ಶಾಲೆಗಳಲ್ಲಿ ಸಂಕಷ್ಟ ಎದುರಾಗಿದೆ, ಪಠ್ಯದ ನೆಪದಲ್ಲಿ ರಾಡಿ ಎಬ್ಬಿಸುತ್ತಿದ್ದಾರೆ ; ರಮಾನಾಥ ರೈ

25-06-22 10:17 pm       Mangalore Correspondent   ಕರಾವಳಿ

ಶಿಕ್ಷಣ ಇಲಾಖೆಯನ್ನು ದುರ್ಬಲಗೊಳಿಸುವುದು, ಅಲ್ಲಿ ತಪ್ಪುಗಳನ್ನು ತುಂಬಿಸಿ ಮಕ್ಕಳ ತಲೆಯಲ್ಲಿ ದೌರ್ಬಲ್ಯ ತುಂಬುವ ಪ್ರಯತ್ನ ನಡೆಯುತ್ತಿದೆ. ಶಾಲೆ ಶುರುವಾಗಿ ತಿಂಗಳು ಕಳೆಯುತ್ತಾ ಬಂದರೂ, ಪಠ್ಯಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ.

ಮಂಗಳೂರು, ಜೂನ್ 25: ಶಿಕ್ಷಣ ಇಲಾಖೆಯನ್ನು ದುರ್ಬಲಗೊಳಿಸುವುದು, ಅಲ್ಲಿ ತಪ್ಪುಗಳನ್ನು ತುಂಬಿಸಿ ಮಕ್ಕಳ ತಲೆಯಲ್ಲಿ ದೌರ್ಬಲ್ಯ ತುಂಬುವ ಪ್ರಯತ್ನ ನಡೆಯುತ್ತಿದೆ. ಶಾಲೆ ಶುರುವಾಗಿ ತಿಂಗಳು ಕಳೆಯುತ್ತಾ ಬಂದರೂ, ಪಠ್ಯಪುಸ್ತಕ ತಲುಪಿಸಲು ಸಾಧ್ಯವಾಗಿಲ್ಲ. ಪರಿಷ್ಕರಣೆ ನೆಪದಲ್ಲಿ ಪುಸ್ತಕ ವಿತರಿಸುವುದನ್ನೇ ನಿಲ್ಲಿಸಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ್ದ ನಲಿ ಕಲಿ ಯೋಜನೆ, ವಿದ್ಯಾಸಿರಿ ಯೋಜನೆಯನ್ನೂ ನಿಲ್ಲಿಸಿದ್ದಾರೆ. ಶಾಲೆಗಳಿಗೆ ಕಲಿಕೋಪಕರಣಕ್ಕೆ ಹಣಕಾಸು ಒದಗಿಸದೆ ಶಾಲೆಗಳ ಮುಖ್ಯೋಪಾಧ್ಯಾಯರು ಕಷ್ಟಪಡುತ್ತಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.  

ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಕಡ್ಡಾಯ ಶಿಕ್ಷಣ ಅನ್ನುವ ಪರಿಕಲ್ಪನೆಯನ್ನು ಬಿಜೆಪಿ ಸರಕಾರ ಗಾಳಿಗೆ ತೂರುತ್ತಿದೆ. ಇದರಿಂದ ಸರಕಾರಿ ಶಾಲೆಯಲ್ಲಿ ಕಲಿಯುವ ಸಾಮಾನ್ಯ ಮಕ್ಕಳಿಗೆ ತೊಂದರೆಯಾಗಿದೆ. ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆಗ್ತಾ ಇಲ್ಲ. ಪರಿಶಿಷ್ಟ ಪಂಗಡದ ಮಕ್ಕಳಿಗೆ ಸವಲತ್ತು ಸಿಗುತ್ತಿಲ್ಲ. ಸರಕಾರಿ ಶಾಲೆಗಳ ಮಕ್ಕಳ ಹಿತಕ್ಕಾಗಿ ಏನೆಲ್ಲ ಮಾಡಬೇಕಿತ್ತೋ ಅದನ್ನು ಬಿಟ್ಟು ಹಿಡನ್ ಅಜೆಂಡಾವನ್ನು ಹೇರುತ್ತಿದೆ. ಬಿಜೆಪಿ ಸರಕಾರ ನಲ್ವತ್ತು ಪರ್ಸೆಂಟ್ ಸಿಗುವ ಯೋಜನೆಗಳಿಗೆ ಮಾತ್ರ ಅನುದಾನ ನೀಡುತ್ತಿದ್ದಾರೆ ಎಂದು ಹೇಳಿದರು.

ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನ ವಿರುದ್ಧ ಆರೋಪ ಇದ್ದರೂ, ಮಂಗಳೂರಿನಲ್ಲಿ ಸನ್ಮಾನಿಸಲು ಮುಂದಾಗಿರುವುದು ನೋವುಂಡ ಸಮಾಜಕ್ಕೆ ಉಪ್ಪು ಸವರಿದಂತಾಗಿದೆ. ಹಿಂದುಳಿದ ವರ್ಗ ಮತ್ತು ಹಿಂದು ಸಮಾಜ ಪಠ್ಯಪುಸ್ತಕ ಪರಿಷ್ಕರಣೆಯಿಂದ ನೋವು ಉಂಡಿದೆ. ಪಠ್ಯದಲ್ಲಿ ಏನೆಲ್ಲ ಬದಲಾವಣೆ ಆಗಿದೆ, ಅದರಲ್ಲಿ ಏನೆಲ್ಲ ಹಂಗಿಸಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಆ ರೀತಿಯ ಅವಮಾನ ಮಾಡಿದ ವ್ಯಕ್ತಿಯನ್ನು ನಾಗರಿಕ ಸನ್ಮಾನ ನೆಪದಲ್ಲಿ ಸಮ್ಮಾನಿಸುವುದು ಎಷ್ಟು ಸರಿ. ಇದು ಇಡೀ ಸಮಾಜಕ್ಕೆ ಮಾಡಿದ ಅವಮಾನ ಎಂದು ಹೇಳಿದ ರಮಾನಾಥ ರೈ, ಬುದ್ಧಿವಂತರು ಎಂದು ಇತರರು ಹೇಳುವ ಜಾಗದಲ್ಲಿ ಈ ರೀತಿಯ ಬೆಳವಣಿಗೆ ಆಗಿರುವುದು ದುಃಖದ ವಿಷಯ. ಈ ರೀತಿ ಆಗಬಾರದಿತ್ತು ಎಂದು ಹೇಳಿದರು.

ಯಾರದ್ದೇ ಭಾವನೆಗೆ ನೋವು ಮಾಡುವುದು ತಪ್ಪು. ಅತ್ಯಾಚಾರಿಗಳ ಧರ್ಮ, ಕೊಲೆಗಡುಕರ ಧರ್ಮ ಎಂದು ಭಾಷಣ ಮಾಡಿದಲ್ಲಿ ಆಯಾ ಧರ್ಮದ ಜನರಿಗೆ ನೋವಾಗುವುದಿಲ್ಲವೇ.. ನಮ್ಮ ಮನಸ್ಸಿನ ಮೇಲೆ ನೋವು ಆಗುವುದಿಲ್ಲವೇ.. ಆದರೆ ಪ್ರತೀ ಬಾರಿ ಅಂತಹುದೇ ಪ್ರಶ್ನೆಗಳನ್ನು ಕೇಳಿ ಕೆದಕಿದರೆ ಅವರ ಮನಸ್ಸಿನಲ್ಲಿ ಯಾವ ಪರಿಣಾಮಗಳು ಉಂಟಾಗಲ್ಲ ಎಂದು ಪ್ರಶ್ನೆ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ರಕ್ಷಿತ್ ಶಿವರಾಂ, ಮಮತಾ ಗಟ್ಟಿ, ನವೀನ್ ಡಿಸೋಜ ಮತ್ತಿತರರಿದ್ದರು.

Government is creating confusion and panic amid School children due to text book row slams Ramanath Rai.