Mangalore CM Medal, Anupam Agrawal, Police Mahesh Prasad: ಕೋಟೆಕಾರು ಬ್ಯಾಂಕ್ ದರೋಡೆ ಭೇದಿಸಿದ ಪೊಲೀಸ್ ತಂಡಕ್ಕೆ ಸಿಎಂ ಪದಕ ಘೋಷಣೆ ; ಕಮಿಷನರ್ ಅಗರ್ವಾಲ್, ಎಸಿಪಿ ಧನ್ಯಾ ನಾಯಕ್, ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಉಳ್ಳಾಲದಿಂದ ಹೊರಬಿದ್ದ ಬಾಲಕೃಷ್ಣಗೂ ಪದಕ ಗೌರವ

29-03-25 11:04 pm       Mangalore Correspondent   ಕರಾವಳಿ

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವನ್ನು ಮೂರೇ ದಿನದಲ್ಲಿ ಭೇದಿಸಿದ್ದಲ್ಲದೆ, ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ಅಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದ ಮಂಗಳೂರು ಪೊಲೀಸರ ತಂಡಕ್ಕೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.

ಮಂಗಳೂರು, ಮಾ.29 : ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವನ್ನು ಮೂರೇ ದಿನದಲ್ಲಿ ಭೇದಿಸಿದ್ದಲ್ಲದೆ, ಒಂದೇ ವಾರದಲ್ಲಿ ತಮಿಳುನಾಡಿನಲ್ಲಿ ಅಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದ ಮಂಗಳೂರು ಪೊಲೀಸರ ತಂಡಕ್ಕೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ. ಪ್ರಕರಣದ ಬೆನ್ನುಬಿದ್ದು ಹಗಲಿರುಳು ದುಡಿದಿದ್ದ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್, ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಸೇರಿದಂತೆ ಇಡೀ ತಂಡಕ್ಕೆ ಸಿಎಂ ಪದಕದ ಗೌರವ ನೀಡಲಾಗಿದೆ.

ಅಲ್ಲದೆ, ಇಡೀ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರಿಗೂ ಹೂವಿನ ಜೊತೆಗೆ ದಾರಕ್ಕೂ ಗೌರವ ಎನ್ನುವಂತೆ ಸಿಎಂ ಪದಕ ಘೋಷಣೆ ಮಾಡಲಾಗಿದೆ. ವಿಚಿತ್ರ ಎಂದರೆ, ದರೋಡೆ ಪ್ರಕರಣದಲ್ಲಿ ಸಿಎಂ ಪದಕಕ್ಕಾಗಿ ಸ್ಪೀಕರ್ ಯುಟಿ ಖಾದರ್ ಬೆಂಬಲಿಗರಿಗೆ ದುಂಬಾಲು ಬಿದ್ದು, ಮರಳು ಮಾಫಿಯಾ ಸೇರಿದಂತೆ ದೋ ನಂಬರ್ ಕುಳಗಳ ಜೊತೆಗೆ ಶಾಮೀಲಾದ ಆರೋಪದಲ್ಲಿ ಆಡಳಿತ ಪಕ್ಷದ ನಾಯಕರಿಂದಲೇ ಕೆಂಗಣ್ಣಿಗೆ ಗುರಿಯಾಗಿ ಉಳ್ಳಾಲ ಇನ್ಸ್ ಪೆಕ್ಟರ್ ಹುದ್ದೆಯಿಂದ ತಿಂಗಳ ಹಿಂದೆ ಹೊರದಬ್ಬಲ್ಪಟ್ಟಿದ್ದ ಬಾಲಕೃಷ್ಣ ಎಚ್.ಎನ್ ಅವರಿಗೂ ಸಿಎಂ ಪದಕ ನೀಡಲಾಗಿದೆ. ಕೋಟೆಕಾರು ದರೋಡೆ ಪ್ರಕರಣ ಉಳ್ಳಾಲ ಠಾಣೆಯಲ್ಲಿ ದಾಖಲಾಗಿದ್ದರಿಂದ ತನಿಖಾಧಿಕಾರಿ ಪಟ್ಟ ಬಾಲಕೃಷ್ಣ ಹೆಗಲೇರಿತ್ತು. ಆ ಕಾರಣಕ್ಕೆ ಇವರ ಹೆಸರನ್ನೂ ಮಂಗಳೂರು ಕಮಿಷನರ್ ಶಿಫಾರಸು ಮಾಡಿದ್ದಿರಬೇಕು. ಆನಂತರ, ಮಾತ್ರ ಪ್ರಕರಣದ ತನಿಖೆಯ ಹೊಣೆಯನ್ನು ಕಂಕನಾಡಿ ನಗರ ಠಾಣೆ ಇನ್ಸ್ ಪೆಕ್ಟರ್ ನಾಗರಾಜ್ ಮೇಲೆ ವಹಿಸಲಾಗಿತ್ತು.

ಉಳಿದಂತೆ, ಸಿಸಿಬಿಯ ನುರಿತ ತಂಡದ ಜೊತೆಗೆ ತಮಿಳುನಾಡಿಗೆ ತೆರಳಿ ದರೋಡೆ ತಂಡದ ಬೆನ್ನುಬಿದ್ದು ಅರೆಸ್ಟ್ ಮಾಡಿದ್ದ ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಅವರಿಗೆ ಅರ್ಹವಾಗಿಯೇ ಸಿಎಂ ಮೆಡಲ್ ಸಿಕ್ಕಿದೆ. ಇವರ ಒಟ್ಟು ತಂಡವನ್ನು ಲೀಡ್ ಮಾಡಿದ್ದ ಧನ್ಯಾ ನಾಯಕ್ ಅವರಿಗೂ ಸಿಎಂ ಪದಕದ ಗೌರವ ಸಿಕ್ಕಿದೆ. ಇದರೊಂದಿಗೆ, ದರೋಡೆ ತಂಡದಲ್ಲಿ ಕೆಲಸ ಮಾಡಿದ್ದ ಸುರತ್ಕಲ್ ಎಸ್ಐ ರಾಘವೇಂದ್ರ ನಾಯ್ಕ, ಉಳ್ಳಾಲ ಪಿಎಸ್ಐ ಸಂತೋಷ್ ಕುಮಾರ್, ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಗಳಾದ ಆಂಜನಪ್ಪ, ಅಣ್ಣಪ್ಪ, ಉಮೇಶ್ ಕುಮಾರ್, ಭೀಮಪ್ಪ ಉಪ್ಪಾರ, ಸುಧೀರ್ ಕುಮಾರ್, ಸಂತೋಷ್ ಕುಮಾರ್, ದಾಮೋದರ ಕೆ., ವಿಜಯ ಶೆಟ್ಟಿ, ಶೀನಪ್ಪ, ಕಂಕನಾಡಿ ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ರೆಜಿ ವಿ.ಎಂ, ಪೇದೆಗಳಾದ ಶ್ರೀಧರ ವಿ., ಪ್ರಕಾಶ್ ಎಸ್. ಸಪ್ತಗಿಹಳ್ಳಿ, ಅಭಿಷೇಕ್ ಎ.ಆರ್ ಅವರಿಗೂ ಸಿಎಂ ಪದಕದ ಘೋಷಣೆ ಮಾಡಲಾಗಿದೆ.  

ಇತ್ತೀಚೆಗೆ ದಿಢೀರ್ ನಾಪತ್ತೆಯಾಗಿ ಇಡೀ ಕರಾವಳಿಯನ್ನು ಕುತೂಹಲಕ್ಕೀಡು ಮಾಡಿದ್ದ ದಿಗಂತ್ ಪ್ರಕರಣವನ್ನು ಪತ್ತೆ ಮಾಡಿದ್ದಕ್ಕಾಗಿ ಬಂಟ್ವಾಳ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ. ಅವರನ್ನೂ ಸಿಎಂ ಪದಕಕ್ಕೆ ಪರಿಗಣಿಸಲಾಗಿದೆ. ಸಿಇಎನ್ ಠಾಣೆಯಲ್ಲಿ ಸೈಬರ್ ಅಪರಾಧಗಳನ್ನು ಪತ್ತೆಹಚ್ಚಲು ನೆರವಾಗಿದ್ದ ಪಿಎಸ್ಐ ಗುರಪ್ಪ ಕಾಂತಿ ಅವರಿಗೂ ಸಿಎಂ ಪದಕ ಘೋಷಿಸಲಾಗಿದೆ. ಇದಲ್ಲದೆ, ಮಂಗಳೂರು ಸಿಸಿಬಿ ಘಟಕದ ಎಆರ್ ಎಸ್ಐ ರಿತೇಶ್ ಅವರಿಗೂ ಸಿಎಂ ಪದಕ ನೀಡಲಾಗಿದೆ.

ಮೂರು ತಿಂಗಳ ಹಿಂದೆ ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಮತ್ತು ನಕ್ಸಲರ ಶರಣಾಗತಿಗಾಗಿ ಶ್ರಮಿಸಿದ್ದ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರಿಗೂ ಸಿಎಂ ಪದಕ ಘೋಷಿಸಲಾಗಿದೆ. ಒಟ್ಟು 197 ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಯನ್ನು ಸಿಎಂ ಪದಕಕ್ಕೆ ಆಯ್ಕೆ ಮಾಡಲಾಗಿದ್ದು, ಸರಕಾರದಿಂದ ಅಧಿಕೃತ ಲಿಸ್ಟ್ ಹೊರಬಿದ್ದಿದೆ.

Mangalor police commissioner Anupam Agrawal, Mahesh Prasad, Dhnaya Nayak among 197 officers to receive Chief Minister Medal.  The Karnataka government has announced the recipients of the prestigious Chief Minister’s Medal for the year 2024, recognizing 197 police officers for their exceptional service. Among the awardees, Mangaluru police commissioner Anupam Agrawal has been selected for the honour.