ಸಣ್ಣ ಗಾಯಕ್ಕೆ ಚಿಕಿತ್ಸೆ, ಆದರೆ ಮರಳಲಿಲ್ಲ ಪ್ರಜ್ಞೆ ; ಎಂಟು ವರ್ಷಗಳ ಬಳಿಕ ಜನಿಸಿದ್ದ ಕಂದಮ್ಮನ ದಾರುಣ ಅಂತ್ಯ

11-07-26 08:37 pm       HK News Staffer   ಕ್ರೈಂ

ತುಟಿಗೆ ಉಂಟಾದ ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬಳಿಕ 18 ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಆರೋಪ ಕೇಳಿಬಂದಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಿರುವನಂತಪುರಂ , ಜುಲೈ 11: ತುಟಿಗೆ ಉಂಟಾದ ಸಣ್ಣ ಗಾಯಕ್ಕೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬಳಿಕ 18 ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಆರೋಪ ಕೇಳಿಬಂದಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃತ ಮಗುವನ್ನು ದೇವನ್ಶ್ ಶೌರ್ಯ (18 ತಿಂಗಳು) ಎಂದು ಗುರುತಿಸಲಾಗಿದೆ. ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆರೋಪಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆಟವಾಡುವ ವೇಳೆ ತುಟಿಗೆ ಗಾಯ

ದೇವನ್ಶ್, ಇರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರಂಗಲ್ ನಿವಾಸಿಗಳಾದ ಟಿ. ಸೂರಜ್ ಮತ್ತು ವಿಜಿಶಾ ದಂಪತಿಯ ಏಕೈಕ ಪುತ್ರನಾಗಿದ್ದ. ಮದುವೆಯಾದ ಎಂಟು ವರ್ಷಗಳ ಬಳಿಕ ಈ ದಂಪತಿಗೆ ಮಗು ಜನಿಸಿತ್ತು.

ಜುಲೈ 5ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ದೇವನ್ಶ್ ಬಿದ್ದು ಕೆಳತುಟಿಗೆ ಸಣ್ಣ ಗಾಯವಾಗಿತ್ತು. ಪೋಷಕರು ತಕ್ಷಣವೇ ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಗಾಯಕ್ಕೆ ಹೊಲಿಗೆ ಹಾಕಲು ವೈದ್ಯರು ಅರಿವಳಿಕೆ ನೀಡಿದ್ದರು.

ಅರಿವಳಿಕೆ ಬಳಿಕ ಪ್ರಜ್ಞೆ ಕಳೆದುಕೊಂಡ ಮಗು;

ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿದ್ದು, ಆರೋಗ್ಯ ಸ್ಥಿತಿ ತೀವ್ರ ಗಂಭೀರಗೊಂಡಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಣ್ಣೂರಿನಲ್ಲಿರುವ ಆಸ್ಪತ್ರೆಯ ಸುಧಾರಿತ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಸುಮಾರು ಐದು ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಿದರೂ ಮಗು ಚೇತರಿಸಿಕೊಳ್ಳದೆ ಶುಕ್ರವಾರ ರಾತ್ರಿ ಮೃತಪಟ್ಟಿದೆ.

ವೈದ್ಯರ ವಿರುದ್ಧ ಪ್ರಕರಣ ದಾಖಲು

ಅರಿವಳಿಕೆಯ ಅತಿಯಾದ  ಓವರ್‌ಡೋಸ್ ನೀಡಿದ್ದರಿಂದ ಮಗುವಿನ ಮೆದುಳು ಹಾನಿಗೊಂಡು ಸಾವನ್ನಪ್ಪಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪಯ್ಯನ್ನೂರು ಪೊಲೀಸರು ಆಸ್ಪತ್ರೆಯ ಅರಿವಳಿಕೆ ತಜ್ಞೆ ಡಾ. ಅಂಜಲಿ ಪೊದುವಾಳ್ ವಿರುದ್ಧ BNS ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವೈದ್ಯಕೀಯ ನಿರ್ಲಕ್ಷ್ಯದ ಆರೋಪ ತಳ್ಳಿಹಾಕಿದ ಆಸ್ಪತ್ರೆ ಆಡಳಿತ ಮಂಡಳಿ

ಆಸ್ಪತ್ರೆ ನೀಡಿರುವ ಹೇಳಿಕೆಯಲ್ಲಿ, "ಅರಿವಳಿಕೆ ನೀಡಿದ ತಕ್ಷಣ ಮಗುವಿಗೆ ಅನಿರೀಕ್ಷಿತ ಹೃದಯ ಸ್ತಂಭನ ಉಂಟಾಯಿತು. ಕೂಡಲೇ ತುರ್ತು ಚಿಕಿತ್ಸೆ ನೀಡಿ ವೆಂಟಿಲೇಟರ್‌ಗೆ ಸೇರಿಸಲಾಯಿತು. ವೈದ್ಯಕೀಯ ಮಾರ್ಗಸೂಚಿಗಳ ಪ್ರಕಾರವೇ ಚಿಕಿತ್ಸೆ ನೀಡಲಾಗಿದೆ. ಸೂಕ್ತ ಪ್ರಮಾಣದ ಅರಿವಳಿಕೆ ನೀಡಿದರೂ ಕೆಲವೊಮ್ಮೆ ಅಪರೂಪದ ಗಂಭೀರ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮಗುವನ್ನು ಉಳಿಸಲು ಎಲ್ಲಾ ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ತಿಳಿಸಲಾಗಿದೆ.

ಘಟನೆಯ ನಂತರ ಆಸ್ಪತ್ರೆ ಎದುರು ಡಿವೈಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.