ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ ಅಲುಗಾಡಬಹುದು ; ಸಚಿವ ಸತೀಶ್ ಜಾರಕಿಹೊಳಿ

09-07-26 02:56 pm       HK News Staffer   ಕರ್ನಾಟಕ

ಮುಂದಿನ ಸುತ್ತಿನ ಸಚಿವ ಸಂಪುಟ ವಿಸ್ತರಣೆಯಾದರೆ ಕಾಂಗ್ರೆಸ್ ಸರ್ಕಾರ ಸ್ವಲ್ಪಮಟ್ಟಿಗೆ ಅಲುಗಾಡಬಹುದು. ಅದರ ಕಾವು 2-3 ದಿನಗಳ ವರೆಗೆ ಇರಬಹುದು. ಬೇರೇನೂ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರು, ಜುಲೈ 9: ಮುಂದಿನ ಸುತ್ತಿನ ಸಚಿವ ಸಂಪುಟ ವಿಸ್ತರಣೆಯಾದರೆ ಕಾಂಗ್ರೆಸ್ ಸರ್ಕಾರ ಸ್ವಲ್ಪಮಟ್ಟಿಗೆ ಅಲುಗಾಡಬಹುದು. ಅದರ ಕಾವು 2-3 ದಿನಗಳ ವರೆಗೆ ಇರಬಹುದು. ಬೇರೇನೂ ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸಂಪುಟ ವಿಸ್ತರಣೆಯಾದರೆ ಸರ್ಕಾರದ ಬುಡ ಅಲ್ಲಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿದ್ದ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆಗಸ್ಟ್‌ ವೇಳೆಗೆ ವಿಸ್ತರಣೆಯಾಗುವ ಸಾಧ್ಯತೆಯಿದೆ. ಆಗ ಸ್ವಲ್ಪ ಮಟ್ಟಿಗೆ ಅಲುಗಾಡುತ್ತೆ, ಆದ್ರೆ ಹೆಚ್ಚೇನೂ ಆಗಲ್ಲ ಎಂದಿದ್ದಾರೆ. ಹೆಚ್ಚೆಂದ್ರೆ ಎರಡು ಮೂರು ದಿನ ಅಲ್ಲಾಡಬಹುದು, ಆಮೇಲೆ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲೂ ಮೂವರು ಸಿಎಂಗಳಾಗುತ್ತಾರೆ ಎಂಬುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಅವರೇ ಮುಂದುವರೆಯುತ್ತಾರೆ. ನಮ್ಮ ಸರಕಾರ ಗಟ್ಟಿಯಾಗಿದೆ ಎಂದು ಹೇಳಿದರು. ಸಂಪುಟ ವಿಸ್ತರಣೆ ವಿಳಂಬ ವಿಚಾರದಲ್ಲಿ ನಾವು ಏನೂ ಮಾಡಲು ಆಗುವುದಿಲ್ಲ. ವಿಸ್ತರಣೆ ಮಾಡುವ ವರೆಗೆ ಕಾಯಲೇಬೇಕು. ಈಗಾಗಲೇ ಒಂದು ತಿಂಗಳು ತಡವಾಗಿದೆ ಎಂದರು. 

ಉಳಿದ 20 ಸ್ಥಾನಗಳನ್ನು ಭರ್ತಿ ಮಾಡುವಾಗ ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಪರಿಗಣಿಸಲು ಪಕ್ಷ ಮುಂದಾಗಿದೆ. ಆದರೆ ಹೆಚ್ಚಿನ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವುದು ವಿಸ್ತರಣೆ ವಿಳಂಬಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಬಹುತೇಕರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಲು ಡಿಕೆಶಿ ಉತ್ಸುಕರಾಗಿದ್ದಾರೆ. ಆದರೆ ಈ ನಡೆಯಿಂದ ಸಿದ್ದರಾಮಯ್ಯ ಬೆಂಬಲಿಗರು ಯಾವ ನಡೆ ತೋರುತ್ತಾರೆಂಬ ಕುತೂಹಲ ಇದೆ. 224 ಸದಸ್ಯ ಬಲ ಇರುವ ರಾಜ್ಯ ವಿಧಾನಸಭೆಯಲ್ಲಿ ಗರಿಷ್ಠ 34 ಸಚಿವರನ್ನು ಮಾಡಲು ಅವಕಾಶ ಇದೆ. ಸದ್ಯಕ್ಕೆ 13 ಸಚಿವರನ್ನು ಮಾತ್ರ ನೇಮಕ ಮಾಡಿದ್ದು ಹೆಚ್ಚಿನ ಇಲಾಖೆಗಳು ಸಚಿವರಿಲ್ಲದೆ ಬಿಕೋ ಎನ್ನುವಂತಾಗಿದೆ.