ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ ವಂಚನೆ ; ವಿಧಾನಸೌಧ ಅಧಿಕಾರಿಗಳಲ್ಲಿ ಮಾಡಿಸುತ್ತೇನೆಂದು ನಂಬಿಸಿ 50 ಲಕ್ಷಕ್ಕೆ ಬೇಡಿಕೆ, ನಾಲ್ವರ ವಿರುದ್ಧ ಎಫ್ಐಆರ್

24-07-26 08:31 pm       HK News Staffer   ಕ್ರೈಂ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌.ಡಿಪಿಆರ್) ಇಲಾಖೆಯಲ್ಲಿ ಪಿಡಿಒ ಹುದ್ದೆ ಕೊಡಿಸುವುದಾಗಿ ಯುವಕನಿಗೆ ನಂಬಿಸಿ 26 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದ್ದು ವಿಧಾನ ಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು, ಜುಲೈ 24: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮೂಲಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌.ಡಿಪಿಆರ್) ಇಲಾಖೆಯಲ್ಲಿ ಪಿಡಿಒ ಹುದ್ದೆ ಕೊಡಿಸುವುದಾಗಿ ಯುವಕನಿಗೆ ನಂಬಿಸಿ 26 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದ್ದು ವಿಧಾನ ಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೊಸಕೋಟೆ ನಿವಾಸಿ ಜಿ.ಕೆ.ರಘುನಂದನ್ ನೀಡಿದ ದೂರಿನ ಮೇರೆಗೆ ಸಂತೋಷ್ ಹೊಸಮನಿ, ಬಸವರಾಜ್ ಮತ್ತು ಮಹೇಶ್ ಎಂಬವರ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

50 ಲಕ್ಷಕ್ಕೆ ಬೇಡಿಕೆ, ಮುಂಗಡ 20 ಲಕ್ಷ ಕೇಳಿದ್ದ 

ಸಂತೋಷ್ ಹೊಸಮನಿ ಎಂಬಾತ ತಾನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ (ಡಿಪಿಎಆರ್) ಇಲಾಖೆಯಲ್ಲಿ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದು ತನಗೆ ಕೆಪಿಎಸ್ಸಿ, ಉದ್ಯೋಗಸೌಧದ ಅಧಿಕಾರಿಗಳು ಮತ್ತು ವಿಧಾನಸೌಧದ ಸಚಿವಾಲಯದ ಅಧಿಕಾರಿಗಳು ನೇರ ಸಂಪರ್ಕ ಮತ್ತು ಪರಿಚಯವಿದ್ದು, ನಿಮಗೆ ಕೆಪಿಎಸ್‌ಸಿ ಮೂಲಕ ಪಿಡಿಒ ಕೆಲಸ ಕೊಡಿಸುತ್ತೇನೆಂದು ನಂಬಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಮುಂಗಡವಾಗಿ 20 ಲಕ್ಷ ರೂ. ನೀಡಬೇಕೆಂದು ಹೇಳಿದ್ದ. 

ಅದನ್ನು ನಂಬಿ, 2024ರ ಡಿ.5ರಂದು ಚಿನ್ನದ ಒಡವೆಗಳನ್ನು ಅಡವಿಟ್ಟು ಸುಮಾರು 10 ಲಕ್ಷ ರೂ. ಅನ್ನು ಮಹೇಶ್ ಮತ್ತು ನಂದೀಶ್ ಎಂಬವರ ಮೂಲಕ ನೀಡಿದ್ದೆ. ನಂತರ 2025ರ ಮಾರ್ಚ್ ನಲ್ಲಿ 2 ಲಕ್ಷ ರೂ. ಹೀಗೆ ಹಂತ ಹಂತವಾಗಿ ಒಟ್ಟು 26 ಲಕ್ಷ ರೂ. ನೀಡಿದ್ದೇನೆ ಎಂದು ರಘುನಂದ್ ಆರೋಪಿಸಿದ್ದಾರೆ. 

ಆನಂತರ ಹುದ್ದೆಯ ಆದೇಶ ಪ್ರತಿ ಬರುವುದು ತಡವಾಗಿದೆ ಎಂದು ತನ್ನನ್ನು ನಂಬಿಸಲು ಸಂತೋಷ್, ಬಸವರಾಜ್ ಎಂಬ ವ್ಯಕ್ತಿಯಿಂದ ವಾಟ್ಸಾಪ್ ಕರೆ ಮಾಡಿಸಿದ್ದ. ಆ ಬಳಿಕ ರಾವ್ ಎಂಬಾತ ಕೆಪಿಎಸ್‌ಸಿ ಕಚೇರಿಯ ದೂರವಾಣಿಯಿಂದ ಕರೆ ಮಾಡಿ ಕೆಲಸ ಮಾಡಿಕೊಡುವ ಭರವಸೆ ನೀಡಿದ್ದ. ಈ ರೀತಿ ಪಿಡಿಒ ಹುದ್ದೆ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ರಘುನಂದ್ ದೂರಿನಲ್ಲಿ ಆರೋಪಿಸಿದ್ದಾರೆ.