ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರಷ್ಟಾಚಾರದ ಬಗ್ಗೆ ತಮ್ಮ ತಂದೆಯನ್ನು ಕೇಳಲಿ, ಖಾದರ್ ಮರೆಯಲ್ಲಿ ಕುಳಿತು ಕಾಂಗ್ರೆಸಿನ ಹಿಂದೂಗಳನ್ನ ಛೂ‌‌ ಬಿಟ್ಟು ಹಿಂದುಗಳ ನಡುವೆ ಬೆಂಕಿ ಹಚ್ಚುತ್ತಿದ್ದಾರೆ ; ಮೋಹನ್ ರಾಜ್ ಆರೋಪ

09-07-26 10:47 pm       HK News Desk   ಕರಾವಳಿ

ಉಳ್ಳಾಲ, ಜು-09 ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಪ್ರಧಾನಿ ಮೋದಿ ಪ್ರೆಸ್ ಮೀಟ್ ಕರೆಯದೆ ಯಾಕೆ ಮೌನವಾಗಿದ್ದಾರೆಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಅವರ ತಂದೆ ಸದಾಶಿವ ಉಳ್ಳಾಲ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಸಹ ಯಾಕೆ ಮೌನವಾಗಿದ್ದೀರೆಂದು ಅಭಿಷೇಕ್ ಅವರು ಮೊದಲು ತಮ್ಮ ತಂದೆಯವರನ್ನ ಸಿಕ್ಕ ಸಿಕ್ಕಲ್ಲಿ ಪ್ರಶ್ನಿಸಬೇಕಿದೆ. ಸ್ಥಳೀಯ ಶಾಸಕ,ಸಚಿವರಾದ ಯು.ಟಿ ಖಾದರ್ ಅವರು ಮರೆಯಲ್ಲಿ ಕುಳಿತು ಕಾಂಗ್ರೆಸ್ಸಿನ ಕೆಲ ಹಿಂದೂ ನಾಯಕರನ್ನ ಛೂ ಬಿಟ್ಟು  ಉಳ್ಳಾಲದ ಹಿಂದೂಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದರು.

ಉಳ್ಳಾಲ, ಜು-09 ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಪ್ರಧಾನಿ ಮೋದಿ ಪ್ರೆಸ್ ಮೀಟ್ ಕರೆಯದೆ ಯಾಕೆ ಮೌನವಾಗಿದ್ದಾರೆಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಅವರ ತಂದೆ ಸದಾಶಿವ ಉಳ್ಳಾಲ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದ್ದರೂ ಸಹ ಯಾಕೆ ಮೌನವಾಗಿದ್ದೀರೆಂದು ಅಭಿಷೇಕ್ ಅವರು ಮೊದಲು ತಮ್ಮ ತಂದೆಯವರನ್ನ ಸಿಕ್ಕ ಸಿಕ್ಕಲ್ಲಿ ಪ್ರಶ್ನಿಸಬೇಕಿದೆ. ಸ್ಥಳೀಯ ಶಾಸಕ,ಸಚಿವರಾದ ಯು.ಟಿ ಖಾದರ್ ಅವರು ಮರೆಯಲ್ಲಿ ಕುಳಿತು ಕಾಂಗ್ರೆಸ್ಸಿನ ಕೆಲ ಹಿಂದೂ ನಾಯಕರನ್ನ ಛೂ ಬಿಟ್ಟು  ಉಳ್ಳಾಲದ ಹಿಂದೂಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದರು.

ಅಯೋಧ್ಯೆಯ ರಾಮ ಮಂದಿರದಲ್ಲಿ ಕೋಟ್ಯಂತರ ರೂಪಾಯಿ ಹಗರಣಗಳಾದರೂ ಪ್ರಧಾನಿ ಮೋದಿ ಹಾಗೂ ಹಿಂದೂ ಸಂಘಟನೆಗಳು ಮೌನ ವಹಿಸಿರುವುದು ಯಾಕೆಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಉಳ್ಳಾಲ್ ಕೇಳಿರುವ ಪ್ರಶ್ನೆಗೆ ಪ್ರತಿಯಾಗಿ ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಕಾಂಗ್ರೆಸ್ ನ ವರಿಷ್ಟ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರೇ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಭ್ರಷ್ಟಾಚಾರ ಪ್ರಕರಣದ ಆರೋಪಿಗಳಾಗಿದ್ದು ನ್ಯಾಯಾಲಯದ ಜಾಮೀನಿನಲ್ಲಿ ಹೊರಗಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಸಹಕಾರ ಕೊಟ್ಟಿದ್ದಾರೆಯೇ ಹೊರತು ಟ್ರಸ್ಟಲ್ಲಿ ಆದ ಅವ್ಯವಹಾರಕ್ಕೂ ಅವರಿಗೂ ಎತ್ತಣ ಸಂಬಂಧ ? ಮೋದಿಯವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಅಸ್ತ್ರ ಸಿಗದ ಕಾರಣ ಅಯೋಧ್ಯೆ ವಿಚಾರದಲ್ಲಿ ಸುಖಾ ಸುಮ್ಮನೆ ಅವರ ಹೆಸರನ್ನ ಎಳೆ ತರಲು ಪ್ರಯತ್ನಿಸಲಾಗುತ್ತಿದೆ. ಅಯೋಧ್ಯೆ ರಾಮ ಮಂದಿರದ ಅವ್ಯವಹಾರ ವಿಚಾರದಲ್ಲಿ ನಮಗೂ ವಿಷಾದವಿದೆ. ಉತ್ತರ ಪ್ರದೇಶದ‌ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು‌ ದಿಟ್ಟ ಹೆಜ್ಜೆಯಿಟ್ಟು ಪ್ರಕರಣದ ತನಿಖೆಗಾಗಿ ಎಸ್ ಐಟಿ ರಚಿಸಿ ತಪ್ಪಿತಸ್ಥರನ್ನ ಬಂಧಿಸಿ ವಿಚಾರಣೆ ನಡೆಸಿ ರಿಕವರಿ ಪ್ರಕ್ರಿಯೆ ನಡೆಸುತ್ತಿರುವುದು ಅಭಿನಂದನೀಯ. ಯೋಗಿಗೆ ಯಾವಾಗ ಎಲ್ಲಿ ಬುಲ್ಡೋಜರ್ ಹರಿಸಬೇಕೆಂದು ಗೊತ್ತಿದೆ. ಕಾಂಗ್ರೆಸಿಗರ ಬಿಟ್ಟಿ ಸಲಹೆ ಅವರಿಗೆ ಬೇಕಿಲ್ಲ. ಅಯೋಧ್ಯೆ ಪ್ರಕರಣವು ಎಸ್ ಐಟಿ ತನಿಖಾ ಹಂತದಲ್ಲಿರುವ ಸಂದರ್ಭದಲ್ಲಿ  ಪ್ರಧಾನಿ ಅಥವಾ ಯಾವುದೇ ನಾಯಕರು ಮಧ್ಯಪ್ರವೇಶಿಸಿ ಮಾತನಾಡುವುದು ಕಾನೂನು ರೀತಿಯಲ್ಲಿ ಸಮಂಜಸ ಅಲ್ಲವೆಂಬುದನ್ನ ಕಾಂಗ್ರೆಸಿಗರು ಅರ್ಥೈಸಬೇಕು. 

ನಕಲಿ ಖಾತೆಗಳಿಗೆ ಹಣ ಜಮೆ ಆಗುವ ಮೂಲಕ ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿ ಐದು ಸಾವಿರ ಕೋಟಿ‌ ರೂಪಾಯಿ ಹಗರಣ ಆಗಿದೆ. ಇದರ ಬಗ್ಗೆ ಕಾಂಗ್ರೆಸ್ ಮುಖಂಡರು ಯಾಕೆ ಮೌನವಾಗಿದ್ದೀರಿ. ಹಗರಣದ ಸಮಗ್ರ ತನಿಖೆಗಾಗಿ ಎಸ್ ಐಟಿ ರಚಿಸಲು ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡಿಯೆಂದು ಮೋಹನ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಶ್ರೀರಾಮನ ವಿರುದ್ಧವೇ ಇತ್ತು 

ಬಿಜೆಪಿ ಜಿಲ್ಲಾ ವಕ್ತಾರರಾದ ಜೀವನ್ ಕುಮಾರ್ ತೊಕ್ಕೊಟ್ಟು ಮಾತನಾಡಿ ಕಾಂಗ್ರೆಸ್ ಮುಖಂಡ ಅಭಿಷೇಕ್ ಅವರು ಕಾಂಗ್ರೆಸ್ ರಾಮ ಮಂದಿರದ ವಿರುದ್ಧ ಹೋಗಿಲ್ಲವೆಂದು ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್ ಯಾವಾಗ ರಾಮ ಮಂದಿರದ ಪರವಾಗಿತ್ತೆಂದು ಪ್ರಶ್ನಿಸಿದರು. 2017 ರಲ್ಲಿ ಸುನ್ನೀ ವಕ್ಫ್ ಬೋರ್ಡ್ ಪರವಾಗಿ ಹಾಗೂ ರಾಮ ಮಂದಿರ ನಿರ್ಮಾಣ ಟ್ರಸ್ಟ್  ವಿರುದ್ಧವಾಗಿ ಹಿರಿಯ ಕಾಂಗ್ರೆಸಿಗ ಕಪಿಲ್ ಸಿಬಲ್ ನ್ಯಾಯಾಲಯದಲ್ಲಿ ವಾದಿಸಿದ್ದರು. ಅದಕ್ಕೂ ಹಿಂದೆ ರಾಮಾಯಣ ಕಾಲ್ಪನಿಕ,ರಾಮ ಎಂಬ ಪಾತ್ರವೇ ಇಲ್ಲವೆಂದು ಕಾಂಗ್ರೆಸಿಗರು ಕೋರ್ಟಲ್ಲಿ ಅಫಿದವಿತ್ ಹಾಕಿದ್ದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಮೇಶ್ವರದ ರಾಮ ಸೇತುವನ್ನೇ ಒಡೆದು ಹಾಕಲು ಪ್ರಯತ್ನಿಸಿತ್ತು. ಪ್ರತೀ ಸಂದರ್ಭದಲ್ಲೂ ಶ್ರೀರಾಮನ ವಿರುದ್ಧವೇ ಇದ್ದ ಕಾಂಗ್ರೆಸಿಗರು‌ ಕೊನೆಗೆ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ದೇವರ ಪ್ರಾಣ ಪ್ರತಿಷ್ಟೆಗೂ ಬಂದಿರಲಿಲ್ಲ. ರಾಮನ ಶಾಪದಿಂದಲೇ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಇಂದು ವಿಪಕ್ಷ ಸ್ಥಾನಕ್ಕೂ ಲಾಯಕ್ಕಿಲ್ಲದಂತಾಗಿದೆ. ರಾಮ ಮಂದಿರ, ಸೋಮನಾಥ ದೇವಸ್ಥಾನಗಳನ್ನ ಧ್ವಂಸ ಮಾಡಿದವರು ಯಾರೆಂದು ಹೇಳಲು ಧೈರ್ಯವಿಲ್ಲದ ಕಾಂಗ್ರೆಸಿಗರು ಅಯೋಧ್ಯೆ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಲು ಹೊರಟಿರುವುದು ಹಾಸ್ಯಾಸ್ಪದವೆಂದು ಜೀವನ್ ಹೇಳಿದರು.

ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು,ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ನಿಶಾನ್ ಪೂಜಾರಿ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರಣ್ ಶೆಟ್ಟಿ, ಸಾಮಾಜಿಕ ಜಾಲತಾಣ ಸಂಚಾಲಕ ಗಣೇಶ್ ನಡಾರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.