Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪಾಟ, ಜಡ್ಜ್ ವಿರುದ್ಧ ಕೂಗಾಟ ; 51 ವರ್ಷದ ವಕೀಲನಿಗೆ ಹೈಕೋರ್ಟ್ ಜೈಲು ಶಿಕ್ಷೆ

17-09-26 02:22 pm       HK News Staffer   ಕ್ರೈಂ

ಮದ್ಯಪಾನ ಮಾಡಿ ನ್ಯಾಯಾಲಯದ ಕೊಠಡಿಯಲ್ಲೇ ನ್ಯಾಯಾಧೀಶರ ವಿರುದ್ಧ ಕೂಗಾಡಿ, ರಂಪಾಟ ಮಾಡಿದ್ದ ವಕೀಲನೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಶಾಸ್ತಿ ಮಾಡಿದ್ದು ದಂಡ ವಿಧಿಸಿ ಜೈಲು ಶಿಕ್ಷೆಯನ್ನೂ ವಿಧಿಸಿದೆ.‌ 51 ವರ್ಷದ ವಕೀಲ ಪಂಕಜ್ ಕೌಶಿಕ್ ಎಂಬವರಿಗೆ ಹೈಕೋರ್ಟ್ ಒಂದು ದಿನದ ಸಾದಾ ಜೈಲು ಶಿಕ್ಷೆ ಹಾಗೂ ರೂ. 2,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಬೆಂಗಳೂರು, ಸೆ.17: ಮದ್ಯಪಾನ ಮಾಡಿ ನ್ಯಾಯಾಲಯದ ಕೊಠಡಿಯಲ್ಲೇ ನ್ಯಾಯಾಧೀಶರ ವಿರುದ್ಧ ಕೂಗಾಡಿ, ರಂಪಾಟ ಮಾಡಿದ್ದ ವಕೀಲನೊಬ್ಬನಿಗೆ ಕರ್ನಾಟಕ ಹೈಕೋರ್ಟ್ ಶಾಸ್ತಿ ಮಾಡಿದ್ದು ದಂಡ ವಿಧಿಸಿ ಜೈಲು ಶಿಕ್ಷೆಯನ್ನೂ ವಿಧಿಸಿದೆ.‌ 51 ವರ್ಷದ ವಕೀಲ ಪಂಕಜ್ ಕೌಶಿಕ್ ಎಂಬವರಿಗೆ ಹೈಕೋರ್ಟ್ ಒಂದು ದಿನದ ಸಾದಾ ಜೈಲು ಶಿಕ್ಷೆ ಹಾಗೂ ರೂ. 2,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಕಾಯ್ದೆ, 1971ರ ಸೆಕ್ಷನ್ 12(1) ಅಡಿಯಲ್ಲಿ ಕೌಶಿಕ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಅವರು 2022ರಲ್ಲಿ ಸ್ವಯಂಪ್ರೇರಿತವಾಗಿ ಆರಂಭಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ವೇಳೆ ಈ ಶಿಕ್ಷೆ ವಿಧಿಸಲಾಗಿದೆ.

ಆರೋಪಿಯ ವರ್ತನೆಯನ್ನು ನಾವು ಗಮನಿಸಿದ್ದೇವೆ. ಆತ ತನ್ನ ನ್ಯಾಯಾಂಗ ನಿಂದನೆ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸುವ ಬದಲು, ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಅಲ್ಲದೆ, ಒಟ್ಟಾರೆ ನ್ಯಾಯಾಂಗ ಸಂಸ್ಥೆಯ ವಿರುದ್ಧ ಆಧಾರರಹಿತ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾನೆ. ಆತನ ವರ್ತನೆಯನ್ನು ಉದ್ದೇಶಪೂರ್ವಕ ಹಾಗೂ ಹಠಮಾರಿ ಎಂದು ಮಾತ್ರ ಪರಿಗಣಿಸಬಹುದು. ಸಾಮಾಜಿಕ, ನೈತಿಕ ಹಾಗೂ ನ್ಯಾಯಾಂಗ ನಡವಳಿಕೆಯ ನಿಯಮಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದಾನೆ. ಇಂತಹ ವರ್ತನೆಯನ್ನು ಶಿಕ್ಷಿಸದೆ ಬಿಟ್ಟರೆ, ಯಾವುದೇ ಭಯವಿಲ್ಲದೆ ಇಂತಹ ಕೃತ್ಯಗಳನ್ನು ಪುನರಾವರ್ತಿಸುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಉತ್ತರ ಕನ್ನಡ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು 2022ರ ಏಪ್ರಿಲ್ 12ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ಪತ್ರ ಬರೆದು ವಕೀಲನ ಮೇಲೆ ಕ್ರಮ ಕೈಗೊಳ್ಳಲು ಕೋರಿದ್ದರು. ಜೆಎಂಎಫ್‌ಸಿ-2ರ ನ್ಯಾಯಾಧೀಶ ಶ್ರೀನಿವಾಸ್ ಪಾಟೀಲ್ ಅವರು ಏಪ್ರಿಲ್ 8ರಂದು ಬರೆದಿದ್ದ ಪತ್ರ ಹಾಗೂ ಆರೋಪಿಯು ಮದ್ಯಪಾನ ಮಾಡಿದ್ದನ್ನು ದೃಢಪಡಿಸುವ ಪ್ರಮಾಣಪತ್ರವನ್ನೂ ಕೋರ್ಟಿಗೆ ಸಲ್ಲಿಸಲಾಗಿತ್ತು. ಆರೋಪಿ ಕೌಶಿಕ್ ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಸ್ವತಃ ತನ್ನ ಪರವಾಗಿ ವಾದಿಸುತ್ತಿದ್ದ ವ್ಯಕ್ತಿಯಾಗಿದ್ದರು. ಅವರ ಪ್ರಕರಣ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ವಿಚಾರಣೆಗೆ ಪಟ್ಟಿ ಆಗಿರದಿದ್ದರೂ ಅವರು ನ್ಯಾಯಾಲಯಕ್ಕೆ ಹಾಜರಾಗಿ ಪೀಠದ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರ ವಿರುದ್ಧ ಕೂಗಾಡಿದ್ದರು. ತಮ್ಮ ಪ್ರಕರಣಕ್ಕೆ ದಿನಾಂಕ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ತಮ್ಮ ಪ್ರಕರಣವನ್ನು ಕರೆಯದಿರುವುದಕ್ಕೆ ನ್ಯಾಯಾಲಯದ ಬೆಂಚ್ ಕ್ಲರ್ಕ್‌ ಮೇಲೂ ಕೂಗಾಡಿದ್ದರು.

The Karnataka High Court has sentenced a 51-year-old lawyer to one day of simple imprisonment and imposed a fine of ₹2,000 for allegedly consuming alcohol and creating a ruckus inside a courtroom while shouting at a judge.