ಅಡ್ಯಾರ್ - ಕಣ್ಣೂರು ; ಗುಡ್ಡ ಕುಸಿಯುವ ಆತಂಕದಲ್ಲಿ ಮನೆಗಳು, ಬಿರುಕು ಬಿಟ್ಟ ಗುಡ್ಡ, ಭೀತಿಯಲ್ಲಿ ನಿವಾಸಿಗಳು ! 

08-07-22 03:48 pm       Mangalore Correspondent   ಕರಾವಳಿ

ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನ ಬಳ್ಳೂರುಗುಡ್ಡೆ ಎಂಬಲ್ಲಿ ಗುಡ್ಡ ಬಿರುಕು ಬಿಟ್ಟಿದ್ದು ಐದಾರು ಮನೆಗಳ ಮೇಲೆ ಕುಸಿದು ಬೀಳುವ ಆತಂಕ ಎದುರಾಗಿದೆ. 

ಮಂಗಳೂರು, ಜುಲೈ 8 : ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನ ಬಳ್ಳೂರುಗುಡ್ಡೆ ಎಂಬಲ್ಲಿ ಗುಡ್ಡ ಬಿರುಕು ಬಿಟ್ಟಿದ್ದು ಐದಾರು ಮನೆಗಳ ಮೇಲೆ ಕುಸಿದು ಬೀಳುವ ಆತಂಕ ಎದುರಾಗಿದೆ. 

ರೈಲ್ವೇ ಹಳಿಯ ಪಕ್ಕದಲ್ಲೇ ಇರುವ ಗುಡ್ಡ ಭಾರೀ ಮಳೆಗೆ ಬಿರುಕು ಬಿಟ್ಟಿದ್ದು ಅಲ್ಲಿಯ ನಿವಾಸಿಗಳು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಗುಡ್ಡದಲ್ಲಿ ಒತ್ತೊತ್ತಾಗಿ ಮನೆಗಳಿದ್ದು ಮೆಟ್ಟಿಲು ಇರುವಲ್ಲಿ ಮಣ್ಣು ಕುಸಿದು ಬಿದ್ದಿದೆ. ಅಬ್ದುಲ್ ರಹಮಾನ್ ಎಂಬವರ ಮನೆಯ ಸ್ಥಿತಿ ಈಗಲೋ ಆಗಲೋ ಅನ್ನುವಂತಿದೆ. 

ಮಹಾನಗರ ಪಾಲಿಕೆಯ ಆಡಳಿತ ಸ್ಥಳದಲ್ಲಿ ಆತಂಕ ಎದುರಿಸುತ್ತಿರುವ ಐದು ಮನೆಗಳ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಗೊಳ್ಳಲು ಸೂಚನೆ ನೀಡಿದೆ. ಪಕ್ಕದ ಅಂಗನವಾಡಿ ಕಟ್ಟಡದಲ್ಲಿ ಇರುವಂತೆ ಸ್ಥಳೀಯ ಕಾರ್ಪೊರೇಟರ್ ಹೇಳಿದ್ದಾರಂತೆ. ಈ ನಡುವೆ, ಗುಡ್ಡ ಕುಸಿಯದಂತೆ ಬಿರುಕು ಬಿಟ್ಟಿರುವ ಜಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಗುಡ್ಡ ಕುಸಿದ ಕೆಳಭಾಗದಲ್ಲಿರುವ ಮನೆಗಳ ನಿವಾಸಿಗಳು ಸಂಬಂಧಿಕರ ಮನೆಗಳಿಗೆ ತೆರಳಿ ಉಳಿದುಕೊಂಡಿದ್ದಾರೆ. 

30 ವರ್ಷಗಳಿಗೂ ಹೆಚ್ಚು ಕಾಲದಿಂದ ಇದ್ದೇವೆ. ಈಗ ಇಂತಹ ಸ್ಥಿತಿ ಬಂದಿದೆ. ಈವರೆಗೂ ಗುಡ್ಡ ಕುಸಿದಿರಲಿಲ್ಲ. ಗುಡ್ಡ ಕುಸಿಯದಂತೆ ಇಲ್ಲಿ ತುರ್ತಾಗಿ ಕಾಂಕ್ರೀಟ್ ತಡೆಗೋಡೆ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಐದಾರು ಮನೆಗಳ ನಿವಾಸಿಗಳು ಅಪಾಯ ಭೀತಿಯಲ್ಲಿದ್ದು ತಾತ್ಕಾಲಿಕವಾಗಿ ಬೇರೆ ಕಡೆ ಉಳಿದುಕೊಂಡಿದ್ದಾರೆ. ಮಳೆ ತೀವ್ರಗೊಂಡರೆ ಮನೆಗಳು ಕುಸಿಯುವ ಸಾಧ್ಯತೆ ಇದೆ.

Mangalore Landslide fear in Adyar Kannur area, residents in trouble.