HK ಬಿಗ್ ಇಂಪ್ಯಾಕ್ಟ್ ; ನರಸತ್ತಿಲ್ಲ ಎಂದು ತೋರಿಸಿಕೊಟ್ಟ ಅಧಿಕಾರಿಗಳು, ಮಂಗಳೂರಿನಲ್ಲಿ ಒಂದೇ ದಿನದಲ್ಲಿ ಹೆದ್ದಾರಿ ಗುಂಡಿಗೆ ಅರೆಬರೆ ತೇಪೆ !!   

26-07-22 09:50 pm       Mangalore Correspondent   ಕರಾವಳಿ

ನೇತ್ರಾವತಿ ಸೇತುವೆಯಲ್ಲಿ ಕಾಂಕ್ರೀಟ್ ಒಡೆದು ಎದ್ದು ನಿಂತಿದ್ದ ಕಬ್ಬಿಣದ ಕಂಬಿಗೆ ಸಿಲುಕಿ ಎಂಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪಲ್ಟಿಯಾಗಿತ್ತು.

ಮಂಗಳೂರು, ಜುಲೈ 26: ನೇತ್ರಾವತಿ ಸೇತುವೆಯಲ್ಲಿ ಕಾಂಕ್ರೀಟ್ ಒಡೆದು ಎದ್ದು ನಿಂತಿದ್ದ ಕಬ್ಬಿಣದ ಕಂಬಿಗೆ ಸಿಲುಕಿ ಎಂಎಸ್ಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪಲ್ಟಿಯಾಗಿತ್ತು. ಇದರಿಂದಾಗಿ ಆಕೆಯ ಕೈಮೂಳೆ ಮುರಿದು ಆಸ್ಪತ್ರೆಗೆ ಸೇರಿದ್ದಳು. ಈ ಬಗ್ಗೆ ಹೆಡ್ಲೈನ್ ಕರ್ನಾಟಕ, ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ನರಸತ್ತ ಅಧಿಕಾರಿ ವರ್ಗ ಎಂದು ಕಟು ಶಬ್ದಗಳಲ್ಲಿ ವರದಿ ಮಾಡಿತ್ತು. ವಿಡಿಯೋ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ, ಅಧಿಕಾರಿ ವರ್ಗಕ್ಕೂ ಚಾಟಿ ಬೀಸಿತ್ತು.

ಮತ್ತೊಂದೆಡೆ ಹೆಡ್ ಲೈನ್ ಸುದ್ದಿ ನೋಡಿ, ಹೆದ್ದಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೂಡ ಬಿಸಿ ಮುಟ್ಟಿಸಿದ್ದರು. ನಿರ್ಲಕ್ಷ್ಯವನ್ನೇ ಹೊದ್ದು ಮಲಗಿದ್ದ ಅಧಿಕಾರಿಗಳು ಬಿಸಿ ತಾಗುತ್ತಿದ್ದಂತೆ ಒಂದೇ ದಿನದಲ್ಲಿ ಹೆದ್ದಾರಿ ಗುಂಡಿಗಳಿಗೆ ತೇಪೆ ಹಾಕಿದ್ದಾರೆ. ಮಂಗಳೂರಿನ ಕೆಪಿಟಿ ಸರ್ಕಲ್ ನಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದವು. ಅದನ್ನೂ ಸೇರಿದಂತೆ, ನಂತೂರು, ಪಂಪ್ವೆಲ್, ಎಕ್ಕೂರು, ನೇತ್ರಾವತಿ ಸೇತುವೆಯ ಭಾಗದಲ್ಲಿ ಗುಂಡಿ ಬಿದ್ದ ಜಾಗಕ್ಕೆ ತುರ್ತಾಗಿ ಡಾಮರು ಎರೆದು ತೇಪೆ ಹಚ್ಚಿದ್ದಾರೆ. ಮಂಗಳವಾರ ಹಗಲಿನಲ್ಲಿ ಬಿಸಿಲು ಇದ್ದುದರಿಂದ ಒಂದೇ ದಿನದಲ್ಲಿ ಕಾಮಗಾರಿ ನಡೆಸಿದ್ದಾರೆ.

ನೇತ್ರಾವತಿ ಸೇತುವೆಯ ಮಧ್ಯೆ 2-3 ತಿಂಗಳಿಂದಲೂ ಕಾಂಕ್ರೀಟ್ ಎದ್ದು ಗುಂಡಿಗಳು ಉಂಟಾಗಿದ್ದವು. ಆದರೆ, ಕಾಲ ಕಾಲಕ್ಕೆ ಟೋಲ್ ರಸ್ತೆಯನ್ನು ಗಮನಿಸಬೇಕಿದ್ದ ಅಧಿಕಾರಿಗಳು ಹೇಗೂ ನಡೀತದೆ ಎನ್ನುವ ಧೋರಣೆ ತಳೆದಿದ್ದರು. ಯಥಾ ರಾಜಾ ತಥಾ ಪ್ರಜಾ ಅನ್ನುವ ರೀತಿ ಸಂಸದರಿಗೆ ತಕ್ಕಂತೆ ಅಧಿಕಾರಿಗಳೂ ನಿರ್ಲಕ್ಷ್ಯಕ್ಕೆ ಜೋತು ಬಿದ್ದಿದ್ದರು. ಜಾಲತಾಣದಲ್ಲಿ ಅಧಿಕಾರಿ ವರ್ಗದ ವೈಟ್ ವಾಶ್ ಆಗುತ್ತಿದ್ದರೂ, ಕೇರ್ ಮಾಡಿರಲಿಲ್ಲ. ವಿದ್ಯಾರ್ಥಿನಿ ಕೈಕಾಲು ಮುರಿದುಕೊಂಡರೂ ಎಚ್ಚತ್ತಿರಲಿಲ್ಲ. ಟೋಲ್ ಕೊಟ್ಟು ಹೋಗುವ ರಸ್ತೆ ಅನ್ನುವ ಕನಿಷ್ಠ ಕಾಳಜಿಯೂ ಅಧಿಕಾರಿ ವರ್ಗಕ್ಕೆ ಇರಲಿಲ್ಲ. ಅದಕ್ಕಾಗಿಯೇ ನರಸತ್ತವರು ಅನ್ನುವ ಟ್ಯಾಗ್ ಲೈನ್ ಕೊಟ್ಟು ಹೆಡ್ ಲೈನ್ ಕರ್ನಾಟಕ ಹೆದ್ದಾರಿ ಅಧಿಕಾರಿಗಳಿಗೆ ಚಾಟಿ ಬೀಸಿತ್ತು.

ಮಾಡಿದ್ದು ಅರೆಬರೆ ಕಾಮಗಾರಿಯೇ ಆಗಿದ್ದರೂ, ಇದು ಹೆಡ್ ಲೈನ್ ಕರ್ನಾಟಕದ ಬಿಗ್ ಇಂಪ್ಯಾಕ್ಟ್ ಎಂದು ಹೇಳಿಕೊಳ್ಳುವುದಕ್ಕೆ ಏನೂ ಅಂಜಿಕೆಯಿಲ್ಲ. ಇದರ ಜೊತೆಗೆ, ಹೆದ್ದಾರಿ ಗುಂಡಿಗೆ ಬಿದ್ದು ಆಸ್ಪತ್ರೆ ಅಡ್ಮಿಟ್ ಆಗಿರುವ ವಿದ್ಯಾರ್ಥಿನಿಯ ಆಸ್ಪತ್ರೆ ಖರ್ಚನ್ನೂ ಹೆದ್ದಾರಿ ಅಧಿಕಾರಿಗಳ ತಲೆಗೇ ಕಟ್ಟಿದರೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ಭೇಷ್ ಅನ್ನುತ್ತಿದ್ದರು.

ನೇತ್ರಾವತಿ ಸೇತುವೆಯಲ್ಲಿ ಎದ್ದು ಕುಳಿತ ಕಾಂಕ್ರೀಟ್ ಕಂಬಿ ; ಬಲಿಗಾಗಿ ಕಾದಿದ್ದಾರೆ ಹೆದ್ದಾರಿ ಅಧಿಕಾರಿಗಳು! ಆಪತ್ತು ಬರೋದಕ್ಕೂ ಮುನ್ನ ಜಿಲ್ಲಾಧಿಕಾರಿಗಳೇ ಎಚ್ಚತ್ತುಕೊಳ್ಳಿ

Mangalore Deadly potholes on Netravathi Bridge road where concentrate rods have come up causing death danger to Transporters, officials patch road roughly after Headline Karnataka reported the issue where a Student of MSc in Environmental Science at Mangalore University, suffered a fractured hand after she fell trying to avoid a pothole on the Netravati bridge on national highway 66.