ಇಂಟರ್ನೆಟ್ ಕಡಿತ ಇಲ್ಲ, ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ ; ಎಡಿಜಿಪಿ ಎಚ್ಚರಿಕೆ  

30-07-22 04:11 pm       Mangalore Correspondent   ಕರಾವಳಿ

ಕೋಮು ವೈಷಮ್ಯದ ವಾತಾವರಣದ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದಾರೆ.

Photo credits : ANI news

ಮಂಗಳೂರು, ಜುಲೈ 30: ಕೋಮು ವೈಷಮ್ಯದ ವಾತಾವರಣದ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಕೆಲವು ಧಾರ್ಮಿಕ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಪ್ರಮುಖವಾಗಿ ಗುರುತಿಸ್ಕೊಂಡಿರುವ ಹಿಂದು ಸಂಘಟನೆಗಳ ನಾಯಕರಾಗಲೀ, ಮುಸ್ಲಿಂ ಸಂಘಟನೆಗಳ ನಾಯಕರಾಗಲೀ ಪಾಲ್ಗೊಂಡಿರಲಿಲ್ಲ.

ಸಭೆಯ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಎಡಿಜಿಪಿ ಅಲೋಕ್ ಕುಮಾರ್, ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ಇಂಟರ್ನೆಟ್ ಸ್ಧಗಿತ ಮಾಡುವಂತೆಯೂ ಹೇಳಿದ್ದಾರೆ. ಆದರೆ ಇಂಟರ್ನೆಟ್ ಸ್ಥಗಿತ ಮಾಡಿದರೆ ಮಂಗಳೂರಿನಂಥ ಸಿಟಿಯಲ್ಲಿ ಸಾರ್ವಜನಿಕರಿಗೆ ಕಷ್ಟವಾಗುತ್ತದೆ ಎನ್ನುವ ನೆಲೆಯಲ್ಲಿ ಅಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಬದಲಿಗೆ, ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುವುದು, ವದಂತಿ ಹರಡುವ ಬಗ್ಗೆ ನಿಗಾ ಇಡುತ್ತೇವೆ. ಮಾಧ್ಯಮಗಳು ಕೂಡ ತಮ್ಮ ಟಿಆರ್ ಪಿ ಹೆಚ್ಚಿಸುವುದಕ್ಕಾಗಿ ಊಹಾಪೋಹದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಹೇಳಿದರು.

Karnataka's BJP Yuva Morcha worker Praveen Nettaru hacked to death- The New  Indian Express

ಕೇರಳದಲ್ಲಿ ಅವಿತಿದ್ದ ಇಬ್ಬರು ವಶಕ್ಕೆ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಕೇರಳದಲ್ಲಿ ಅವಿತುಕೊಂಡಿದ್ದ ಮತ್ತಿಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕೃತ್ಯದಲ್ಲಿ ಅವರ ಪಾತ್ರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ ಎಡಿಜಿಪಿ, ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಸಂಬಂಧಿಸಿ ಈಗಾಗಲೇ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರೆಲ್ಲ ಯಾವ ಸಂಘಟನೆಯವರು ಎನ್ನುವುದನ್ನು ತನಿಖೆಯ ಹಂತದಲ್ಲಿ ಹೇಳಕ್ಕೆ ಬರುವುದಿಲ್ಲ ಎಂದು ಹೇಳಿದರು.

ಪ್ರತೀ ಠಾಣೆ ವ್ಯಾಪ್ತಿಯಲ್ಲಿ ಬೀಟ್ ಸಭೆ, ಶಾಂತಿ ಸಭೆ, ಮೊಹಲ್ಲಾಗಳ ಸಭೆಯನ್ನು ನಡೆಸಲು ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ. ಇದಲ್ಲದೆ, ಮುಖ್ಯಮಂತ್ರಿಯವರು ಗಡಿಭಾಗದಲ್ಲಿ ನಿಗಾ ಇಡಲು ಸೂಚಿಸಿದ್ದಾರೆ. ಅದರಂತೆ, ಕೇರಳದಿಂದ ಕರ್ನಾಟಕ ಸೇರುವ ಒಳ ರಸ್ತೆಗಳಲ್ಲಿ ನಿಗಾ ಇಟ್ಟಿದ್ದೇವೆ. ಅಲ್ಲಿ ಕೆಎಸ್ಆರ್ ಪಿ ಪಡೆಯ ಪೊಲೀಸರನ್ನು ನಿಯೋಜನೆ ಮಾಡಿದ್ದು, ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

COVID-19: DK DC Dr Rajendra K V issues new guidelines | udayavani

ಇನ್ನೆರಡು ದಿನದಲ್ಲಿ ಜನಪ್ರತಿನಿಧಿಗಳ ಸಭೆ

ಸಭೆಯಲ್ಲಿ ಪ್ರಮುಖ ನಾಯಕರು ಪಾಲ್ಗೊಳ್ಳದೇ ಇರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ, ಜನಪ್ರತಿನಿಧಿಗಳು, ಇನ್ನಿತರ ಪ್ರಮುಖರನ್ನು ಒಳಗೊಂಡ ಸಭೆಯನ್ನು ಇನ್ನೆರಡು ದಿನದಲ್ಲೇ ನಡೆಸಲಾಗುವುದು. ಇಂದು ಜನಾಭಿಪ್ರಾಯ ಕೇಳಿದ್ದು, ಎಲ್ಲ ಸಮುದಾಯದ ಪ್ರಮುಖರು ಇದ್ದರು. ತಮ್ಮ ಅಹವಾಲು ಹೇಳಿದ್ದಾರೆ. ಮುಂದಿನ ಬಾರಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು.

Surathkal Fazil Murder case, Social Media is been monitored Strictly by the cyber police. People forwarding provocative and fake messages will have to face the consequences said ADGP Alok Kumar in Mangalore. In connection to Praveen Bellare murder two from Kerala have been arrested he said.