ನಾರಾಯಣ ಗುರುಗಳಿಗೆ ಅನ್ಯಾಯ ಮಾಡಿದ್ದಾರೆ, ಸಚಿವ ಸುನಿಲ್, ಕೋಟಗೆ ಸ್ವಾಭಿಮಾನ ಇರುತ್ತಿದ್ದರೆ ರಾಜಿನಾಮೆ ನೀಡಬೇಕಿತ್ತು ; ಡಿಕೆಶಿ

19-05-22 10:21 pm       Mangalore Correspondent   ಕರಾವಳಿ

ನಾರಾಯಣ ಗುರುಗಳೇನು ಯಾವುದಾದ್ರೂ ರಾಜಕೀಯ ಪಕ್ಷದ ನಾಯಕರಾಗಿದ್ದರೇ.. ಅವರು ಈ ನಾಡಿಗೆ ಹೇಳಿಕೊಟ್ಟ ಉದಾತ್ತ ತತ್ವಗಳನ್ನೇ ಕಾಂಗ್ರೆಸ್ ಅಳವಡಿಸಿದೆ.

ಮಂಗಳೂರು, ಮೇ 19: ನಾರಾಯಣ ಗುರುಗಳೇನು ಯಾವುದಾದ್ರೂ ರಾಜಕೀಯ ಪಕ್ಷದ ನಾಯಕರಾಗಿದ್ದರೇ.. ಅವರು ಈ ನಾಡಿಗೆ ಹೇಳಿಕೊಟ್ಟ ಉದಾತ್ತ ತತ್ವಗಳನ್ನೇ ಕಾಂಗ್ರೆಸ್ ಅಳವಡಿಸಿದೆ. ಆದರೆ ಅಂತಹ ಮಹಾನ್ ವ್ಯಕ್ತಿತ್ವದ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಪಾಠವನ್ನೇ ಬಿಜೆಪಿ ಸರಕಾರ ತೆಗೆದು ಹಾಕಿದೆ. ಇವರು ತೆಗೆದು ಹಾಕಿದರೇನು, ಮುಂದಿನ ಬಾರಿ ಕಾಂಗ್ರೆಸ್ ಸರಕಾರ ಬಂದಾಗ ನಾರಾಯಣ ಗುರುಗಳ ಪಾಠವನ್ನು ಮತ್ತೆ ಅಳವಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ವಿಧಾನ ಪರಿಷತ್ ಸಭಾನಾಯಕ ಬಿ.ಕೆ.ಹರಿಪ್ರಸಾದ್ ಮತ್ತು ವಿಭಾನಸಭೆಯ ಉಪನಾಯಕರಾಗಿ ಆಯ್ಕೆಯಾದ ಯುಟಿ ಖಾದರ್ ಅವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಭಾಗದಲ್ಲಿ ನಾರಾಯಣ ಗುರುಗಳನ್ನು ತಮ್ಮ ಸಮಾಜದ ಗುರುಗಳೆಂದು ನಂಬುವ ಬಿಲ್ಲವರನ್ನು ಪ್ರತಿನಿಧಿಸುವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿಗೆ ಸ್ವಾಭಿಮಾನ ಇರುತ್ತಿದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ಆದರೆ ಇವರು ಏನೇನೋ ಹೇಳಿ ಸಮರ್ಥನೆ ಮಾಡುತ್ತಿದ್ದಾರೆ. ಕರಾವಳಿ, ಮಲೆನಾಡಿನಲ್ಲಿ ಬಿಲ್ಲವ, ಈಡಿಗರದ್ದು ದೊಡ್ಡ ಸಮಾಜ. ಹಿಂದೆ ಒಂದೇ ಬಾರಿಗೆ ಐದು ಸಂಸದರನ್ನು ಕೊಟ್ಟಿದ್ದ ಸಮುದಾಯ. ಸಮಾಜದ ಜನರು ಈಗ ತಮ್ಮ ಗುರುಗಳಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಬಂದಿದೆ. ಎನ್ ಇಪಿ ಅಂದರೆ ನಾಗಪುರ್ ಎಜುಕೇಶನ್ ಪಾಲಿಸಿ. ಅದನ್ನು ಹೇಗೆ ಬದಲಾಯಿಸಬೇಕೆಂದು ಕಾಂಗ್ರೆಸಿಗೆ ಗೊತ್ತಿದೆ ಎಂದರು ಡಿಕೆಶಿ.

ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ವಿಧಾನಸಭೆಯ ಬಾಗಿಲು, ಗೋಡೆಗಳಿಂದ ಹಿಡಿದು ರಾಜ್ಯಾದ್ಯಂತ ಎಲ್ಲ ಸರಕಾರಿ ಕಚೇರಿಗಳ ಗೋಡೆಗಳು ಕೂಡ ಕಾಸು ಕಾಸು ಎಂದು ಬಾಯಿ ಬಿಡುತ್ತಿವೆ. ಒಬ್ಬ ಲಂಚಕ್ಕೋದ, ಇನ್ನೊಬ್ಬ ಮಂಚಕ್ಕೋದ ಎನ್ನುವ ಸ್ಥಿತಿ ಬಿಜೆಪಿಯದ್ದು. ಪಿಎಸ್ಐ ಪರೀಕ್ಷೆಯಲ್ಲಿ ಬ್ಲೂಟೂತಲ್ಲಿ ನಕಲಿ ಹೊಡೆಯುವ ಸ್ಥಿತಿ ಬಂದಿದೆ. ಇವರು ಒಂದಾದ್ರೂ ಪರೀಕ್ಷೆಯನ್ನು ನೆಟ್ಟಗೆ ಮಾಡಿದ್ದಾರೆಯೇ.. ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಸರಕಾರಿ ನೇಮಕಾತಿ ಆಗಿಲ್ಲವೇ.. ಇಂಥ ಸ್ಥಿತಿ ಎದುರಾಗಿತ್ತಾ.. ಈಗ ತನಿಖೆ ನಡೆಸುವ ನೆಪದಲ್ಲಿ ಅಂಗಡಿ ಓಪನ್ ಮಾಡ್ದೋರನ್ನೆಲ್ಲ ಹಿಡೀತಿದ್ದಾರೆ. ತಿಮಿಂಗಿಲಗಳೆಲ್ಲ ಒಳಗೆ ಕೂತಿವೆ ಎಂದು ಛೇಡಿಸಿದರು. ಯಾರೋ ಒಬ್ಬ ಶಾಸಕರು ಮಂತ್ರಿಗಿರಿಗೆ ನೂರು ಕೋಟಿ, ಸಿಎಂ ಸೀಟಿಗೆ ಸಾವಿರ ಕೋಟಿ ಎಂದು ಹೇಳಿದ್ದಾರೆ. ಸುದೀರ್ಘ ಇತಿಹಾಸ ಇರುವ ನಮ್ಮ ರಾಜ್ಯದ ಸ್ಥಿತಿ ಎಲ್ಲಿಗೆ ಬಂತು ನೋಡಿ. ಸಿಎಂ, ಸಚಿವ ಸ್ಥಾನವನ್ನೂ ಮಾರುವ ಸ್ಥಿತಿಗೆ ಬಂದಿದೆ ಎಂದು ಹೇಳಿದರು.

ವಿಧಾನ ಪರಿಷತ್ ನಾಯಕ ಬಿ.ಕೆ ಹರಿಪ್ರಸಾದ್ ಮಾತನಾಡಿ, ನಾರಾಯಣ ಗುರುಗಳು ತಮ್ಮವರೆಂದು ಹೇಳಿಕೊಳ್ಳುವ ಶೂದ್ರರು ಶಿಕ್ಷಣ ಪಡೆಯಬಾರದೆಂಬ ನೆಲೆಯಲ್ಲಿ ಅವರ ಪಠ್ಯವನ್ನೇ ತೆಗೆದು ಹಾಕಿದ್ದಾರೆ. ಧರ್ಮದ ಹೆಸರಲ್ಲಿ ದ್ವೇಷ ಹರಡುತ್ತಿರುವ ಮುತಾಲಿಕ್ ದೇಸಾಯಿ ಒಬ್ಬ ನರಹೇಡಿ. ಮುಂಬೈನಲ್ಲಿ ಕರಾವಳಿ ಮಂದಿಯನ್ನು ಹೊರಗಟ್ಟಿದಾಗ ಈ ವ್ಯಕ್ತಿ ಎಲ್ಲಿದ್ದ. ಯಾಕೆ ಮುಂಬೈಗೆ ಹೋಗಿ ಕರ್ನಾಟಕದ ಜನರ ಪರ ನಿಂತಿಲ್ಲ ಎಂದು ಪ್ರಶ್ನಿಸಿದರು. ಮೋದಿಯವರು ಮೂರು ಸಾವಿರ ಕೋಟಿ ಖರ್ಚು ಮಾಡಿ ಸರ್ದಾರ್ ಪಟೇಲರ ಮೂರ್ತಿ ಸ್ಥಾಪಿಸಿದ್ದಾರೆ. ಯಾಕೆ, ಮುನ್ನೂರು ಕೋಟಿ ಖರ್ಚು ಮಾಡಿ ಒಂದು ಮೆಡಿಕಲ್ ಕಾಲೇಜು ಮಾಡಿಲ್ಲ. ಬಿಜೆಪಿಯವರಿಗೆ ಬಡವರ್ಗದ ಜನ ಕಲಿಯಬೇಕು ಎಂಬ ಕಾಳಜಿ ಇಲ್ಲ ಎಂದರು.

ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಮತ್ತು ಯುಟಿ ಖಾದರ್ ಅವರನ್ನು ಸಮ್ಮಾನಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ರಮಾನಾಥ ರೈ, ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Minister sunil Kumar has cheated Narayana Guru slams DK Shivakumar in Mangalore for Text on Narayana Guru, Periyar removed from class 10 social science textbook in Karnataka