ಪಂಜಿಕಲ್ಲು ಗುಡ್ಡ ಕುಸಿತ ಪ್ರಕರಣ ; ಮಣ್ಣಿನಡಿ ಸಿಲುಕಿದವರನ್ನು ಆಸ್ಪತ್ರೆಗೆ ಅಲೆದಾಡಿಸಿದರು, ಇವರ ನಿರ್ಲಕ್ಷ್ಯದಿಂದ ಸಾವು ಆಗಿತ್ತು !

12-07-22 09:46 pm       Mangalore Correspondent   ಕರಾವಳಿ

ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿಯೇ ಮೂರು ಕಾರ್ಮಿಕರು ಸಾವನ್ನಪ್ಪುವಂತಾಗಿದೆ.

ಮಂಗಳೂರು, ಜುಲೈ 12: ಬಂಟ್ವಾಳ ತಾಲೂಕಿನ ಪಂಜಿಕಲ್ಲಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿಯೇ ಮೂರು ಕಾರ್ಮಿಕರು ಸಾವನ್ನಪ್ಪುವಂತಾಗಿದೆ. ದುರಂತ ನಡೆದ ಸಂದರ್ಭದಲ್ಲಿ ನಾಲ್ಕು ಗಂಟೆಗಳ ಕಾಲ ರಕ್ಷಣಾ ಕಾರ್ಯಕ್ಕೆ ಬಂದಿರಲಿಲ್ಲ. ಸ್ಥಳೀಯರು ಇಬ್ಬರನ್ನು ರಕ್ಷಿಸಿ, ಆಸ್ಪತ್ರೆಗೆ ಒಯ್ದರೂ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ವೇಳೆ ಈ ಬಗ್ಗೆ ಮಾಹಿತಿ ನೀಡಿದ ರಮಾನಾಥ ರೈ, ದುರಂತದ ಸಂದರ್ಭದಲ್ಲಿ ತಾಲೂಕು ಆಡಳಿತವಾಗಲೀ, ಜಿಲ್ಲಾಡಳಿತವಾಗಲೀ ಸರಿಯಾಗಿ ಸ್ಪಂದಿಸಲಿಲ್ಲ. ಒಬ್ಬರನ್ನು ಎಜೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಯಾರು ಬಿಲ್ ಕೊಡುವುದೆಂದು ಹೇಳಿ ಚಿಕಿತ್ಸೆಗೆ ನಿರಾಕರಿಸಲಾಗಿತ್ತು. ಆನಂತರ ಮಂಗಳಾ ಆಸ್ಪತ್ರೆಗೆ ಒಯ್ದು ಅಲ್ಲಿಯೂ ನಿರಾಕರಿಸಿ, ಕೊನೆಗೆ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ವಿಳಂಬವಾಗಿದ್ದರಿಂದ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ ಸ್ಪಂದಿಸಿ ಚಿಕಿತ್ಸೆಯ ಭರವಸೆ ನೀಡುತ್ತಿದ್ದರೆ ಇಂತಹ ಸ್ಥಿತಿ ಆಗುತ್ತಿರಲಿಲ್ಲ.

ಸ್ಥಳೀಯರೇ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಮೊದಲಿಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಲಭಿಸಿರಲಿಲ್ಲ. ದುರಂತ ನಡೆದಾಗ ಸ್ಥಳಕ್ಕೆ ವೈದ್ಯರ ನಿಯೋಗವನ್ನೂ ಕಳಿಸಿಕೊಟ್ಟಿರಲಿಲ್ಲ. ಶಾಸಕರು, ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಸ್ಥಿತಿಯಾಗಿದೆ. ಜಿಲ್ಲೆಯಲ್ಲಿ ಮನೆ ಕುಸಿತ, ಗುಡ್ಡ ಕುಸಿತ ಆಗಿರುವಲ್ಲಿ ಪ್ರತ್ಯೇಕ ವಾಸವಿರಲು ಸೂಚಿಸಲಾಗಿದೆ. ಆದರೆ ಅವರಿಗೆ ಜಿಲ್ಲಾಡಳಿತದಿಂದ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ ಎಂದು ರಮಾನಾಥ ರೈ ಹೇಳಿದರು.

ರಾಜ್ಯ ಸರಕಾರದ ಸ್ಥಿತಿ ಹೇಗಿದೆ ಎಂದರೆ, ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಮೂರು ವರ್ಷಗಳ ಹಿಂದೆ ನೆರೆ ಬಂದು ನಿರಾಶ್ರಿತರಾದವರು ಈಗಲೂ ಶೆಡ್ ನಲ್ಲಿದ್ದಾರೆ. ರಾಜ್ಯ ಸರಕಾರ ಪರಿಹಾರ ಕ್ರಮ ಕೈಗೊಳ್ಳಲು ಒಂದೋ ವಿಪಕ್ಷದವರು ಪ್ರತಿಭಟನೆ ಮಾಡಬೇಕು, ಇಲ್ಲವೇ ಮಾಧ್ಯಮದವರು ಸುದ್ದಿ ಮಾಡಿ ಬಿಸಿ ಮುಟ್ಟಿಸಬೇಕು ಎನ್ನುವಂತಾಗಿದೆ. ಇದೊಂದು ನಿರ್ಜೀವ ಸರಕಾರ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ ಎಂದರು ರಮಾನಾಥ ರೈ.

ಭಾರೀ ಮಳೆಗೆ ವಗ್ಗದಲ್ಲಿ ಗುಡ್ಡ ಕುಸಿತ ; ಶೆಡ್ ನೆಲಸಮ, ಓರ್ವ ಕಾರ್ಮಿಕ ಸಾವು 

ಪಂಜಿಕಲ್ಲು ಗುಡ್ಡ ಕುಸಿತ ಪ್ರಕರಣ ; ಮತ್ತಿಬ್ಬರು ಕೇರಳದ ಕಾರ್ಮಿಕರು ಸಾವು, ರಬ್ಬರ್ ಟ್ಯಾಪಿಂಗ್ ಬಂದಿದ್ದವರು ದುರಂತ ಮೃತ್ಯು 

Ramanath Rai slams district administration for the death of three labourers due to a landslide in Bantwal.