Lavanya Murder case: ಲಾವಣ್ಯ ಹತ್ಯೆ ಪ್ರಕರಣ ; ಒಂದು ನಾಯಿಗೂ ನೋವು ಮಾಡಿದವನಲ್ಲ, ಇಷ್ಟು ನಿರ್ದಯನಾಗಿದ್ದು ಊಹಿಸಕ್ಕೂ ಆಗ್ತಿಲ್ಲ..! ವಿಡಿಯೋ ನೋಡಿ ಕುಗ್ಗಿ ಹೋದ ಆರೋಪಿ ಚೇತನ್ ಕುಟುಂಬಸ್ಥರು

21-07-26 08:03 pm       Mangaluru Staffer   ಕ್ರೈಂ

ನಡು ಬೀದಿಯಲ್ಲಿ ಲಾವಣ್ಯ ಹತ್ಯೆಯಾಗಿದ್ದು, ಭೀಕರ ಕೃತ್ಯದ ವಿಡಿಯೋ ವೈರಲ್ ಆದ ಬಳಿಕ ಆರೋಪಿ ಚೇತನ್ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಭೀಕರ ಹಲ್ಲೆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ತಮ್ಮ ಮಗ ಇಷ್ಟೊಂದು ಕಟುಕನಾದನೇ ಎಂದು ಕುಟುಂಬದವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಬಂಟ್ವಾಳ , ಜುಲೈ 21 : ನಡು ಬೀದಿಯಲ್ಲಿ ಲಾವಣ್ಯ ಹತ್ಯೆಯಾಗಿದ್ದು, ಭೀಕರ ಕೃತ್ಯದ ವಿಡಿಯೋ ವೈರಲ್ ಆದ ಬಳಿಕ ಆರೋಪಿ ಚೇತನ್ ಕುಟುಂಬಸ್ಥರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಭೀಕರ ಹಲ್ಲೆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ತಮ್ಮ ಮಗ ಇಷ್ಟೊಂದು ಕಟುಕನಾದನೇ ಎಂದು ಕುಟುಂಬದವರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ಆರೋಪಿ ಚೇತನ್ ತಂದೆ ಪುರುಷೋತ್ತಮ್ ಅವರು ತಮ್ಮ ನೋವನ್ನು ಹಂಚಿಕೊಂಡಿದ್ದು, “ನನ್ನ ಮಗ ಇಂತಹ ಕೃತ್ಯ ಮಾಡುತ್ತಾನೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಅವನು ಬಾಲ್ಯದಿಂದಲೂ ತುಂಬಾ ಶಾಂತ ಸ್ವಭಾವದವನು. ಒಂದು ನಾಯಿಗೂ ನೋವು ಕೊಡದ ಮಗ. ಹೇಗೆ ಇಂತಹ ಭೀಕರ ಕೃತ್ಯಕ್ಕೆ ಕೈ ಹಾಕಿದನೆಂಬುದು ನಮಗೆ ಇನ್ನೂ ಅರ್ಥವಾಗುತ್ತಿಲ್ಲ” ಎಂದು ಕಣ್ಣೀರಿಟ್ಟರು.

ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಅತ್ಯಂತ ಸಂಕಷ್ಟದಲ್ಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಹೊಸ ಮನೆ ಕಟ್ಟುವ ಕಾಮಗಾರಿ ಆರಂಭಿಸಿದ್ದರೂ, ಶಿಕ್ಷಣದ ವೆಚ್ಚಕ್ಕಾಗಿ ಆ ಕಾಮಗಾರಿಯನ್ನು ನಿಲ್ಲಿಸಿದ್ದರು. ಪ್ರಸ್ತುತ ಕುಟುಂಬವು ಇನ್ನೂ ಸಣ್ಣ ಗುಡಿಸಲಿನಲ್ಲೇ ವಾಸಿಸುತ್ತಿದೆ.

ಪುರುಷೋತ್ತಮ ಅವರ ಪ್ರಕಾರ, ಲಾವಣ್ಯ ಮೇಲೆ ನಡೆದ ಭೀಕರ ಹಲ್ಲೆಯ ವಿಡಿಯೋವನ್ನು ನೋಡಿದ ದಿನದಿಂದಲೇ ಚೇತನ್ ತಾಯಿ ಹಾಗೂ ಸಹೋದರಿ ಊಟವನ್ನೇ ಮಾಡಿಲ್ಲ. ಇಬ್ಬರೂ ತೀವ್ರ ಮಾನಸಿಕ ಆಘಾತದಲ್ಲಿದ್ದು, ಸಹಜ ಸ್ಥಿತಿಗೆ ಮರಳಿಲ್ಲ. ಇತ್ತೀಚೆಗಷ್ಟೇ ಚೇತನ್ ಸಹೋದರಿಗೆ ಉದ್ಯೋಗ ಲಭಿಸಿತ್ತು. ಅಲ್ಲದೆ, ಆಕೆಯ ವಿವಾಹವೂ ನಿಶ್ಚಯವಾಗಿತ್ತು. ಆದರೆ ಈ ಘಟನೆ ಬಳಿಕ ಕುಟುಂಬದ ಭವಿಷ್ಯದ ಬಗ್ಗೆ ಆತಂಕ ಹೆಚ್ಚಾಗಿದೆ. “ಮಗಳ ಮದುವೆ ಹೇಗೆ ನಡೆಯುತ್ತದೆ? ಸಮಾಜದಲ್ಲಿ ನಾವು ಹೇಗೆ ಮುಖ ತೋರಿಸಬೇಕು? ಈ ಘಟನೆಯಿಂದ ನಮ್ಮ ಕುಟುಂಬವೇ ಕುಸಿದು ಹೋಗಿದೆ,” ಎಂದು ತಂದೆ ಕಳವಳ ವ್ಯಕ್ತಪಡಿಸುತ್ತಾರೆ. 

ಪರಿಚಿತರು ಮತ್ತು ಸಂಬಂಧಿಕರೂ ಆಗಿದ್ದ ಲಾವಣ್ಯ ಮತ್ತು ಚೇತನ್ ನಡುವೆ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲೇ ಚೇತನ್, ಸಾರ್ವಜನಿಕ ಸ್ಥಳದಲ್ಲೇ ಲಾವಣ್ಯ ಮೇಲೆ ಮಾರಕಾಸ್ತ್ರದಿಂದ ಭೀಕರವಾಗಿ ಹಲ್ಲೆಗೈದು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. 

ಒಂದೆಡೆ ಈ ಪ್ರಕರಣ, ತನ್ನ ಪ್ರೀತಿಯನ್ನು ಒಪ್ಪಿಲ್ಲ ಎಂದು ಯುವಕನೊಬ್ಬ ಅಮಾಯಕ ಯುವತಿಯ ಜೀವವನ್ನು ಕಸಿದುಕೊಂಡಿದ್ದರೆ, ಮತ್ತೊಂದೆಡೆ ಎರಡು ಕುಟುಂಬಗಳ ಬದುಕನ್ನೂ ತಲ್ಲಣಗೊಳಿಸಿದ ದುರಂತ ಘಟನೆಯಾಗಿ ಪರಿಣಮಿಸಿದೆ. ಲಾವಣ್ಯ ಪರವಾಗಿ ಸಾರ್ವಜನಿಕ ಕೂಗು ಎದ್ದಿದ್ದರೆ, ಆರೋಪಿ ಚೇತನ್ ಕುಟುಂಬವೂ ತೀವ್ರ ಮಾನಸಿಕ ಕಿರುಕುಳದಿಂದ ಆಘಾತ ಎದುರಿಸುತ್ತಿದೆ.