ಕೋರ್ಟ್, ಶಾಲೆಗಳಿಗೆ ಬಾಂಬ್ ಬೆದರಿಕೆ ; ಮೈಸೂರಿನಲ್ಲೇ ಕುಳಿತು ಕೃತ್ಯ, ದೆಹಲಿ ಪೊಲೀಸರಿಂದ ಆರೋಪಿ ಬಂಧನ

28-03-26 06:13 pm       HK News Staffer   ಕ್ರೈಂ

ಸರ್ಕಾರಿ ಕಚೇರಿ, ಶಾಲೆಗಳಿಗೆ ಹುಸಿ ಬಾಂಬ್ ಸಂದೇಶ ನೀಡಿ ಆತಂಕ ಸೃಷ್ಟಿಸುತ್ತಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮೈಸೂರು, ಮಾರ್ಚ್ 28: ಸರ್ಕಾರಿ ಕಚೇರಿ, ಶಾಲೆಗಳಿಗೆ ಹುಸಿ ಬಾಂಬ್ ಸಂದೇಶ ನೀಡಿ ಆತಂಕ ಸೃಷ್ಟಿಸುತ್ತಿದ್ದ ಮೈಸೂರು ಮೂಲದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 

ಮೈಸೂರಿನಲ್ಲಿ ಅಡಗಿ ಕುಳಿತು ಬಾಂಬ್ ಸ್ಪೋಟಿಸುವ ಬಗ್ಗೆ ಬೆದರಿಕೆ ಸಂದೇಶ ಹಾಕುತ್ತಿದ್ದ ವ್ಯಕ್ತಿಯನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ.‌ ಈತ ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್ ನ ಮನೆಯೊಂದರಲ್ಲಿ ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದ ಎನ್ನುವುದನ್ನು ಪತ್ತೆ ಮಾಡಲಾಗಿದೆ. 

ಇತ್ತೀಚೆಗೆ ಸರ್ಕಾರಿ ಕಚೇರಿಗಳು, ಶಾಲಾ ಕಟ್ಟಡಗಳು ಹಾಗೂ ನ್ಯಾಯಾಲಯಗಳಿಗೆ ಬಾಂಬ್ ಸ್ಪೋಟಗೊಳಿಸುವ ಬಗ್ಗೆ ಬೆದರಿಕೆ ಸಂದೇಶ ರವಾನೆ ಮಾಡಲಾಗಿತ್ತು. ಒಂದೇ ತಿಂಗಳಿನಲ್ಲಿ ಹಲವು ಬಾರಿ ಇಮೇಲ್ ಮೂಲಕ ಸಂದೇಶ ರವಾನಿಸಲಾಗಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ಇಮೇಲ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಈತ ಮೈಸೂರಿನಿಂದ ಕಾರ್ಯಾಚರಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದು ದೆಹಲಿ ಪೊಲೀಸರು ದಿಢೀರ್ ದಾಳಿ ನಡೆಸಿ, ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿದ್ದಾರೆ. ‌

ದೆಹಲಿ ಪೊಲೀಸರಿಗೆ ಮೈಸೂರಿನ ವಿವಿ ಪುರಂ ಠಾಣೆ ಪೊಲೀಸರು ಸಾಥ್ ನೀಡಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ದೆಹಲಿಗೆ ಕರೆದೊಯ್ಯಲಿದ್ದು ಆರೋಪಿ ಮನೆಯಲ್ಲಿ ಹಲವು ಸಿಮ್ ಗಳು ಹಾಗೂ ಲ್ಯಾಪ್ ಟ್ಯಾಪ್ ಸೀಜ್ ಮಾಡಲಾಗಿದೆ.