ಬಿಜೆಪಿ ಸರ್ಕಾರ ಪೊಲೀಸರ ಅಧಿಕಾರವನ್ನು ಕಾರ್ಯಕರ್ತರಿಗೆ ಕೊಟ್ಟಿದ್ದಾರೆ ; ಯುಪಿಯಲ್ಲಿ ಮಂತ್ರಿ ಮಕ್ಕಳೇ ರೈತರನ್ನು ಮರ್ಡರ್ ಮಾಡುತ್ತಿದ್ದಾರೆ ! 

05-10-21 09:40 am       Mangaluru Correspondent   ಕರಾವಳಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಪ್ರಕರಣದ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ‌.

ಮಂಗಳೂರು, ಅ.5: ಮಂಗಳೂರಿನಲ್ಲಿ ಹೆಚ್ಚುತ್ತಿರುವ ನೈತಿಕ ಪೊಲೀಸ್ ಪ್ರಕರಣದ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ‌. ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಇಲ್ಲಿ ಬಿಜೆಪಿಯವರದ್ದು ಜಾಸ್ತಿಯಾಗ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಿಗಳನ್ನು ದುರುಪಯೋಗ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಇವರು ಪೊಲೀಸರ ಅಧಿಕಾರವನ್ನು ತಮ್ಮ ಕಾರ್ಯಕರ್ತರಿಗೆ ಕೊಟ್ಟು ಬಿಟ್ಟಿದ್ದಾರೆ‌.‌ ಬಹಿರಂಗವಾಗಿಯೇ ನಮ್ಮ ಕಾರ್ಯಕರ್ತರಿಗೆ ಹೊಡೆಯೋದಾಗಿ ಹೇಳ್ತಿದ್ದಾರೆ. ಯಾರೋ ವಿದ್ಯಾರ್ಥಿಗಳು ವಿಹಾರ ತೆರಳಿದ್ದಾಗ ಹಲ್ಲೆ ನಡೆಸುತ್ತಿದ್ದಾರೆ. ‌ಇದು ಈ ಭಾಗದ ಕಾನೂನು ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದರು. 

ಉತ್ತರ ಪ್ರದೇಶದಲ್ಲಿ ರೈತರ ಮೇಲಿನ ಹಿಂಸಾಚಾರ ನೋಡಿದರೆ, ದೇಶದಲ್ಲಿ ಕಾನೂನೇ ಇಲ್ಲ ಎನ್ನುವ ಪ್ರಶ್ನೆ ಮೂಡಿಸುತ್ತಿದೆ.‌ ಪ್ರತಿಭಟನೆ, ಹೋರಾಟ ಮಾಡುವುದು ರೈತರ ಹಕ್ಕು.ಗಾಂಧೀಜಿ ಅಹಿಂಸೆಯ ಮೂಲಕ ಹೋರಾಟ ಮಾಡಿ ಅಂತಾ ಹೇಳಿರೋದು. ನಮ್ಮ ದೇಶದಲ್ಲಿ ಹನ್ನೊಂದು ತಿಂಗಳಿಂದ ರೈತರು ಬೀದಿಗಿಳಿದು ಹೋರಾಟ ಮಾಡ್ತಿದ್ದಾರೆ.‌ ಆದರೆ, ಹೋರಾಟಗಾರರ ಮೇಲೆ ಕೇಂದ್ರ ಸಚಿವರೊಬ್ಬರ ಮಗ ಮತ್ತು ಯುಪಿ ಉಪ ಮುಖ್ಯಮಂತ್ರಿಯ ಮಗ ಕಾರು ಹರಿಸಿ ಪ್ರತಿಭಟನಾಕಾರರನ್ನು ಮರ್ಡರ್ ಮಾಡಿದ್ದಾರೆ.‌ ಘಟನೆಯಲ್ಲಿ ನಾಲ್ಕು ಜನ ಸತ್ತಿದ್ದಾರೆ. ಹೋರಾಟ ಮಾಡ್ತಿದ್ದವರನ್ನು ಗಾಡಿ ಹತ್ತಿಸಿ ಕೊಂದಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿ ಮಂತ್ರಿಯಿಂದ ರಾಜೀನಾಮೆ ಪಡೆದಿಲ್ಲ. 

ರೈತರ ಭೇಟಿಗೆ ಹೋದ ಪ್ರಿಯಾಂಕಾ ಗಾಂಧಿ ಅವರ ಮೇಲೂ ಮ್ಯಾನ್ ಹ್ಯಾಡ್ಲಿಂಗ್ ಮಾಡಿದ್ದಾರೆ.‌ ಅವರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ.‌ ಇದು ಭಾರತದ ಸಂಸ್ಕೃತಿಗೆ ಮಾಡಿದ ಅವಮಾನ.‌ ಬ್ರಿಟಿಷರಿಗಿಂತ ಹೀನಾಯವಾಗಿ ನಡೆದುಕೊಂಡಿದ್ದಾರೆ. ಗಾಂಧೀಜಿಯವರು ಈಗ ಬದುಕಿದ್ದರೆ ಏನು ಹೇಳ್ತಿದ್ರು, ಏನ್ ಮಾಡ್ತಿದ್ರು ಅಂತಾ ಅರ್ಥ ಆಗ್ತಿಲ್ಲ. ಈ ದೇಶಕ್ಕೆ ಗಾಂಧಿ ಕುಟುಂಬ ಎಲ್ಲಾ ವರ್ಗದ ಜನರಿಗೆ ನ್ಯಾಯ ಕೊಡಿಸಿದ್ದಾರೆ. ಯು.ಪಿ ಪೊಲೀಸರಿಗೆ ಇವರ್ಯಾರು ಹೆದರಲ್ಲ.‌ ನಾವೆಲ್ಲಾ ಅವರ ಪರವಾಗಿ ನಿಲ್ತೇವೆ, ಹೋರಾಟ ಮಾಡ್ತೇವೆ ಎಂದು ಹೇಳಿದರು.‌ 

ಸುಳ್ಯದ ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿ ಬೈದಿದ್ದ ಪ್ರಕರಣ ಸಂಬಂಧಿಸಿ ವಾರಂಟ್ ಹಿನ್ನೆಲೆ ಡಿಕೆ ಶಿವಕುಮಾರ್ ಸುಳ್ಯ ಕೋರ್ಟಿಗೆ ಇಂದು ಹಾಜರಾಗುತ್ತಿದ್ದಾರೆ. ಇದಕ್ಕಾಗಿ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಪ್ರಕರಣದ ಬಗ್ಗೆ ಹಳೆಯ ಘಟನೆಯನ್ನು ಸ್ಮರಿಸಿದ ಡಿಕೆಶಿ, ನಾನು ಇಂಧನ ಸಚಿವನಾಗಿದ್ದಾಗ ಯಾರೋ ಒಬ್ಬ ತರ್ಲೆ ಫೋನ್ ಮಾಡಿ, ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದ.‌ ನಮ್ಮ ಅಧಿಕಾರಿಗಳು ಅವನ ವಿರುದ್ದ ದೂರು ನೀಡಿದ್ದರು. ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೇ ಬೈದಿದ್ದ. ಸಾಕ್ಷಿಯಾಗಿ ಬರಬೇಕು ಅಂತಾ ನ್ಯಾಯಾಲಯ ಹೇಳಿತ್ತು. 

ಪ್ರಾರಂಭದಲ್ಲಿ ನನಗೂ ಈ ಬಗ್ಗೆ ಗೊತ್ತಿರಲಿಲ್ಲ.‌ ನಮಗೆಲ್ಲಾ ಈ ವಿಚಾರದಲ್ಲಿ ಸ್ವಲ್ಪ ತಿಳುವಳಿಕೆ‌ ಕಡಿಮೆ. ಲುಕ್ ಔಟ್ ನೋಟಿಸ್, ಪೇಪರ್ ನಲ್ಲಿ ಹಾಕ್ತೇವೆ ಎಂದು ಆರ್ಡರ್ ಮಾಡಿದ್ದಾರೆ ಅಂತಾ ಗೊತ್ತಾಯ್ತು. ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ. ನಾವೇ ಕಾನೂನು ಮಾಡಿದವರು, ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ ಎಂದು ಡಿಕೆಶಿ ಮರುಪ್ರಶ್ನೆ ಮಾಡಿದರು.

Karnataka Pradesh Congress Committee (KPCC) president D K Shivakumar arrives in Mangalore to attend a court hearing at 11.30 am on October 5 as a witness with regards to a telephonic conversation case that was held between him and Sai Giridhar, a resident of Bellare six years ago.