Vhp, Mangalore, Sharan Pumpwell: ಗಣೇಶೋತ್ಸವ, ದಸರಾ ಮೆರವಣಿಗೆ ; ಸಂಪ್ರದಾಯ ಪಾಲನೆಗೆ ಅವಕಾಶ ನೀಡಿ, ನಿಯಮ ನೆಪದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬೇಡ 

21-08-25 09:12 pm       Mangalore Correspondent   ಕರಾವಳಿ

ತುಳುನಾಡಿನಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ ಉತ್ಸವ ಸೇರಿದಂತೆ ಯಕ್ಷಗಾನ, ಕೋಲ, ನೇಮ, ಉತ್ಸವಗಳ ಸೀಸನ್ ಬರುತ್ತಿದ್ದು ಇಲ್ಲಿ ರಾತ್ರಿ ಮೆರವಣಿಗೆ, ಸಂಪ್ರದಾಯ, ಆಚರಣೆಗಳು ನಡೆಯೋದು ಸಹಜ. ಆದರೆ ಈ ಬಾರಿ ಪೊಲೀಸ್ ಇಲಾಖೆ ಕಾನೂನಿನ ನೆಪದಲ್ಲಿ ಉತ್ಸವಗಳ ಆಚರಣೆಗೆ ಅಡಚಣೆ ತರುತ್ತಿರುವುದನ್ನು, ಸಮಯದ ಮಿತಿ ಹಾಕಿರುವುದನ್ನು ಖಂಡಿಸುತ್ತೇವೆ.

ಮಂಗಳೂರು, ಆ.21 : ತುಳುನಾಡಿನಲ್ಲಿ ಕೃಷ್ಣಾಷ್ಟಮಿ, ಗಣೇಶೋತ್ಸವ ಉತ್ಸವ ಸೇರಿದಂತೆ ಯಕ್ಷಗಾನ, ಕೋಲ, ನೇಮ, ಉತ್ಸವಗಳ ಸೀಸನ್ ಬರುತ್ತಿದ್ದು ಇಲ್ಲಿ ರಾತ್ರಿ ಮೆರವಣಿಗೆ, ಸಂಪ್ರದಾಯ, ಆಚರಣೆಗಳು ನಡೆಯೋದು ಸಹಜ. ಆದರೆ ಈ ಬಾರಿ ಪೊಲೀಸ್ ಇಲಾಖೆ ಕಾನೂನಿನ ನೆಪದಲ್ಲಿ ಉತ್ಸವಗಳ ಆಚರಣೆಗೆ ಅಡಚಣೆ ತರುತ್ತಿರುವುದನ್ನು, ಸಮಯದ ಮಿತಿ ಹಾಕಿರುವುದನ್ನು ಖಂಡಿಸುತ್ತೇವೆ. ಸಾಮಾನ್ಯವಾಗಿ ಜನರು ತಮ್ಮ ಕೆಲಸ ಮುಗಿಸಿ ರಾತ್ರಿಯೇ ಹೆಚ್ಚು ಸೇರುವುದರಿಂದ ಸಮಯದ ಮಿತಿಯೊಳಗೆ ಕಾರ್ಯಕ್ರಮ ಮುಗಿಸಬೇಕು ಎನ್ನುವುದು ಕಷ್ಟವಾಗುತ್ತದೆ. ಇಷ್ಟು ವರ್ಷ ರಾತ್ರಿ ಕಾರ್ಯಕ್ರಮ ಮಾಡಿದ್ದರಿಂದ ಯಾವುದೇ ಸಮಸ್ಯೆ ಆಗಿರುವುದಿಲ್ಲ. ಮುಂದೆಯೂ ಸಮಸ್ಯೆ ಆಗೋದಿಲ್ಲ. ಪೊಲೀಸರು ಈ ಭಾಗದ ಜನರ ಭಾವನೆಗೆ ಬೆಲೆ ಕೊಟ್ಟು ನಿಯಮದಲ್ಲಿ ರಿಯಾಯಿತಿ ನೀಡಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ. 

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರು ಗಣೇಶೋತ್ಸವ, ದಸರಾ ಮೆರವಣಿಗೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗಿಯಾಗುತ್ತಿದ್ದಾರೆ. ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ನಿಯಮದ ನೆಪದಲ್ಲಿ ಹಿಂದಿನಿಂದಲೂ ನಡೆದುಬಂದ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಿದರೆ ಮನಸ್ಸಿನಲ್ಲಿ ಆಕ್ರೋಶ ಬೆಳೆಯುತ್ತದೆ. ಆದಾಗ್ಯೂ ಡಿಜೆ ನಿಷೇಧಕ್ಕೆ ನಮ್ಮ ಬೆಂಬಲವಿದೆ. ರಾತ್ರಿ ಎಂದಿನಂತೆ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಅವರಿಗೂ ಮನವಿ ನೀಡಿದ್ದೇವೆ ಎಂದರು. 

ಆಗಸ್ಟ್ ಕೊನೆಯಲ್ಲಿ ಗಣೇಶೋತ್ಸವ, ಸೆಪ್ಟೆಂಬರ್ ಕೊನೆಯಲ್ಲಿ ನವರಾತ್ರಿ ಹಬ್ಬ ಇದೆ. ಜಿಲ್ಲಾಡಳಿತ ಜನರ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕೊಡುತ್ತದೆ ಎನ್ನುವ ನಂಬಿಕೆ ಇದೆ. ಹೊಸತಾಗಿ ಕಮಿಷನರ್, ಎಸ್ಪಿ ಬಂದ ಬಳಿಕ ಹಲವಾರು ಅಕ್ರಮಗಳಿಗೆ ಕಡಿವಾಣ ಬಿದ್ದಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ಹೇಳುತ್ತೇವೆ. ಆದರೆ ನಿಯಮದ ನೆಪದಲ್ಲಿ ಹಿಂದು ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕುವುದು ಸರಿಯಲ್ಲ. ನಾವದನ್ನು ಒಪ್ಪುವುದಿಲ್ಲ ಎಂದು ಶರಣ್ ಪಂಪ್ವೆಲ್ ಹೇಳಿದರು. 

ಧರ್ಮಸ್ಥಳ ಪ್ರಕರಣದಲ್ಲಿ ನಮ್ಮ ರಾಷ್ಟ್ರೀಯ ಮುಖಂಡರು ಹೇಳಿಕೆ ನೀಡಿದ್ದಾರೆ. ಕ್ಷೇತ್ರದ ಬಗ್ಗೆ ಅಪಚಾರ ಮಾಡುವುದಕ್ಕೆ ವಿರೋಧ ಇದೆ. ಷಡ್ಯಂತ್ರ ಮಾಡಿರುವ ಬಗ್ಗೆ ಪೊಲೀಸ್ ತ‌ನಿಖೆ ಆಗಬೇಕು. ಎಸ್ಐಟಿ ತನಿಖೆಯಿಂದ ಸತ್ಯಾಸತ್ಯತೆ ಹೊರಬೇಕು, ಅಪಪ್ರಚಾರ ನಿಲ್ಲಬೇಕು ಎಂಬುದು ನಮ್ಮ ಕಾಳಜಿ ಎಂದವರು ಹೇಳಿದರು. 

ಸುದ್ದಿಗೋಷ್ಟಿಯಲ್ಲಿ ಎಚ್.ಕೆ ಪುರುಷೋತ್ತಮ, ಗೋಪಾಲ್ ಕುತ್ತಾರ್, ಪೊಳಲಿ ಗಿರಿಪ್ರಕಾಶ್ ತಂತ್ರಿ, ಮನೋಹರ್ ಸುವರ್ಣ ಉಪಸ್ಥಿತರಿದ್ದರು.

With the festive season of Krishna Janmashtami, Ganeshotsava, Dasara, and traditional events like Yakshagana, Kola, and Nemotsava approaching in Tulunadu, the Vishwa Hindu Parishad (VHP) has opposed restrictions reportedly being imposed by the police department on late-night religious celebrations.