Rahiman Murder, Senior Advocate Balan, Mangalore: ಕಮ್ಯುನಿಟಿ ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದಾರೆ, ರಹಿಮಾನ್ ಕೊಲೆಗೆ ಯುಎಪಿಎ ಹಾಕಬೇಕಿತ್ತು, ಸುಹಾಸ್ ಕೇಸಿಗಲ್ಲ ; ಹಿರಿಯ ವಕೀಲ ಬಾಲನ್ ವಾದ, ಪತ್ರಕರ್ತರ ಪ್ರಶ್ನೆಗಳಿಗೆ ತಬ್ಬಿಬ್ಬು ! 

14-06-25 10:21 pm       Mangalore Correspondent   ಕರಾವಳಿ

ಸುಹಾಸ್ ಹತ್ಯೆ ಕಮ್ಯುನಿಟಿ ಅಟ್ಯಾಕ್ ಅಲ್ಲ, ವೈಯಕ್ತಿಕ ದ್ವೇಷದಿಂದ ಆಗಿರುವುದು. ಕಮ್ಯುನಿಟಿ ಟಾರ್ಗೆಟ್ ಮಾಡಿ ಹತ್ಯೆ ಮಾಡುವುದು ಯುಎಪಿಎ ಕಾಯ್ದೆ ವ್ಯಾಪ್ತಿಗೆ ಬರುತ್ತದೆ.

ಮಂಗಳೂರು, ಜೂನ್ 14 : ಅಬ್ದುಲ್ ರಹಿಮಾನ್ ಕೊಲೆ ಒಂದು ಸಮುದಾಯವನ್ನು ಗುರಿಯಾಗಿಸಿ ನಡೆಸಿದ ಕೊಲೆಯಾಗಿದೆ. ಮೇ 25ರಂದು ಬಜ್ಪೆಯಲ್ಲಿ ಸಭೆ ಮಾಡಿ, ಕೊಲ್ತೇವೆಂದು ಭಾಷಣ ಮಾಡಿದ್ದಾರೆ. ಅದರಲ್ಲಿ ಪಾಲ್ಗೊಂಡವರೇ ಎರಡು ದಿನ ಕಳೆಯವಷ್ಟರಲ್ಲಿ ಕೊಲೆ ಮಾಡಿದ್ದಾರೆ. ಕುಡುಪು ಅಶ್ರಫ್ ಕೊಲೆಯೂ ಅದೇ ರೀತಿ ಕೊಲೆ ಮಾಡಿದ್ದಾರೆ. ಆದರೆ ಸುಹಾಸ್ ಹತ್ಯೆ ಕಮ್ಯುನಿಟಿ ಅಟ್ಯಾಕ್ ಅಲ್ಲ, ವೈಯಕ್ತಿಕ ದ್ವೇಷದಿಂದ ಆಗಿರುವುದು. ಕಮ್ಯುನಿಟಿ ಟಾರ್ಗೆಟ್ ಮಾಡಿ ಹತ್ಯೆ ಮಾಡುವುದು ಯುಎಪಿಎ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಆದರೆ ಇಲ್ಲಿ ಯಾಕೆ ಆ ಕಾಯ್ದೆ ಹಾಕಿಲ್ಲ ಎಂದು ಗೊತ್ತಾಗಲ್ಲ ಎಂದು ಹಿರಿಯ ಹೈಕೋರ್ಟ್ ವಕೀಲ ಎಸ್. ಬಾಲನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಆಲ್ ಇಂಡಿಯಾ ಪ್ರಾಕ್ಟಿಸಿಂಗ್ ಲಾಯರ್ ಅಸೋಸಿಯೇಷನ್ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಬಾಲನ್ ಮಾತನಾಡಿದ್ದು ಸುಹಾಸ್ ಹತ್ಯೆ ಪ್ರಕರಣವನ್ನು ಎನ್ಐಎ ಕೊಟ್ಟಿದ್ದಾರೆ, ಗುಂಪು ಹತ್ಯೆ ಮತ್ತು  ಸಮುದಾಯ ಟಾರ್ಗೆಟ್ ಮಾಡಿದ ಕೊಲೆ ಪ್ರಕರಣವನ್ನು ಯಾಕೆ ಕೊಟ್ಟಿಲ್ಲ. ಎಲ್ಲಿ ಯುಎಪಿಎ ಏಕ್ಟ್ ಹಾಕಬೇಕಿತ್ತೋ ಅಲ್ಲಿ ಮಾಡಿಲ್ಲ. ಇಲ್ಲಿ ಸಂವಿಧಾನದ ಆರ್ಟಿಕಲ್ 15, 16 ಕಲಂ ಉಲ್ಲಂಘನೆಯಾಗಿದೆ. ಸುಹಾಸ್ ಕೇಸನ್ನು ಎನ್ಐಎ ಹಾಕಿದ್ದು ರಾಜಕೀಯ ಅಧಿಕಾರದ ದುರುಪಯೋಗ ಎಂದು ಆರೋಪಿಸಿದರು. 

ದ್ವೇಷ ಭಾಷಣಕ್ಕೆ ಹಳೇ ಕಾನೂನು ಇದೆ. ಮೂರರಿಂದ ಏಳು ವರ್ಷ ಶಿಕ್ಷೆಯಾಗಬಲ್ಲ ಇಂತಹ ಕೇಸುಗಳಿಗೆ ಜಾಮೀನು ಸಿಗುತ್ತದೆ. ಇದರಿಂದ ಹೇಟ್ ಸ್ಪೀಚ್ ಕಂಟ್ರೋಲ್ ಮಾಡಕ್ಕಾಗಲ್ಲ‌. ಆದರೆ ಇದಕ್ಕೆ ರಾಜ್ಯದಲ್ಲಿ ಕಾನೂನು ಗಟ್ಟಿಗೊಳಿಸಬಹುದು ಎಂದು ಹೇಳಿದ ಬಾಲನ್, ಇಲ್ಲಿ ಒಂದು ಧರ್ಮದ ಮೇಲೆ ಮಾತ್ರ ಕಾನೂನು ಪ್ರಯೋಗ ಮಾಡ್ತಿದಾರೆ. ಈಗ ಏಂಟಿ ಕಮ್ಯುನಲ್ ಫೋರ್ಸ್ ಅಂತ ತಂದಿದ್ದಾರೆ. ಇದಕ್ಕೆ ಕಾನೂನಿನ ಪವರ್ ಇಲ್ಲ. ಬರೀ ಹಲ್ಲಿಲ್ಲಿದ ಹಾವು ಟಾಸ್ಕ್ ಫೋರ್ಸ್ ಎಂದು ಟೀಕಿಸಿದರು. 

ಮಂಗಳೂರಿನಲ್ಲಿ ಕಾನೂನು ಮಾಡೋರೇ ಬ್ರೇಕ್ ಮಾಡ್ತಿದಾರೆ‌. ಒಂದೇ ರಾತ್ರಿ ನಾಲ್ಕು ಜನರಿಗೆ ಚಾಕು ಹಾಕಿದ್ದು ಸೀರಿಯಸ್ ಅಪರಾಧ‌ ಅಂತ ಇಲ್ಲಿ ಅನಿಸೋದಿಲ್ಲ. ಪೊಲೀಸರು, ಜಿಲ್ಲಾಡಳಿತ ಈ ಬಗ್ಗೆ ಯಾಕೆ ಕೇರ್ ತಗೊಂಡಿಲ್ಲ. ಇಲ್ಲಿನ ಈ ಸ್ಥಿತಿಯಿಂದಾಗಿ ಅಲ್ಪಸಂಖ್ಯಾತರು ಭಯಕ್ಕೆ ಒಳಗಾಗಿದ್ದಾರೆ, ಅನ್ ಸೇಫ್ ಅನ್ನುವ ವಾತಾವರಣದಲ್ಲಿ ಹೇಗೆ ಕೆಲಸ ಮಾಡಕ್ಕಾಗುತ್ತೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಟಿ ಆರಂಭದಲ್ಲಿ ಬಾಲನ್ ಅವರು, ನಾವು ಸತ್ಯಶೋಧನೆ ಮಾಡಿ ವರದಿಯನ್ನು ಸರ್ಕಾರಕ್ಕೆ ಕೊಡುತ್ತೇವೆ ಎಂದು ಹೇಳಿದ ವಿಚಾರದಲ್ಲಿ ಪತ್ರಕರ್ತರು ಪ್ರಶ್ನೆ ಮಾಡಿದರು. 

ನೀವು ಎಲ್ಲ ಕಡೆಗೂ ಹೋಗಿದ್ದೀರಾ ಎಂಬ ಪ್ರಶ್ನೆಗೆ, ರಹಿಮಾನ್ ಮನೆಗೆ ಹೋಗಿದ್ದೇವೆ, ಪತ್ರಿಕಾ ವರದಿಗಳನ್ನು ನೋಡಿದ್ದೇವೆ, ಬೇರೆ ಕಡೆ ಹೋಗಿಲ್ಲ. ಸುಹಾಸ್ ಮನೆಗೆ ಕರೆದಿಲ್ಲ. ಅದರ ಬಗ್ಗೆ ಪ್ರಶ್ನೆ ಮಾಡಬೇಡಿ ಎಂದರು. ನೀವು ಪತ್ರಿಕಾ ವರದಿ ಆಧರಿಸಿ ವರದಿ ರೆಡಿ ಮಾಡುತ್ತೀರಾ ಎಂದು ಪ್ರಶ್ನೆ ಹಾಕಲಾಯಿತು. ಸ್ವತಃ ಹೋಗದೆ ನೀವು ಹೇಗೆ ವರದಿ ರೆಡಿ ಮಾಡುತ್ತೀರಿ ಎಂದು ತರಾಟೆಗೆತ್ತಿಕೊಂಡರು. ರಹಿಮಾನ್ ಕೊಲೆ ಕೇಸಿಗೆ ಯುಎಪಿಎ ಹಾಕಬೇಕೆಂದು ಹೈಕೋರ್ಟಿಗೆ ಪಿಐಎಲ್ ಹಾಕ್ತೀರಾ ಎಂದು ಕೇಳಿದ ಪ್ರಶ್ನೆಗೆ, ಇಲ್ಲ.. ನಾವು ಈ ಬಗ್ಗೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು. ನಿಷೇಧಿತ ಪಿಎಫ್ಐ ಸಂಪರ್ಕ ಇರುವುದರಿಂದ ಸುಹಾಸ್ ಹತ್ಯೆ ಎನ್ಐಎ ಕೊಟ್ಟಿದ್ದಾರೆಂಬ ವಿಚಾರದಲ್ಲಿ ಕೇಳಿದ್ದಕ್ಕೆ, ಪಿಎಫ್ಐ ಟೆರರಿಸ್ಟ್ ಆರ್ಗನೈಸೇಶನ್ ಅಲ್ಲ. 40 ಟೆರರಿಸ್ಟ್ ಆರ್ಗನೈಸೇಶನ್ ಇದೆ. ಆ ಪಟ್ಟಿಯಲ್ಲಿ ಪಿಎಫ್ಐ ಇಲ್ಲ. ಕಾನೂನು ವಿರೋಧಿ ಚಟುವಟಿಕೆ ಅಂತ ನಿಷೇಧಿಸಲಾಗಿತ್ತು. ಅದರ ನೆಪದಲ್ಲಿ ಎನ್ಐಎ ತನಿಖೆ ಮಾಡಕ್ಕೆ ಬರಲ್ಲ ಎಂದು ವಾದಿಸಿದರು. ಈ ವಿಚಾರದಲ್ಲಿ ಪತ್ರಕರ್ತರು ಮರು ಪ್ರಶ್ನೆ ಹಾಕಿದಾಗ, ಉತ್ತರಿಸಲಾಗದೆ ನುಣುಚಿಕೊಂಡರು. ಕೊನೆಗೆ, ನಾವು ವರದಿ ರೆಡಿ ಮಾಡಿ ನಿಮಗೂ ಕೊಡುತ್ತೇವೆ, ಆ ಮೇಲೆ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿ ಗೋಷ್ಠಿಯನ್ನು ಮುಗಿಸಿದರು. 

ವಕೀಲರ ಘಟಕದ ಮಜೀದ್ ಖಾನ್, ಅಂಗಡಿ ಚಂದ್ರು, ಜಯರಾಂ ಹಾಸನ್, ವಸೀಂ ಶರೀಫ್, ಅಸ್ಮಾ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು. ‌

Senior High Court advocate S. Balan has strongly criticized the alleged selective application of the Unlawful Activities (Prevention) Act (UAPA) in recent murder cases in coastal Karnataka. Speaking at a press conference organized by the All India Practicing Lawyers’ Association, Balan argued that the murder of Abdul Rahiman was clearly a targeted community attack and warranted action under UAPA, unlike the recent murder of Suhas, which he claimed stemmed from personal enmity.