ಬಂಟ್ವಾಳ ; ಮಳೆ-ಗಾಳಿಗೆ ಶಾಲಾ ಬಸ್ಸಿಗೆ ಉರುಳಿ ಬಿದ್ದ ಬೃಹತ್ ಮರ, ಆರು ವರ್ಷದ ಪುಟಾಣಿ ಸಾವು, ನಾಲ್ವರು ಮಕ್ಕಳಿಗೆ ಗಾಯ

22-07-26 07:37 pm       HK News Staffer   ಕ್ರೈಂ

ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು ಆರು ವರ್ಷದ ಪುಟಾಣಿ ಬಾಲಕಿ ವಿದ್ಯಾರ್ಥಿನಿ ದುರಂತ ಸಾವಿಗೀಡಾದ ಘಟನೆ ನಡೆದಿದೆ.‌

ಬಂಟ್ವಾಳ, ಜುಲೈ 22: ಬಂಟ್ವಾಳ ತಾಲೂಕಿನ ಬರಿಮಾರು ಎಂಬಲ್ಲಿ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದಿದ್ದು ಆರು ವರ್ಷದ ಪುಟಾಣಿ ಬಾಲಕಿ ವಿದ್ಯಾರ್ಥಿನಿ ದುರಂತ ಸಾವಿಗೀಡಾದ ಘಟನೆ ನಡೆದಿದೆ.‌

ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿರನ್ವಿ(1) ಎಂಬ ಒಂದನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಮಕ್ಕಳನ್ನು ಮನೆಗೆ ಬಿಟ್ಟು ಬರುತ್ತಿದ್ದ ವೇಳೆ ಘಟನೆ ನಡೆದಿದ್ದರಿಂದ ಬಸ್ಸಿನಲ್ಲಿ ಹೆಚ್ಚು ಮಕ್ಕಳಿರಲಿಲ್ಲ. ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ಸಾಗುತ್ತಿದ್ದಾಗ ಮಳೆ ಗಾಳಿಗೆ ಏಕಾಏಕಿ ಮರ ಉರುಳಿ ಬಸ್ ಮೇಲೆ ಬಿದ್ದಿದ್ದರಿಂದ ಅದರಲ್ಲಿದ್ದ ನಾಲ್ಕು ಮಕ್ಕಳಿಗೆ ಪೆಟ್ಟು ಬಿದ್ದಿದೆ. 

ಬಸ್ ಕಟ್ಟಡದ ಬದಿಯಲ್ಲಿ ನಿಂತಿದ್ದರಿಂದ ಮರಕ್ಕೆ ಕಟ್ಟಡದ ಆಧಾರ ಸಿಕ್ಕಂತಾಗಿದ್ದು ಅದರಲ್ಲಿದ್ದ ಇತರರು ಬಚಾವಾಗಿದ್ದಾರೆ. ಶಾಲಾ ಬಸ್ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರಕ್ಕೆ ಸೇರಿದ್ದಾಗಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.