Minister Dinesh Gundurao, Mangalore News: ಸುದ್ದಿಗೋಷ್ಟಿ ನಡುವಲ್ಲೇ ಮುಸ್ಲಿಂ ಮುಖಂಡನ ಆಕ್ಷೇಪ ; ಏಯ್ ಹೊರಗೆ ಹಾಕ್ರೀ ಎಂದು ಉಸ್ತುವಾರಿ ಗರಂ, ನನಗೆ ಯಾವ ರಾಜಿನಾಮೆ ವಿಚಾರವೂ ಬರಲ್ಲ, ಎಲ್ಲ ಪಕ್ಷ, ಧರ್ಮದವರೂ ಒಂದೇ.. 

31-05-25 01:40 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಕ್ಕೆ ಎರಡು ದಿನ ಅಂತರದಲ್ಲಿ 7 ಜನ ಬಲಿಯಾಗಿದ್ದಾರೆ.

ಮಂಗಳೂರು, ಮೇ.31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟಕ್ಕೆ ಎರಡು ದಿನ ಅಂತರದಲ್ಲಿ 7 ಜನ ಬಲಿಯಾಗಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿಗೆ ಆಗಮಿಸಿದ್ದು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ. ಈ ವೇಳೆ, ಮುಸ್ಲಿಂ ಮುಖಂಡರು ಸಚಿವರನ್ನು ಭೇಟಿಯಾಗಿ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ನೀಡಿದ್ದಾರೆ. ಉಳ್ಳಾಲದ ಮುಸ್ಲಿಂ ಮುಖಂಡನೊಬ್ಬ ಸಚಿವ ಗುಂಡೂರಾವ್ ಸುದ್ದಿಗೋಷ್ಟಿ ನಡೆಸುತ್ತಿದ್ದಾಗಲೇ ಆಕ್ಷೇಪ ತೆಗೆದು, ಸಚಿವರಿಂದ ಬೈಸಿಕೊಂಡ ಪ್ರಸಂಗವೂ ನಡೆಯಿತು.‌

ಸಚಿವರು ಸುದ್ದಿಗೋಷ್ಠಿ ನಡೆಸುತ್ತಿದ್ದಾಗಲೇ ಉಳ್ಳಾಲದ ಕಾಂಗ್ರೆಸ್ ಮುಸ್ಲಿಂ ಮುಖಂಡ ಉಸ್ಮಾನ್ ಕಲ್ಲಾಪು ಎಂಬವರು ನಡುವೆ ಬಾಯಿ ಹಾಕಿ, ಪ್ರಚೋದನಕಾರಿ ಭಾಷಣಗಳ ಬಗ್ಗೆ  ಕ್ರಮ ಆಗಬೇಕು. ಮೊನ್ನೆಯ ಕೊಲೆ ಪ್ರಚೋದನಕಾರಿ ಭಾಷಣದಿಂದಲೇ ಆಗಿದೆ ಎಂದು ಹೇಳಿ ಆಕ್ಷೇಪ ತೆಗೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವ ಗುಂಡೂರಾವ್, ಏಯ್ ಸುಮ್ನಿರಪ್ಪಾ.. ಇದು ಸುದ್ದಿಗೋಷ್ಟಿ. ಕಾರ್ಯಕರ್ತರ ಸಭೆಯಲ್ಲ. ಏಯ್ ಹೊರಗೆ ಹಾಕ್ರಿ ಅವನನ್ನು ಎಂದು ತನ್ನ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ‌ಬಳಿಕ ಐವಾನ್ ಡಿಸೋಜ, ಉಸ್ಮಾನ್ ಕಲ್ಲಾಪು ಅವರನ್ನು ಸಮಾಧಾನಿಸಿ ಬಾಯಿ ಮುಚ್ಚಿಸಿದ್ದಾರೆ. ಆದರೆ ಉಸ್ಮಾನ್ ಕಲ್ಲಾಪು ಅವರು ಸುದ್ದಿಗೋಷ್ಟಿ ಮುಗಿದ ನಂತರವೂ ಹೊರಗೆ ಬಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು, ಈ ಹೇಳಿಕೆಯಿಂದ ಹಿಂಜರಿಯಲ್ಲ ಎಂದು ಹೇಳಿದ್ದಾರೆ.

 

ಸಚಿವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತ, ಬಜಪೆ ಚಲೋದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿ. ಕೊಲ್ಲಬೇಕು ಎಂದು ಸಿನಿಮಾದ ಶೈಲಿಯಲ್ಲಿ ಹೇಳಿಕೆ ನೀಡುತ್ತಾರೆ, ಅಂಥವರನ್ನು ಬಂಧಿಸಿ. ಯಾರ ಜೀವ ಹೋಗಬಾರದು ಜಿಲ್ಲೆ ಶಾಂತಿಯುತವಾಗಿ ಇರಬೇಕು ಎಂಬ ಉದ್ದೇಶ ನಮ್ಮದು. ನಾವು ಕಾಂಗ್ರೆಸ್ ನಾಯಕರೇ, ನಮ್ಮದೇ ಸರ್ಕಾರ ಇದೆ,  ಪೋಲಿಸ್ ಇಲಾಖೆಗೆ ಅದೇಶ ಕೊಡಿ ತಪ್ಪು ಮಾಡಿದವರನ್ನು ಬಂಧಿಸಿ. ಹೊಸ ಅಧಿಕಾರಿಗಳು ಬಂದಿದ್ದಾರೆ, ಅವರ ಮೇಲೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ‌

ಸುದ್ದಿಗೋಷ್ಟಿ ವೇಳೆ ಅಬ್ದುಲ್ ರೆಹಮಾನ್ ಹತ್ಯೆ ಖಂಡಿಸಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಸ್ಲಿಂ ಮುಖಂಡರು ರಾಜೀನಾಮೆ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಸ್ತುವಾರಿ ಸಚಿವ, ನನ್ನ ಬಳಿ ಯಾವ ರಾಜೀನಾಮೆಯ ವಿಚಾರವೂ ಬರಲಿಲ್ಲ. ಪಕ್ಷಕ್ಕೆ ರಾಜೀನಾಮೆ ಕೊಡೋದು ಬಿಡೋದರ ಬಗ್ಗೆ ನಾನು ಮಾತನಾಡಲ್ಲ. ನಾನು ಸರಕಾರದ ಪ್ರತಿನಿಧಿಯಾಗಿ ಇಲ್ಲಿ ಬಂದಿದ್ದೇನೆ.‌ ರಾಜೀನಾಮೆ ವಿಚಾರ ನನಗೆ ನೇರವಾಗಿ ಬರೋದಿಲ್ಲ. ಸರಕಾರ ಎಂದ ಮೇಲೆ ನಮಗೆ ಎಲ್ಲ ಧರ್ಮ, ಪಕ್ಷ ಸಂಘಟನೆಯವರೂ ಒಂದೇ. ಶಾಂತಿ ಸುವ್ಯವಸ್ಥೆಯನ್ನ  ಕಾಪಾಡೋದು ನನ್ನ ಜವಾಬ್ದಾರಿ. ಗಲಭೆ, ಹತ್ಯೆಗಳನ್ನ ನಿಲ್ಲಿಸೋದು ನನ್ನ ಮುಖ್ಯ ಜವಾಬ್ದಾರಿ. 

ಘಟನೆ ನಡೆದಾಗ ನಾವು ಯಾವಾಗ ಬರಬೇಕು ಬರಬಾರದು ಅನ್ನೋದನ್ನ ಸಮಯ ನೋಡಿ ತೀರ್ಮಾನ ಮಾಡುತ್ತೇವೆ. ಕೆಲವರದ್ದು ಅವರರವರ ಧರ್ಮದವರು ತೀರಿ ಹೋದಾಗ ಮಾತ್ರ ಆಕ್ರೋಶ. ನನಗೆ ಯಾವ ಧರ್ಮದವರೂ ತೀರಿ ಹೋದರೂ ಆಕ್ರೋಶ ಬರುತ್ತೆ. ನನಗೆ ಎಲ್ಲರ ಸಾವು ಒಂದೇ ಸಾವು. ಕೆಲವರು ಈ ಸಾವುಗಳನ್ನು ರಾಜಕೀಯ ಬಂಡವಾಳ ಮಾಡಿಕೊಳ್ಳುತ್ತಾರೆ. ನಾನು ಸರಕಾರದ ಪ್ರತಿನಿಧಿ.. ಶಾಂತಿ ಕಾಪಾಡೋದು ನನ್ನ ಜವಾಬ್ದಾರಿ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. 

ಮಳೆಹಾನಿ ಕುರಿತು ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು ಉಳ್ಳಾಲ ಕ್ಷೇತ್ರ ಹಾಗು ಮಂಗಳೂರಿನಲ್ಲಿ ಹೆಚ್ಚು ಮಳೆ ಹಾನಿಯಾಗಿದೆ. ಮೊಂಟೆಪದವಿನಲ್ಲಿ ಒಂದೇ ಕುಟುಂಬದ ಮೂವರು ತೀರಿ ಹೋಗಿದ್ದಾರೆ. ಬದುಕುಳಿದ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಗಾಯಗೊಂಡ ಮಹಿಳೆ ಪರಿಸ್ಥಿತಿ ಗಂಭೀರವಾಗಿದೆ. ಇದು ಅತೀ ದೊಡ್ಡ ಕೆಟ್ಟ ದುರ್ಘಟನೆ‌. ಕಾಂಪೌಂಡ್ ಕುಸಿದು ಬಿದ್ದು ಮೃತಪಟ್ಟ ಬಾಲಕಿ ನಯೀಮ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಮೃತಪಟ್ಟ ಕುಟುಂಬದವರಿಗೆ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ. ಮಳೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಈ ಹಿಂದೆಯೇ ಹೇಳಿದ್ದೇವೆ. ಜಮೀನು, ಭೂಮಿ ಅಭಿವೃದ್ಧಿ ಮಾಡುವಾಗ ಎಚ್ಚರಿಕೆ ವಹಿಸಬೇಕು. ಎಚ್ಚರಿಕೆ ಇಲ್ಲದ ಕಾರಣ ಈ ರೀತಿಯಾಗಿದೆ ಎಂದರು.

Muslim Leader Raises Objection During Press Meet in Mangalore, Minister Dinesh Gundurao Reacts Sharply, says  Throw Him Out.