ಸೌಹಾರ್ದ ಸಹಕಾರಿ ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲು ; ಆಡಳಿತ ಪಕ್ಷದ ಸದಸ್ಯರದ್ದೇ ನಿರ್ಲಕ್ಷ್ಯ, ರಾಜ್ಯ ಸರ್ಕಾರಕ್ಕೆ ಮುಜುಗರ 

21-08-25 06:24 pm       Bangalore Correspondent   ಕರ್ನಾಟಕ

ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ 'ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲಾಗಿದ್ದು ರಾಜ್ಯ ಸರ್ಕಾರ ಮುಜುಗರ ಅನುಭವಿಸಿದೆ‌. ಮಸೂದೆಯನ್ನು ಮತಕ್ಕೆ ಹಾಕಿದ ಪರಿಣಾಮ ಆಡಳಿತ ಪಕ್ಷದಲ್ಲಿ ಕನಿಷ್ಠ ಸದಸ್ಯ ಬಲ ಇಲ್ಲದೇ ತಿರಸ್ಕೃತ ಆಗುವಂತಾಯಿತು.

ಬೆಂಗಳೂರು, ಆ.21 : ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ 'ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ಮೇಲ್ಮನೆಯಲ್ಲಿ ಸೋಲಾಗಿದ್ದು ರಾಜ್ಯ ಸರ್ಕಾರ ಮುಜುಗರ ಅನುಭವಿಸಿದೆ‌. ಮಸೂದೆಯನ್ನು ಮತಕ್ಕೆ ಹಾಕಿದ ಪರಿಣಾಮ ಆಡಳಿತ ಪಕ್ಷದಲ್ಲಿ ಕನಿಷ್ಠ ಸದಸ್ಯ ಬಲ ಇಲ್ಲದೇ ತಿರಸ್ಕೃತ ಆಗುವಂತಾಯಿತು. ವಿಧೇಯಕದ ಪರವಾಗಿ 23 ಸದಸ್ಯರು, ಪ್ರತಿಪಕ್ಷಗಳ 26 ಸದಸ್ಯರು ಮತ ಚಲಾಯಿಸಿದ್ದರಿಂದ ಮೇಲ್ಮನೆಯಲ್ಲಿ ಸರಕಾರಕ್ಕೆ ಹಿನ್ನಡೆಯಾಯಿತು. 

ಸೌಹಾರ್ದ ಸಹಕಾರಿ ಮಂಡಳಿಗಳ ಸದಸ್ಯರು ಸರಕಾರಕ್ಕೆ ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸುವುದು, ಪ್ರತಿ 3 ವರ್ಷಕ್ಕೊಮ್ಮೆ ಸರಕಾರಿ ಲೆಕ್ಕ ಪರಿಧಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸುವ 2 ಅಂಶಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಮಸೂದೆ ತಿರಸ್ಕಾರಗೊಳ್ಳಲು ಕಾರಣವಾಯಿತು. ಪರಿಷತ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ವಿಧೇಯಕ ಮಂಡಿಸಿದ್ದು ಮಸೂದೆಗೆ ವಿಚಾರವಾಗಿ ಪರ- ವಿರೋಧವಾಗಿ ಸದಸ್ಯರು ಅಭಿಪ್ರಾಯ ಪ್ರಕಟಿಸಿದರು. 

ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿ ವರ್ಷ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು ಎಂಬ ನಿಯಮ ಇದೆ.  ಆದರೆ, ಹೆಚ್ಚಿನ ಶಾಸಕರು ಈ ನಿಯಮ ಪಾಲಿಸುವುದಿಲ್ಲ. ಸೌಹಾರ್ದ ಸಹಕಾರಿ ಮಂಡಳಿಗಳ ಒಟ್ಟು ಸದಸ್ಯರ ಸಂಖ್ಯೆ 6.50 ಲಕ್ಷ ದಾಟುತ್ತದೆ. ಹೀಗಿರುವಾಗ ಲಕ್ಷಾಂತರ ಮಂದಿಯ ಆಸ್ತಿ ವಿವರ ಸಂಗ್ರಹ ಕಷ್ಟದ ವಿಚಾರ. ಅಲ್ಲದೆ, ಈ ಆಸ್ತಿ ಮಾಹಿತಿಯನ್ನು ಪಡೆದು ಏನು ಮಾಡುತ್ತೀರಿ? ಎಂದು ಪ್ರತಿಪಕ್ಷಗಳ ಸದಸ್ಯರು ಆಕ್ಷೇಪಿಸಿದರು. 

ಸೌಹಾರ್ದ ಸಹಕಾರಿ ಮಂಡಳಿಗಳು ತಾವು ಹೊಂದಿರುವ ಒಟ್ಟು ಠೇವಣಿಯಲ್ಲಿ ಶೇ.20ರಷ್ಟನ್ನು ಶಾಸನಬದ್ಧ ಮೀಸಲು ದ್ರವ್ಯ (ಎಸ್‌ಎಲ್‌ಆರ್‌) ರೂಪದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ಗಳು ಅಥವಾ ಅಪೆಕ್ಸ್‌ ಬ್ಯಾಂಕ್‌ಗಳಲ್ಲಿ ಮಾತ್ರವೇ ಠೇವಣಿ ಇರಿಸಬೇಕು. ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬಾರದು. ಆದಾಗ್ಯೂ ಇರಿಸುವುದಾದರೆ, ರಿಜಿಸ್ಟ್ರಾರ್‌ಗಳಿಂದ ಪೂರ್ವಾನುಮತಿ ಪಡೆಯಬೇಕು. ಸಹಕಾರಿ ಸೊಸೈಟಿ ಬಗ್ಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಲೆಕ್ಕ ಪರಿಶೋಧಕರಿಂದ ಶೋಧನೆ ನಡೆಸಬೇಕು ಎಂಬಿತ್ಯಾದಿ ಷರತ್ತುಗಳು ಸರಿಯಲ್ಲ. ಸಹಕಾರಿ ಕ್ಷೇತ್ರದ ಕತ್ತು ಹಿಸುಕಲು ಸರಕಾರ ಮುಂದಾಗಿದೆ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. 

ಕೆಲವು ಅಂಶಗಳನ್ನು ಕೈಬಿಡಬೇಕೆಂಬ ಒತ್ತಾಯಕ್ಕೆ ಒಪ್ಪದ ಕಾನೂನು ಸಚಿವರು, ವಿಧೇಯಕವನ್ನು ಅಂಗೀಕರಿಸಲು ಅನುಮತಿ ಕೋರಿದರು. ವಿಧೇಯಕದ ಮೇಲೆ ಒಂದು ಗಂಟೆ ಚರ್ಚೆ ನಡೆದ ಬಳಿಕ ಆಡಳಿತ ಪಕ್ಷದ ಸದಸ್ಯರೂ ಈ ಮಾತಿಗೆ ತಲೆಯಾಡಿಸುತ್ತ ಸದನದಿಂದ ಹೊರನಡೆದರು. ಇದನ್ನೇ ಅವಕಾಶವಾಗಿ ಬಳಸಿಕೊಂಡ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮತಕ್ಕೆ ಹಾಕಬೇಕೆಂದು ಪಟ್ಟು ಹಿಡಿದರು. ಇದರಂತೆ ಮತಕ್ಕೆ ಹಾಕಿದಾಗ, ಆಡಳಿತ ಪಕ್ಷದ ಸದಸ್ಯರೇ ಕೈಕೊಟ್ಟಿದ್ದರಿಂದ ಮಸೂದೆಗೆ ಸೋಲಾಯಿತು.

The Karnataka government faced an embarrassing setback in the Legislative Council after the Karnataka Souharda Co-operative (Amendment) Bill, which had already been passed in the Assembly, was rejected during a vote in the Upper House due to the lack of majority support from the ruling party.