ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮಂಗಳೂರಿಗೆ ಎಸ್ಪಿ ಭೇಟಿಗೆ ಬಂದ ವಕೀಲರ ನಿಯೋಗ, ಪತ್ರಕರ್ತರ ಪ್ರಶ್ನೆಗುತ್ತರಿಸದೆ ಹಿಂದಕ್ಕೆ ತೆರಳಿದ ಸದಸ್ಯರು

27-06-25 04:56 pm       Mangalore Correspondent   ಕರಾವಳಿ

ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವುಗಳ ಕುರಿತ ಪತ್ರವೊಂದು ವೈರಲ್ ಆದ ವಿಚಾರದ ಬಗ್ಗೆ ಬೆಂಗಳೂರಿನ ವಕೀಲರ ನಿಯೋಗವೊಂದು ಮಂಗಳೂರಿಗೆ ಆಗಮಿಸಿದ್ದು, ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಅವರನ್ನು ಭೇಟಿಯಾಗಲು ಯತ್ನಿಸಿದೆ. ಆದರೆ ಎಸ್ಪಿ ಅರುಣ್ ಬೆಂಗಳೂರಿನಲ್ಲಿ ಇರುವುದರಿಂದ ವಕೀಲರಿಗೆ ಭೇಟಿ ಸಾಧ್ಯವಾಗದೆ ಹಿಂದಕ್ಕೆ ತೆರಳಿದ್ದಾರೆ.  

ಮಂಗಳೂರು, ಜೂನ್ 27 : ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವುಗಳ ಕುರಿತ ಪತ್ರವೊಂದು ವೈರಲ್ ಆದ ವಿಚಾರದ ಬಗ್ಗೆ ಬೆಂಗಳೂರಿನ ವಕೀಲರ ನಿಯೋಗವೊಂದು ಮಂಗಳೂರಿಗೆ ಆಗಮಿಸಿದ್ದು, ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಅವರನ್ನು ಭೇಟಿಯಾಗಲು ಯತ್ನಿಸಿದೆ. ಆದರೆ ಎಸ್ಪಿ ಅರುಣ್ ಬೆಂಗಳೂರಿನಲ್ಲಿ ಇರುವುದರಿಂದ ವಕೀಲರಿಗೆ ಭೇಟಿ ಸಾಧ್ಯವಾಗದೆ ಹಿಂದಕ್ಕೆ ತೆರಳಿದ್ದಾರೆ.  

ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ ಮತ್ತು ಸಚಿನ್ ಎಸ್. ದೇಶಪಾಂಡೆ ಅವರನ್ನು ಒಳಗೊಂಡ ನಾಲ್ವರಿದ್ದ ವಕೀಲರ ತಂಡ ಮಂಗಳೂರಿನ ಎಸ್ಪಿ ಕಚೇರಿಗೆ ಆಗಮಿಸಿತ್ತು. ಬೆಳಗ್ಗೆ ಒಂದಷ್ಟು ಹೊತ್ತು ಕಚೇರಿಯಲ್ಲಿ ಕುಳಿತುಕೊಂಡು ಆನಂತರ ಎಸ್ಪಿ ಬೆಂಗಳೂರಿಗೆ ತೆರಳಿದ್ದಾರೆಂಬ ಮಾಹಿತಿ ತಿಳಿದು ಅಲ್ಲಿಂದ ಹೊರಟಿತು. ಈ ವೇಳೆ, ಸ್ಥಳದಲ್ಲಿದ್ದ ಟಿವಿ ಪತ್ರಕರ್ತರು ಅವರನ್ನು ಪ್ರಶ್ನೆ ಮಾಡಿದ್ದು, ನಾವು ಎಸ್ಪಿಯವರನ್ನು ಭೇಟಿಯಾಗಲು ಬಂದಿದ್ದೇವೆ, ಅವರು ಇಲ್ಲದ ಕಾರಣ ಮತ್ತೊಂದು ದಿನ ಬರಲಿದ್ದೇವೆ. ನಮಗೆ ನಿಮ್ಮ ಜೊತೆಗೆ ಮಾತನಾಡಲು ವಿಷಯ ಇಲ್ಲ ಎಂದಿದ್ದಾರೆ. ಯಾವುದೇ ಪ್ರಶ್ನೆ ಕೇಳಿದರೂ ನೋ ಕಮೆಂಟ್ಸ್ ಎನ್ನುತ್ತ ಅಲ್ಲಿಂದ ನಿರ್ಗಮಿಸಿದ್ದಾರೆ.

ವಾರದ ಹಿಂದೆ ಬೆಂಗಳೂರಿನ ವಕೀಲರಾದ ಓಜಸ್ವಿ ಗೌಡ, ಸಚೀನ್ ದೇಶಪಾಂಡೆ ಅವರ ಹೆಸರಿದ್ದ ಪತ್ರದಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆಗಳ ಬಗ್ಗೆ ಮಾಹಿತಿ ಇರುವ ವ್ಯಕ್ತಿಯೊಬ್ಬ ನಮ್ಮ ಬಳಿಗೆ ಬಂದಿದ್ದು, ತನ್ನ ಪಾಪಪ್ರಜ್ಞೆಯಿಂದ ಪೊಲೀಸರಿಗೆ ಹೇಳಿಕೆ ನೀಡಲು ಸಿದ್ಧನಿದ್ದಾನೆಂದು ತಿಳಿಸಿದ್ದಾನೆ. ಆತನಿಗೆ ಪೊಲೀಸರು ರಕ್ಷಣೆ ನೀಡಬೇಕೆಂದು ಪತ್ರದಲ್ಲಿ ಕೇಳಿಕೊಂಡಿದ್ದರು. ಈ ಪತ್ರ ವೈರಲ್ ಆಗುತ್ತಿದ್ದಂತೆ, ದಕ್ಷಿಣ ಕನ್ನಡ ಎಸ್ಪಿ ಡಾ.ಅರುಣ್ ಪ್ರತಿಕ್ರಿಯಿಸಿ, ವೈರಲ್ ಆಗಿರುವ ಪತ್ರವನ್ನು ಗಮನಿಸಿದ್ದೇವೆ. ಅದರಲ್ಲಿದ್ದ ಮಾಹಿತಿ ಆಧರಿಸಿ ಧರ್ಮಸ್ಥಳ ಪೊಲೀಸರು ವಕೀಲರನ್ನು ಸಂಪರ್ಕಿಸಿದ್ದಾರೆ. ಮಾಹಿತಿ ನೀಡುವ ವ್ಯಕ್ತಿಗೆ ರಕ್ಷಣೆ ನೀಡುತ್ತೇವೆ ಎಂದಿದ್ದರು.

ಬೆಂಗಳೂರಿನಲ್ಲಿ ಐಪಿಎಸ್ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಎಸ್ಪಿ, ಕಮಿಷನರ್ ಸೇರಿದಂತೆ ಬಹುತೇಕ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿದ್ದಾರೆ. ಇದು ಮೊದಲೇ ನಿಗದಿಯಾದ ಸಭೆಯಾಗಿದ್ದು, ಎಸ್ಪಿಯನ್ನು ಭೇಟಿಯಾಗಲು ಬರುವ ಬೆಂಗಳೂರಿನ ವಕೀಲರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಯಾವುದಕ್ಕೂ ಉತ್ತರಿಸದೆ ನುಣುಚಿಕೊಂಡಿದ್ದಾರೆ. ಹಲವಾರು ಕೊಲೆಗಳ ಬಗ್ಗೆ ವ್ಯಕ್ತಿಯೊಬ್ಬ ಹೇಳಿಕೆ ನೀಡುವುದೇ ಆಗಿದ್ದಲ್ಲಿ ಬೆಂಗಳೂರಿನಲ್ಲಿ ಡಿಜಿಪಿ ಅವರನ್ನೇ ಭೇಟಿಯಾಗಬಹುದಿತ್ತು. ಹೈಕೋರ್ಟ್ ಗಮನಕ್ಕೆ ತಂದು ವಿಶೇಷ ತನಿಖಾ ತಂಡ ನೇಮಿಸಲು ಆಗ್ರಹಿಸುವುದಕ್ಕೂ ಅವಕಾಶಗಳಿವೆ. ಆದರೆ ಬೆಂಗಳೂರಿನ ವಕೀಲರು ಮಂಗಳೂರಿಗೆ ಎಸ್ಪಿ ಇಲ್ಲದ ಸಮಯದಲ್ಲಿ ಬಂದು ತೆರಳಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ, ಪ್ರಶ್ನೆಗಳು ಏಳಲು ಕಾರಣವಾಗಿದೆ.

A delegation of lawyers from Bengaluru visited Mangaluru on Thursday in connection with a viral letter concerning alleged mysterious deaths and crimes in Dharmasthala village. However, due to the absence of the Dakshina Kannada Superintendent of Police (SP) Dr. Arun, the delegation returned without meeting him.