14 ವರ್ಷಗಳ ಹಿಂದೆ ಕುಂಬಳೆಯಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ ದರೋಡೆ ; 42 ಪವನ್ ಚಿನ್ನ ದೋಚಿದ್ದ ಪ್ರಮುಖ ಆರೋಪಿ ಪುತ್ತೂರಿನಲ್ಲಿ ಅರೆಸ್ಟ್

24-07-26 02:18 pm       HK News Staffer   ಕ್ರೈಂ

14 ವರ್ಷಗಳ ಹಿಂದೆ ಕುಂಬಳೆಯಲ್ಲಿ ಬಸ್ ಮಾಲೀಕರೊಬ್ಬರ ಮನೆಗೆ ನುಗ್ಗಿ, ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಲಾಗಿದೆ. ಪುತ್ತೂರು ಸಂಪ್ಯ ನಿವಾಸಿ ಅಜೀಜ್ ಅಲಿಯಾಸ್ ಅಬ್ದುಲ್ ಅಜೀಜ್ (58) ಬಂಧಿತ ಆರೋಪಿ.

ಕಾಸರಗೋಡು, ಜುಲೈ 24: 4 ವರ್ಷಗಳ ಹಿಂದೆ ಕುಂಬಳೆಯಲ್ಲಿ ಬಸ್ ಮಾಲೀಕರೊಬ್ಬರ ಮನೆಗೆ ನುಗ್ಗಿ, ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಂಧಿಸಲಾಗಿದೆ. ಪುತ್ತೂರು ಸಂಪ್ಯ ನಿವಾಸಿ ಅಜೀಜ್ ಅಲಿಯಾಸ್ ಅಬ್ದುಲ್ ಅಜೀಜ್ (58) ಬಂಧಿತ ಆರೋಪಿ.

2012ರ ಡಿಸೆಂಬರ್ 22ರಂದು ಕುಂಬಳೆಯ ಅನಿಲ್ ಕುಂಬ್ಳೆ ರಸ್ತೆಯ ಸಮೀಪವಿರುವ ಮಂಗಳೂರಿನಲ್ಲಿ ಬಸ್ ಆಪರೇಟರ್ ಆಗಿದ್ದ ರಾಜೇಶ್ ಶೆಣೈ ಎಂಬವರ ಮನೆಗೆ ಮುಸುಕುಧಾರಿ ದರೋಡೆಕೋರರ ತಂಡ ಸಂಜೆ ಏಳು ಗಂಟೆ ವೇಳೆಗೆ ನುಗ್ಗಿತ್ತು. ಬಂದೂಕು ತೋರಿಸಿ ಮನೆಯವರನ್ನು ಬೆದರಿಸಿದ ದರೋಡೆಕೋರರು, ರಾಜೇಶ್ ಶೆಣೈ ಅವರ ಮುಖಕ್ಕೆ ಯಾವುದೋ ದ್ರವ ಸಿಂಪಡಿಸಿ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಕುಟುಂಬದ ಇತರ ಸದಸ್ಯರ ಕೈಕಾಲುಗಳನ್ನು ಕಟ್ಟಿ ಹಾಕಿ, ಬಾಯಿಗೆ ಪ್ಲಾಸ್ಟರ್ ಅಂಟಿಸಿ 42 ಪವನ್ (366 ಗ್ರಾಂ) ಚಿನ್ನಾಭರಣ ಹಾಗೂ 25 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದರು.

ಬೆಳಕಿಗೆ ಬಂದಿದ್ದು ಹೇಗೆ?

ಅದೇ ದಿನ ರಾತ್ರಿ ರಾಜೇಶ್ ಶೆಣೈ ಅವರ ಕುಟುಂಬದ ಸ್ನೇಹಿತೆ ಡಾ. ವಾಣಿ ಅವರು ತಮ್ಮ ನೂತನ ಮನೆಯ ಗೃಹಪ್ರವೇಶದ ಆಮಂತ್ರಣ ನೀಡಲೆಂದು ಮನೆಗೆ ಬಂದಿದ್ದರು. ಈ ವೇಳೆ ಮನೆಯವರನ್ಬು ಕಟ್ಟಿ ಹಾಕಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂದು ಈ ಘಟನೆ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಸಂಚಲನ ಮೂಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಟ್ಟು 15 ಆರೋಪಿಗಳಿರುವುದನ್ನು ಗುರುತಿಸಿದ್ದರು. ಈ ಪೈಕಿ 10 ಮಂದಿ ಬಂಧನವಾಗಿದ್ದರೆ, ಒಬ್ಬ ಮೃತಪಟ್ಟಿದ್ದ. ಅಬ್ದುಲ್ ಅಜೀಜ್ ಸೇರಿದಂತೆ ನಾಲ್ವರು ತಲೆಮರೆಸಿಕೊಂಡಿದ್ದರು. ಕೆಲವು ವರ್ಷಗಳ ಕಾಲ ಅವಿತುಕೊಂಡಿದ್ದ ಅಬ್ದುಲ್ ಅಜೀಜ್ ಬಳಿಕ ಅಪರಾಧ ಚಟುವಟಿಕೆಯಿಂದ ದೂರವಿದ್ದು ಪುತ್ತೂರಿನಲ್ಲಿ ಜೀವನ ಮಾಡಿಕೊಂಡಿದ್ದ. ಇತರ ಆರೋಪಿಗಳ ವಿರುದ್ಧ ಕಾಸರಗೋಡು ಕೋರ್ಟಿನಲ್ಲಿ ವಿಚಾರಣೆ ಮುಂದುವರಿದಿದೆ. 

ಇದೇ ವೇಳೆ, ಕಾಸರಗೋಡು ಅಪರಾಧ ವಿಭಾಗದ ಡಿವೈಎಸ್ಪಿ ಮಧುಸೂದನನ್ ನಾಯರ್ ಅವರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ಗುರುವಾರ ಪುತ್ತೂರಿನ ಸಂಪ್ಯದಲ್ಲಿ ಕಾರ್ಯಾಚರಣೆ ನಡೆಸಿ ಅಜೀಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶ್ರೀಕುಮಾರ್, ಸಂಜಯ್, ಎಸ್‌ಐಗಳಾದ ರವೀಂದ್ರನ್, ಪ್ರಮೋದ್, ವಿನೋದ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಕರಣದ ಇನ್ನುಳಿದ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.