ಕೊಣಾಜೆಯಲ್ಲಿ ಫೈರಿಂಗ್ ; ಕೇರಳದಲ್ಲಿ ಅವಿತುಕೊಂಡಿದ್ದ ರೌಡಿ, 15ಕ್ಕೂ ಹೆಚ್ಚು ಕೇಸು, ಗೂಂಡಾ ಆ್ಯಕ್ಟ್ ಹಾಕಲು ರೆಡಿ ಮಾಡ್ಕೊಂಡಿದ್ದೆವು ; ಕಮಿಷನರ್

17-07-22 01:37 pm       Mangalore Correspondent   ಕರಾವಳಿ

ಹಲವು ಪ್ರಕರಣಗಳಲ್ಲಿ ಉಳ್ಳಾಲ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿ ಮುಕ್ತಾರ್ ಅಹಮ್ಮದ್ ನನ್ನು ಶನಿವಾರ ಸೆರೆ ಹಿಡಿಯಲಾಗಿತ್ತು. ಇಂದು ಬೆಳಗ್ಗೆ ಆತ ಉಪಯೋಗಿಸಿದ್ದ ಬೈಕ್ ಇನ್ನಿತರ ವಾಹನಗಳನ್ನು ವಶಕ್ಕೆ ಪಡೆಯಲು ಅಸೈಗೋಳಿಗೆ ಪೊಲೀಸರು ಆರೋಪಿಯನ್ನು ಕರೆದೊಯ್ದಿದ್ದರು.

ಉಳ್ಳಾಲ, ಜು.17 : ಹಲವು ಪ್ರಕರಣಗಳಲ್ಲಿ ಉಳ್ಳಾಲ ಪೊಲೀಸರಿಗೆ ಬೇಕಾಗಿದ್ದ ನಟೋರಿಯಸ್ ರೌಡಿ ಮುಕ್ತಾರ್ ಅಹಮ್ಮದ್ ನನ್ನು ಶನಿವಾರ ಸೆರೆ ಹಿಡಿಯಲಾಗಿತ್ತು. ಇಂದು ಬೆಳಗ್ಗೆ ಆತ ಉಪಯೋಗಿಸಿದ್ದ ಬೈಕ್ ಇನ್ನಿತರ ವಾಹನಗಳನ್ನು ವಶಕ್ಕೆ ಪಡೆಯಲು ಅಸೈಗೋಳಿಗೆ ಪೊಲೀಸರು ಆರೋಪಿಯನ್ನು ಕರೆದೊಯ್ದಿದ್ದರು. ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ತಪ್ಪಿಸಲು ಪ್ರಯತ್ನಿಸಿದ್ದಾನೆ.  ಉಳ್ಳಾಲ ಇನ್ಸ್ ಪೆಕ್ಟರ್ ಎಚ್ಚರಿಕೆ ನೀಡಿದರೂ, ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. 

ಕೊಣಾಜೆ ಠಾಣೆ ಬಳಿಯ ಕೂಗಳತೆ ದೂರದಲ್ಲಿ ಘಟನೆ ನಡೆದಿದ್ದು ಘಟನಾ ಪ್ರದೇಶಕ್ಕೆ ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ‌

ಗಾಯಗೊಂಡ ರೌಡಿಯನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರೌಡಿ, ಉಳ್ಳಾಲ ಧರ್ಮನಗರ ಬೊಟ್ಟು ನಿವಾಸಿಯಾಗಿದ್ದು ವಿವಿಧ ಠಾಣೆಗಳಲ್ಲಿ 15ಕ್ಕೂ ಹೆಚ್ಚು ಪ್ರಕರಣ ಎದುರಿಸುತ್ತಿದ್ದಾನೆ. 2014 ರಲ್ಲಿ ಪಾತಕ ಲೋಕಕ್ಕೆ ಎಂಟ್ರಿಯಾಗಿದ್ದ ಮುಕ್ತಾರ್, ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣ ಎದುರಿಸುತ್ತಿದ್ದಾನೆ. 5 ವರುಷಗಳಲ್ಲಿ ಆರು ಗಂಭೀರ ಪ್ರಕರಣಗಳಲ್ಲಿ ಮುಕ್ತಾರ್ ಭಾಗಿಯಾಗಿದ್ದು ಕೇರಳ ಭಾಗದಲ್ಲಿ ಅವಿತುಕೊಂಡಿದ್ದ. ಆರು ಕೊಲೆಯತ್ನ, ಎರಡು ರಾಬರಿ, ಆರ್ಮ್ಸ್ ಆ್ಯಕ್ಟ್ ಪ್ರಕರಣ ಇದೆ. ಆರೋಪಿ ವಿರುದ್ಧ ಆರು ಜಾಮೀನು‌ ರಹಿತ ವಾರೆಂಟ್ ಜಾರಿಯಾಗಿತ್ತು. 14-15 ಜನ ಈತನ ಜೊತೆಗೆ ಕೃತ್ಯದಲ್ಲಿ ಸಹಕರಿಸಿದ್ದಾರೆ. ಅವರ ಬಗ್ಗೆ ಮಾಹಿತಿ ಸಿಕ್ಕಿದ್ದು ಪೊಲೀಸರು ಹಿಂದೆ ಬಿದ್ದಿದ್ದಾರೆ. ಆರೋಪಿ ವಿರುದ್ಧ ಗೂಂಡಾ ಏಕ್ಟ್ ಹಾಕಲು ತಯಾರಿ ನಡೆಸಿದ್ದೆವು ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ. 

ಉಳ್ಳಾಲ ಪೊಲೀಸರು ಶನಿವಾರ ಆತನನ್ನು ವಶಕ್ಕೆ ಪಡೆದಿದ್ದರು. ಇಂದು ಬೆಳಗ್ಗೆ ಹೆಚ್ಚಿನ ವಿಚಾರಣೆಗಾಗಿ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ಮತ್ತು ತಂಡ ಕೊಣಾಜೆ ಠಾಣೆಯ ಬಳಿಯ ಅಸೈಗೋಳಿ ಅಭಯಾಶ್ರಮದ ಬಳಿಗೆ ಸ್ಥಳ ಮಹಜರಿಗೆ ಕರೆದೊಯ್ದಿದ್ದಾರೆ. ಈ ವೇಳೆ ಬೈಕ್ ಪೊದೆಯಲ್ಲಿದೆ ಎಂದು ಹೇಳಿದ್ದರಿಂದ ಅಲ್ಲಿಗೆ ತೆರಳಿದ್ದರು. ಈ ವೇಳೆ, ಇಬ್ಬರು ಪೊಲೀಸ್ ಸಿಬಂದಿಗೆ ಹಲ್ಲೆಗೈದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಸಂದೀಪ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಮಾತು ಕೇಳದ ಕಾರಣ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾಗಿ ಮಾಹಿತಿ ನೀಡಿದ್ದಾರೆ. 

ಉಳ್ಳಾಲ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ವಾಸುದೇವ ಚೌಹಾಣ್ ಮತ್ತು ಅಕ್ಬರ್ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊಣಾಜೆಯಲ್ಲಿ ರೌಡಿಶೀಟರ್ ಮೇಲೆ ಫೈರಿಂಗ್ ; ಪೊಲೀಸರಿಗೆ ಹಲ್ಲೆಗೈದಿದ್ದಕ್ಕೆ ಗುಂಡು ಹಾರಿಸಿ ಬಂಧನ 

Police firing by Ullal police in Mangalore, Accused was booked in more than 15 cases, goonda act fixed says Police Commissioner Shashi Kumar. The accused tried to assault the police personnel during spot inspection after which Ullal Inspector Sandeep had to open fire.