್ಷಣೆ ಮಾಡಲು ಆಗಿಲ್ಲ. ಇವರು ಸಾಮಾನ್ಯ ಜನರಿಗೇನು ರಕ್ಷಣೆ ಕೊಡುತ್ತಾರೆ. ಇವರು ಆಡಳಿತ ಮಾಡುವಲ್ಲಿ ಪೂರ್ತಿ ವಿಫಲವಾಗಿದ್ದಾರೆ.

ಸುಳ್ಯ, ಜುಲೈ 31: ರಾಜ್ಯ ಸರಕಾರದ ಗುಪ್ತಚರ ದಳ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರಕಾರ ಇದ್ದರೂ, ತಮ್ಮದೇ ಕಾರ್ಯಕರ್ತನ ರಕ್ಷಣೆ ಮಾಡಲು ಆಗಿಲ್ಲ. ಇವರು ಸಾಮಾನ್ಯ ಜನರಿಗೇನು ರಕ್ಷಣೆ ಕೊಡುತ್ತಾರೆ. ಇವರು ಆಡಳಿತ ಮಾಡುವಲ್ಲಿ ಪೂರ್ತಿ ವಿಫಲವಾಗಿದ್ದಾರೆ. ಇದಕ್ಕಾಗಿಯೇ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.

ಸುಳ್ಯದ ಬೆಳ್ಳಾರೆಯ ನೆಟ್ಟಾರಿನಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿಯಿತ್ತ ಕಾಂಗ್ರೆಸ್ ನಾಯಕರ ದಂಡು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ನಿಮ್ಮ ಕುಟುಂಬದ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ, ಅಲ್ಲಿದ್ದ ಬಿಜೆಪಿ ಪರ ಇರುವ ಕೆಲವು ಸಂಬಂಧಿಕರು, ನೀವು ಯಾಕೆ ಈಗ ಬಂದಿದ್ದೀರಿ. ನಿಮ್ಮ ಪಕ್ಷದವರು ಹಿಂದುತ್ವದ ರಕ್ಷಣೆ ಮಾಡುತ್ತೀರಾ.. ನೀವು ಹಿಂದು ವಿರೋಧಿಗಳಲ್ವಾ.. ಈಗ ಯಾಕೆ ಬಂದು ಪೋಸು ಕೊಡುತ್ತೀರಿ ಎಂದು ತರಾಟೆಗೆತ್ತಿಕೊಂಡ ಘಟನೆಯೂ ನಡೆಯಿತು.

ಮನೆಯವರನ್ನು ಭೇಟಿಯಾಗಿ ಹೊರಬಂದ ಬಿಕೆ ಹರಿಪ್ರಸಾದ್, ಅಲ್ಲಿಯೇ ಎದುರಾದ ಮಾಧ್ಯಮದ ವ್ಯಕ್ತಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಉದಯಪುರದ ಮಾದರಿಯಲ್ಲೇ ಹತ್ಯೆ ನಡೆದಿದ್ದರೂ, ಅಲ್ಲಿ ಎರಡೇ ದಿನದಲ್ಲಿ ಹಂತಕರನ್ನು ಬಂಧಿಸಲಾಗಿದೆ. ಇಲ್ಲಿ ವಾರ ಆಗುತ್ತಾ ಬಂದರೂ, ಹಂತಕರನ್ನು ಬಂಧಿಸಲು ಸಾಧ್ಯವಾಗಿಲ್ಲ. ಈ ಘಟನೆ ಮತ್ತು ಆರೋಪಿಗಳನ್ನು ಬಂಧಿಸದೇ ಇರುವುದಕ್ಕೆ ಗುಪ್ತಚರ ವೈಫಲ್ಯವೇ ಕಾರಣ. ತಮ್ಮ ತಪ್ಪನ್ನು ಮುಚ್ಚಿಡಲು ಎನ್ಐಎ ತನಿಖೆಗೆ ವಹಿಸಿದ್ದಾರೆ. ಆದರೆ ಮುಂದಿನ 15 ದಿನದಲ್ಲಿ ಆರೋಪಿಗಳ ಬಂಧನ ಆಗದೇ ಇದ್ದರೆ ಕಾಂಗ್ರೆಸ್ ಈ ಕುರಿತು ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.

ಹತ್ಯೆಯ ಬಳಿಕ ಬಿಜೆಪಿ ನಾಯಕರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಯಾರೂ ಸುರಕ್ಷಿತರಿಲ್ಲ. ತಮ್ಮದೇ ಪಕ್ಷದ ಕಾರ್ಯಕರ್ತ ತನಗೆ ಜೀವ ಭಯವಿದೆ, ಬೆದರಿಕೆ ಹಾಕುತ್ತಿದ್ದಾರೆ ಎಂದರೂ ರಕ್ಷಣೆ ನೀಡುವುದಕ್ಕೆ ಆಗಿಲ್ಲ. ಈ ಸರಕಾರದಿಂದ ಸಾಮಾನ್ಯ ಜನರಿಗೆ ರಕ್ಷಣೆ ನೀಡಲು ಸಾಧ್ಯವೇ ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಸಂಸದನಾಗಿ ತೇಜಸ್ವಿ ಸೂರ್ಯ, ರಸ್ತೆಯಲ್ಲಿ ಹೋಗೋರಿಗೆಲ್ಲ ರಕ್ಷಣೆ ನೀಡುವುದಕ್ಕಾಗುತ್ತಾ ಎಂದು ಪ್ರಶ್ನೆ ಮಾಡಿರುವುದು ಬೇಜವಾಬ್ದಾರಿತನದ ಪರಮಾವಧಿ. ಸಂಸದನಾಗಿ ಬಾಲಿಶ ಹೇಳಿಕೆ ನೀಡಿದ್ದಾರೆ. ಒಂದು ಜೀವ ತೆಗೆಯುವುದು ಅಂದ್ರೆ, ಮಕ್ಕಳಾಟಿಕೆ ಅಲ್ಲ. ಎಲ್ಲವನ್ನೂ ಇವರೇ ಮಾಡುವುದು. ಧರ್ಮವನ್ನು ಕಾಪಾಡಲು ಎಂದು ಹೇಳುತ್ತಾರೆ. ಯಾಕೆ ನಾಯಕರು ತಮ್ಮ ಮಕ್ಕಳಿಗೇ ಗನ್, ಪಿಸ್ತೂಲು ಕೊಟ್ಟು ಕಳಿಸಲ್ಲ. ಅಮಾಯಕರು, ಶೂದ್ರರನ್ನು ಯಾಕೆ ಬಲಿ ಕೊಡುತ್ತಿದ್ದಾರೆ ಎಂದು ಹೇಳಿದರು.

ಇದರ ನಡುವೆ, ಇವರ ನಾಯಕರು ಪ್ರಚೋದನಕಾರಿ ಹೇಳಿಕೆಯನ್ನೂ ನೀಡುತ್ತಿದ್ದಾರೆ. ಈಶ್ವರಪ್ಪ ಮತ್ತು ಗೃಹ ಸಚಿವರೇ ಪ್ರಚೋದನೆ ನೀಡುತ್ತಿದ್ದಾರೆ. ಈಗ ಆರೆಸ್ಸೆಸ್ ಹಿನ್ನೆಲೆಯವರೇ ಗೃಹ ಸಚಿವರಿದ್ದಾರೆ. ಯಾಕೆ ಇವರಿಗೆ ಇಂಥ ಕೃತ್ಯಗಳನ್ನು ಕಂಟ್ರೋಲ್ ಮಾಡೋಕೆ ಆಗಲ್ಲ. ಮೊದಲು ಪ್ರಚೋದನಕಾರಿ ಹೇಳಿಕೆ ನೀಡುವ ನಾಯಕರ ವಿರುದ್ಧ ದೇಶದ್ರೋಹದ ಕೇಸ್ ಬುಕ್ ಮಾಡಬೇಕು ಎಂದು ಆಗ್ರಹಿಸಿದರು. ಮಾಜಿ ಸಚಿವ ರಮಾನಾಥ ರೈ, ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಮತ್ತಿತರ ನಾಯಕರು ಜೊತೆಗಿದ್ದರು.

BK Hari Prasad and Congress leaders visit Praveens House at Bellare in Sullia. BJP who can't even give protection to their own members will they even protect our state slammed Prasad.