ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂದಿ ಬಂಧನ, ದೈವಸ್ಥಾನ ಸಮಿತಿ ವಿರುದ್ಧವೂ ಕೇಸು, ಒಂದು ದಿನಕ್ಕೆ ಅವಕಾಶ ನೀಡಿದ್ದೆವು, ಮತ್ತೆ ಮಾಡುವುದು ಜೂಜಿನ ಸಂಸ್ಕೃತಿ ; ಕಮಿಷನರ್

19-03-26 01:05 pm       HK News Staffer   ಕರಾವಳಿ

ಮೂಡುಬಿದರೆ ಪೊಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಬಲ್ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯ ನೆಪದಲ್ಲಿ ಕೋಳಿ ಅಂಕ ನಡೆಸಿದ್ದು ಪೊಲೀಸರು ದಾಳಿ ನಡೆಸಿ ಆರು ಜನರನ್ನು ಬಂಧಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿರುದ್ಧವೂ ಕೇಸು ದಾಖಲಿಸಿದ್ದಾರೆ.

ಮಂಗಳೂರು, ಮಾರ್ಚ್ 19: ಮೂಡುಬಿದರೆ ಪೊಲೀಸ್ ಠಾಣಾ ಸರಹದ್ದಿನ ಮೂಡುಮೂರ್ನಾಡು ಗ್ರಾಮದ ಹೊಯಿಪಾಲಬೆಟ್ಟು ಎಂಬಲ್ಲಿ ಕೋಡಮಣಿತ್ತಾಯ ಹಾಗೂ ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆಯ ನೆಪದಲ್ಲಿ ಕೋಳಿ ಅಂಕ ನಡೆಸಿದ್ದು ಪೊಲೀಸರು ದಾಳಿ ನಡೆಸಿ ಆರು ಜನರನ್ನು ಬಂಧಿಸಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ವಿರುದ್ಧವೂ ಕೇಸು ದಾಖಲಿಸಿದ್ದಾರೆ. 

ರಾಜೇಂದ್ರ ಪೂಜಾರಿ ಹಾಗೂ ರಾಜೇಶ್ ಬಲ್ಲಾಳ್ ಎಂಬವರ ನೇತೃತ್ವದಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ಸೇರಿಕೂಂಡು ಕೋಳಿಗಳಿಗೆ ಹರಿತವಾದ ಕತ್ತಿಗಳನ್ನು ಕಟ್ಟಿ ಹಿಂಸಾತ್ಮಕವಾಗಿ ಕಾದಾಡಲು ಬಿಟ್ಟು ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದರು. ದಾಳಿ ನಡೆಸಿದ ಪೊಲೀಸರು ಕೋಳಿ ಅಂಕದಲ್ಲಿ ನಿರತರಾಗಿದ್ದ 6 ಜನ ಆರೋಪಿಗಳನ್ನು ಹಾಗೂ ಕೋಳಿ ಅಂಕದಲ್ಲಿ ಪಣಕ್ಕಿಟ್ಟಿದ್ದ 1480/- ರೂ. ಹಣವನ್ನು ಹಾಗೂ 17 ಜೀವಂತ ಹುಂಜಗಳು ಮತ್ತು ಕೋಳಿ ಅಂಕಕ್ಕೆ ಬಳಸುವ ಎರಡು ಬಾಳ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ದೈವಸ್ದಾನದ ವ್ಯವಸ್ದಾಪನಾ ಸಮಿತಿ ಹಾಗೂ ಆರೋಪಿಗಳ ಮೇಲೆ ಮೂಡಬಿದ್ರೆ ಪೊಲೀಸ್  ಠಾಣಾ ಅ ಕ್ರ 30/2026 ಕಲಂ 189(2), 193 ಜೊತೆಗೆ 190 ಬಿ ಎನ್ ಎಸ್ ಮತ್ತು  87, 93 ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 11(1)(ಟಿ) ಪ್ರಾಣಿ ಹಿಂಸಾ ಪ್ರತಿಬಂಧಕ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಿದ್ದಾರೆ. 

ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಿಷನರ್ ಸುಧೀರ್ ರೆಡ್ಡಿ, ಜಾತ್ರೆಯ ಸಂಪ್ರದಾಯ ಎಂದು ಒಂದು ದಿನ ಕೋಳಿ ಅಂಕ ನಡೆಸಲು ಬಿಡಲಾಗಿತ್ತು. ಆನಂತರವೂ ಕೋಳಿ ಅಂಕ ನಡೆಸುವುದು ಜೂಜಿನ ಸಂಸ್ಕೃತಿಯಾಗುತ್ತದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಹಣ ಪಣಕ್ಕಿಟ್ಟು ಮತ್ತೆ ಅದನ್ನೇ ಮುಂದುವರಿಸುವುದು ಸಂಪ್ರದಾಯ ಪಾಲ‌ನೆ ಆಗುವುದಿಲ್ಲ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.