ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು ; 17 ಮೆಟ್ರೋ ನಿಲ್ದಾಣಗಳು ಬಂದ್, ಎಲ್ಲೇ ಕರೆದರೂ ಮಾತುಕತೆಗೆ ಸಿದ್ಧ ಎಂದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ 

23-07-26 05:48 pm       HK News Desk   ದೇಶ - ವಿದೇಶ

ಭರವಸೆಗೆ ಬಗ್ಗದ ವಿದ್ಯಾರ್ಥಿಗಳು ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ, ದೆಹಲಿಯಿಂದ ಹೊರಟ ಪ್ರತಿಭಟನೆಯ ಕಿಚ್ಚು ದೇಶದ ಉದ್ದಗಲಕ್ಕೆ ಹರಡಿದೆ. ಈ ನಡುವೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮತ್ತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿಭಟನಾಕಾರರು ಎಲ್ಲಿ ಹೇಳ್ತಾರೋ ಅಲ್ಲಿಯೇ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ನವದೆಹಲಿ, ಜುಲೈ 23 

ಪ್ರಧಾನಿ ನರೇಂದ್ರ ಮೋದಿ ಅವರ 
ಭರವಸೆಗೆ ಬಗ್ಗದ ವಿದ್ಯಾರ್ಥಿಗಳು ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಇದೇ ವೇಳೆ, ದೆಹಲಿಯಿಂದ ಹೊರಟ ಪ್ರತಿಭಟನೆಯ ಕಿಚ್ಚು ದೇಶದ ಉದ್ದಗಲಕ್ಕೆ ಹರಡಿದೆ. ಈ ನಡುವೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮತ್ತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರತಿಭಟನಾಕಾರರು ಎಲ್ಲಿ ಹೇಳ್ತಾರೋ ಅಲ್ಲಿಯೇ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿತೇಂದ್ರ ಸಿಂಗ್, ಪ್ರತಿಭಟನಾಕಾರರು ಕೇಳುವ ಸಮಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಮಾತುಕತೆಯ ಸಮಯದಲ್ಲಿ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಮತ್ತು ನಾನು ಇಬ್ಬರೂ ಇರುತ್ತೇವೆ. ನನ್ನ ಕಚೇರಿಯಲ್ಲಾಗಲಿ ಅಥವಾ ಜೆ.ಪಿ. ನಡ್ಡಾ ಅವರ ನಿವಾಸದಲ್ಲಾಗಲಿ, ಪ್ರತಿಭಟನಾಕಾರರು ಬಯಸುವ ಇನ್ನಾವುದೇ ಸ್ಥಳದಲ್ಲಿ ಭೇಟಿಯಾಗಿ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಎಂದರು.

ಎರಡು ದಿನಗಳಿಂದ ನಾಲ್ಕು ಬಾರಿ ನಿಮ್ಮನ್ನು ಸಂಪರ್ಕಿಸಲು ನಾವು ಪ್ರಯತ್ನಿಸಿದ್ದೇವೆ. ಮಾತುಕತೆ ನಡೆಸುವ ಸಲುವಾಗಿ ನಮ್ಮೊಂದಿಗೆ ಕುಳಿತು ಚರ್ಚಿಸಲು ಬರುವಂತೆ ಮತ್ತೊಮ್ಮೆ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ ಪ್ರತಿಭಟನಾ ಸ್ಥಳದಲ್ಲಿ ಅಥವಾ ತಟಸ್ಥ ಸ್ಥಳವೊಂದರಲ್ಲಿ ಮಾತುಕತೆ ನಡೆಯಬೇಕು ಎಂದು ಸಿಜೆಪಿ ನಾಯಕರು ಪಟ್ಟು ಹಿಡಿದಿದ್ದು, ಮಾತುಕತೆಗೆ ಪ್ರಮುಖ ತೊಡಕಾಗಿ ಪರಿಣಮಿಸಿದೆ. 

ಇದಕ್ಕೂ ಮುನ್ನ ಕೇಂದ್ರ ಸಚಿವ ಜೆ.ಪಿ.ನಡ್ಡಾ 'ಕಾಕ್ರೋಚ್ ಜನತಾ ಪಾರ್ಟಿ'ಯನ್ನು ಮಾತುಕತೆಗೆ ಆಹ್ವಾನಿಸಿದ್ದರು. ಎರಡು ದಿನಗಳ ಹಿಂದೆ ಪಕ್ಷದ ನಾಯಕರು ಭೇಟಿಯಾಗಿ ತಮ್ಮ ಅಹವಾಲನ್ನು ತಿಳಿಸಿದ್ದರೂ, ಸರ್ಕಾರ ಸಕಾರಾತ್ಮಕ ತೀರ್ಮಾನಕ್ಕೆ ಬರಲು ವಿಫಲವಾಗಿತ್ತು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಣೆ ಹೊತ್ತುಕೊಳ್ಳಬೇಕು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಳೆದ 26 ದಿನಗಳಿಂದ ಜಂತರ್ ಮಂತರ್‌ನಲ್ಲಿ ಸಿಜೆಪಿ ವಿದ್ಯಾರ್ಥಿಗಳೊಂದಿಗೆ ಸೇರಿ ಪ್ರತಿಭಟನೆ ನಡೆಸುತ್ತಿದೆ. ಮೂರು ದಿನಗಳಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡ ಬಳಿಕ ವಿಪಕ್ಷ ನಾಯಕರು ಕೂಡ ಸಾಥ್ ನೀಡಿದ್ದರು. ಅಲ್ಲದೆ, ದೆಹಲಿ ನಗರೆದೆಲ್ಲೆಡೆ ಪ್ರತಿಭಟನೆ ಹರಡಿದ್ದರಿಂದ ಮೆಟ್ರೋ ಸಂಚಾರಕ್ಕೂ ಅಡ್ಡಿಯಾಗಿದೆ.‌

17 ಮೆಟ್ರೋ ನಿಲ್ದಾಣಗಳು ಬಂದ್ 

ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ಸಂಚಾರಕ್ಕೆ ತೊಡಕಾಗಿದೆ‌. ನಿರಂತರ ಪ್ರತಿಭಟನೆ ಕಾರಣದಿಂದ ಮೆಟ್ರೋ ರೈಲು ನಿಗಮವು ಇದೀಗ ಝಂಡೇವಾಲನ್ ಮೆಟ್ರೋ ನಿಲ್ದಾಣವನ್ನೂ ಮುಚ್ಚಿದೆ. ಇದರೊಂದಿಗೆ ರಾಜಧಾನಿಯಲ್ಲಿ ಮುಚ್ಚಲಾದ ಒಟ್ಟು ಮೆಟ್ರೋ ನಿಲ್ದಾಣಗಳ ಸಂಖ್ಯೆ 17ಕ್ಕೇರಿದೆ. 

ವಿದ್ಯಾರ್ಥಿಗಳ ಪ್ರತಿಭಟನೆಗೆ ಹೆದರಿ ಕೊನೆಗೂ ನಿನ್ನೆ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ, ಯುವ ಸಮುದಾಯದ ಕಲ್ಯಾಣಕ್ಕಿಂತ ಬೇರಾವುದೇ ಮಹತ್ವದ್ದಲ್ಲ. ಪರೀಕ್ಷೆ ಅಕ್ರಮ ಎಸಗಿದವರನ್ನು ಖಂಡಿತವಾಗಿಯೂ ಶಿಕ್ಷಿಸುತ್ತೇವೆ. ಅದಕ್ಕಾಗಿ ತ್ವರಿತ ಗತಿಯ ನ್ಯಾಯಾಲಯ ಸ್ಥಾಪನೆ ಮಾಡುತ್ತೇವೆ. ಈಗಾಗಲೇ ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದೇನೆ ಎಂದು ಹೇಳಿದ್ದರು.‌ ಆದರೆ ಪ್ರತಿಭಟನಕಾರರು ಮೋದಿ ಮಾತಿಗೆ ಒಪ್ಪದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಸೇರಿ ಮೂರು ಬೇಡಿಕೆ ಈಡೇರಿಸಲು ಬೇಡಿಕೆ ಇಟ್ಟಿದ್ದಾರೆ.