Mangalore Kudupu Murder Case, Police Suspended: ಗುಂಪು ಹತ್ಯೆ ಪ್ರಕರಣ ; ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಸೇರಿ ಮೂವರ ತಲೆದಂಡ, ಉಸ್ತುವಾರಿ ಸಚಿವರ ಸೂಚನೆ ಪಾಲಿಸಿದ ಕಮಿಷನರ್ ! 

01-05-25 12:23 pm       Mangalore Correspondent   ಕರಾವಳಿ

ಕುಡುಪು ಗುಂಪು ಹತ್ಯೆ ಪ್ರಕರಣ ಸಂಬಂಧಿಸಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ್ದಕ್ಕಾಗಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. 

ಮಂಗಳೂರು, ಮೇ 1 : ಕುಡುಪು ಗುಂಪು ಹತ್ಯೆ ಪ್ರಕರಣ ಸಂಬಂಧಿಸಿ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯ ತೋರಿದ್ದಕ್ಕಾಗಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಸೇರಿ ಮೂವರು ಪೊಲೀಸರನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. 

ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಶಿವಕುಮಾರ್, ಹೆಡ್ ಕಾನ್‌ಸ್ಟೇಬಲ್ ಚಂದ್ರ ಪಿ. ಮತ್ತು ಕಾನ್‌ಸ್ಟೇಬಲ್ ಎಲ್ಲಾಲಿಂಗ ಅಮಾನತಾದವರು. ಎಪ್ರಿಲ್ 27ರಂದು ಅಪರಾಹ್ನ ಕುಡುಪು ದೇವಸ್ಥಾನ ಬಳಿಯ ಕುಡುಪು ಕಟ್ಟೆ ಎಂಬಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕೇರಳ ಮೂಲದ ಮುಸ್ಲಿಂ ಯುವಕನೊಬ್ಬ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ ಅಲ್ಲಿ ಸೇರಿದ್ದ ಯುವಕರು ಥಳಿಸಿದ್ದರು. ಕಾಲಿನಲ್ಲಿ ತುಳಿದು ಕೈಯಿಂದ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದರಿಂದ ಯುವಕ ಸಾವಿಗೀಡಾಗಿದ್ದ.  

ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದರೂ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕಾಗಿ ಥಳಿಸಿ ಕೊಲೆ ಮಾಡಿದ್ದಾರೆಂಬುದು ದೊಡ್ಡ ಸುದ್ದಿಯಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರು ಮಾಹಿತಿ ನೀಡದೆ ಯುಡಿಆರ್ ಪ್ರಕರಣವೆಂದು ಕೇಸು ದಾಖಲಿಸಿದ್ದರು. ಆದರೆ ವಿಷಯ ಮಾಧ್ಯಮದಲ್ಲಿ ಬಂದು ಗುಂಪು ಹಲ್ಲೆಯಿಂದ ಘಟನೆ ಆಗಿದೆಯೆಂಬ ವಿಚಾರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಗಂಭೀರ ಘಟನೆಯ ಬಗ್ಗೆ ನಿರ್ಲಕ್ಷಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು.‌

ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದ ಗ್ರಾಮಾಂತರ ಪೊಲೀಸರು ಬಳಿಕ ವಿವಾದ ತೀವ್ರಗೊಂಡ ಬಳಿಕ ಗುಂಪು ಹಲ್ಲೆಯಿಂದಾದ ಕೊಲೆ ಪ್ರಕರಣವೆಂದು ಎಫ್ ಐಆರ್ ದಾಖಲಿಸಿದ್ದರು. ಇದರ ಬೆನ್ನಲ್ಲೇ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವಕುಮಾ‌ರ್ ಅಮಾನತ್ತು ಮಾಡುವಂತೆ ಗೃಹ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದರು. ಅಲ್ಲದೆ, ಮಂಗಳೂರಿನ ಕಾಂಗ್ರೆಸ್ ನಾಯಕರು ಕೂಡ ಇದೇ ರೀತಿಯ ಆಗ್ರಹ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು ಘಟನೆ ಬಗ್ಗೆ ಅಪರಾಧ ವಿಭಾಗದ ಡಿಸಿಪಿ ಮತ್ತು ಎಸಿಪಿ ಧನ್ಯಾ ನಾಯಕ್ ಅವರಿಗೆ ವರದಿ ನೀಡುವಂತೆ ಕಮಿಷನರ್ ಸೂಚಿಸಿದ್ದರು.‌

ಎಸಿಪಿ ಧನ್ಯಾ ನಾಯಕ್, ಗ್ರಾಮಾಂತರ ಠಾಣೆಯ ಪೊಲೀಸರನ್ನು ವಿಚಾರಣೆಗೆ ಒಳಪಡಿಸಿದ್ದು ಕಮಿಷನರ್ ಅವರಿಗೆ ವರದಿ ನೀಡಿದ್ದಾರೆ. ಅಂದು ಕಾನ್ಸ್ ಟೇಬಲ್ ಎಲ್ಲಾಲಿಂಗ ಬೀಟ್ ಕರ್ತವ್ಯದಲ್ಲಿದ್ದರೆ, ಹೆಡ್ ಕಾನ್ಸ್ ಟೇಬಲ್ ಚಂದ್ರ ಪಿ. ಅವರು ಎಸ್ ಬಿ ಕರ್ತವ್ಯದಲ್ಲಿದ್ದರು. ಕ್ರಿಕೆಟ್ ಆಟದ ನಡೆಯುತ್ತಿದ್ದ ಜಾಗದಲ್ಲಿ ಬೀಟ್ ಕರ್ತವ್ಯದಲ್ಲಿದ್ದ ಎಲ್ಲಾಲಿಂಗ ತನ್ನ ಕರ್ತವ್ಯ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಇದಲ್ಲದೆ, ಚಂದ್ರ ಪಿ. ಅವರು ತನ್ನ ಇತರ ಸಿಬಂದಿ ಮೂಲಕ ಮಾಹಿತಿ ತಿಳಿದರೂ ಮೇಲಧಿಕಾರಿಗಳಿಗೆ ತಿಳಿಸದೆ ಲೋಪ ಎಸಗಿದ್ದರು. ಇನ್ಸ್ ಪೆಕ್ಟರ್ ಶಿವಕುಮಾರ್ ಕೂಡ ಸಂಜೆಯ ವೇಳೆಗೆ ಶವ ಪತ್ತೆಯಾಗಿದ್ದನ್ನು ತಿಳಿದು ಕೊಲೆಯೆಂದು ಗೊತ್ತಾಗಿದ್ದರೂ ಕ್ರಿಕೆಟ್ ಆಟದಲ್ಲಿ ಪಾಲ್ಗೊಂಡಿದ್ದವರನ್ನೇ ಸಾಕ್ಷಿಯಾಗಿಸಿ ಅಸಹಜ ಸಾವೆಂದು ಕೇಸು ದಾಖಲಿಸಿದ್ದರು. ಯಾರೋ ಉತ್ತರ ಭಾರತ ಮೂಲದವನು, ಅವನ ಪರವಾಗಿ ಯಾರೂ ಬರಲು ಸಾಧ್ಯವಿಲ್ಲ ಎಂದು ನಿರ್ಲಕ್ಷ್ಯ ವಹಿಸಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು. ಈ ಬಗ್ಗೆ ಎಸಿಪಿ ವರದಿ ನೀಡಿರುವುದನ್ನು ಪರಿಗಣಿಸಿ ಪೊಲೀಸ್ ಕಮಿಷನರ್ ಮೂವರನ್ನೂ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

In a significant development in the Kudupu murder case, Rural Police Inspector Shivaprakash and two other personnel have been suspended. The action comes after Incharge Minister Dinesh Gundu Rao directed the Mangalore Police Commissioner to take immediate disciplinary measures. The suspensions were ordered amid growing public outrage and allegations of negligence in handling the initial investigation.