ಕಾಣಿಯೂರು ಹೊಳೆಗೆ ಬಿದ್ದ ಕಾರು ; ಕಡಿಮೆಯಾದ ಮಳೆ, ಇಬ್ಬರು ಯುವಕರ ಶವ ಸ್ಥಳದಲ್ಲಿಯೇ ಪತ್ತೆ ! 

12-07-22 12:46 pm       Mangalore Correspondent   ಕರಾವಳಿ

ಕಾಣಿಯೂರು ಹೊಳೆಗೆ ಬಿದ್ದ ಕಾರಿನಲ್ಲಿದ್ದು ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಕಾರು ಬಿದ್ದ ಜಾಗದಿಂದ 500 ಮೀಟರ್ ದೂರದಲ್ಲಿ ಎರಡೂ ಶವಗಳು ಪತ್ತೆಯಾಗಿವೆ. 

ಪುತ್ತೂರು, ಜುಲೈ 12 : ಕಾಣಿಯೂರು ಹೊಳೆಗೆ ಬಿದ್ದ ಕಾರಿನಲ್ಲಿದ್ದು ನಾಪತ್ತೆಯಾಗಿದ್ದ ಇಬ್ಬರು ಯುವಕರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಕಾರು ಬಿದ್ದ ಜಾಗದಿಂದ 500 ಮೀಟರ್ ದೂರದಲ್ಲಿ ಎರಡೂ ಶವಗಳು ಪತ್ತೆಯಾಗಿವೆ. 

ಜುಲೈ 10ರ ನಸುಕಿನಲ್ಲಿ ಕಾಣಿಯೂರಿನ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದಿತ್ತು. ಕಾರಿನಲ್ಲಿದ್ದ ವಿಟ್ಲದ ಧನುಷ್ (26)ಮತ್ತು ಕನ್ಯಾನ ನಿವಾಸಿ ಧನಂಜಯ(24) ಎಂಬವರು ನಾಪತ್ತೆಯಾಗಿದ್ದರು. ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋದ ಬಗ್ಗೆ ಶಂಕೆ ವ್ತಕ್ತವಾಗಿತ್ತು. 

ಭಾನುವಾರ ಬೆಳಗ್ಗೆ ವಿಷಯ ತಿಳಿಯುತ್ತಲೇ ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ಸಿಬಂದಿ ಹುಡುಕಾಟ ನಡೆಸಿದ್ದರು. ಎರಡು ದಿನ ಹುಡುಕಾಟ ನಡೆಸಿದರೂ ಪತ್ತೆ ಆಗಿರಲಿಲ್ಲ. ಬಹುತೇಕ ಹೊಳೆಯಲ್ಲಿ ಕೊಚ್ಚಿ ಹೋಗಿ ಮುಂದೆ ಕುಮಾರಧಾರಾ ನದಿಗೆ ಸೇರಿದ್ದಿರಬಹುದೆಂಬ ಶಂಕೆ ಇತ್ತು. ಆದರೆ ಸೋಮವಾರ ಮಳೆ ಕಡಿಮೆಯಾಗಿತ್ತು. ಇದರಿಂದಾಗಿ ಹೊಳೆಯಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿತ್ತು. 

ಇಂದು ಬೆಳಗ್ಗೆ ಸ್ಥಳೀಯರು ಹೊಳೆಯಲ್ಲಿ ಗಮನಿಸಿದಾಗ, ಬೈತಡ್ಕ ಸೇತುವೆಯಿಂದ ಅನತಿ ದೂರದಲ್ಲಿ ಮರದ ದಿಮ್ಮಿಯ ಎಡೆಯಲ್ಲಿ ಸಿಕ್ಕಿಕೊಂಡ ರೀತಿ ಒಂದು ಶವ ಪತ್ತೆಯಾಗಿದೆ. ಆನಂತರ ಹತ್ತು ಗಂಟೆ ವೇಳೆಗೆ, ಅಲ್ಲಿಂದ ಸ್ವಲ್ಪ ದೂರದಲ್ಲಿ ಮತ್ತೊಂದು ಶವವೂ ಸಿಕ್ಕಿದೆ. ಎರಡೂ ಶವಗಳನ್ನು ಪೊಲೀಸರು ವಶಕ್ಕೆ ಪಡೆದು ಪೋಸ್ಟ್ ಮಾರ್ಟಂ ನಡೆಸಲು ವೈದ್ಯರ ವಶಕ್ಕೆ ನೀಡಿದ್ದಾರೆ.

ಹೊಳೆಗೆ ಬಿದ್ದ ಕಾರು ಪತ್ತೆ ; ವಿಟ್ಲದ ಯುವಕರಿಬ್ಬರು ಕೊಚ್ಚಿ ಹೋಗಿರುವ ಶಂಕೆ, ಸ್ಥಳದಲ್ಲಿ ಜನಸಾಗರ !

ಮಧ್ಯರಾತ್ರಿ ಹೊಳೆಗೆ ಬಿದ್ದ ಕಾರು ; ಕಾಣಿಯೂರು ಹೊಳೆಯಲ್ಲಿ ಅಗ್ನಿಶಾಮಕ ದಳ ಹುಡುಕಾಟ, ಕಾರಿನಲ್ಲಿ ಮೂವರಿದ್ದ ಶಂಕೆ !

 

Puttur Speeding car falls into river, missing bodies of the two found. The car fell on Sunday after it lost its control.