Mangalore Sanur-Bikarnakatte highway: ಸಾಣೂರು- ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿ ; ಮತ್ತೆ ಧರಣಿಗೆ ಮುಂದಾದ ಭೂಮಾಲೀಕರು, ಸಂಸದರ ನಿರ್ಲಕ್ಷ್ಯವೇ ನಮ್ಮ ದುರ್ಗತಿಗೆ ಕಾರಣ, ಅಧಿಕಾರಿಗಳು ನಮ್ಮನ್ನು ವಂಚಿಸುತ್ತಿದ್ದಾರೆ

18-08-23 03:24 pm       Mangalore Correspondent   ಕರಾವಳಿ

ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆ ವರೆಗಿನ ರಸ್ತೆ ಕಾಮಗಾರಿಯನ್ನು ಮಾಡದೆ ತೋರಿಕೆಗಷ್ಟೇ ಮಾಡುತ್ತಿದ್ದಾರೆ. 25 ಶೇಕಡ ಭಾಗದಲ್ಲಿಯೂ ಭೂಸ್ವಾಧೀನ ಆಗಿಲ್ಲ.

ಮಂಗಳೂರು, ಆಗಸ್ಟ್ 18: ರಾಷ್ಟ್ರೀಯ ಹೆದ್ದಾರಿ 169ರ ಕಾರ್ಕಳದ ಸಾಣೂರಿನಿಂದ ಮಂಗಳೂರಿನ ಬಿಕರ್ನಕಟ್ಟೆ ವರೆಗಿನ ರಸ್ತೆ ಕಾಮಗಾರಿಯನ್ನು ಮಾಡದೆ ತೋರಿಕೆಗಷ್ಟೇ ಮಾಡುತ್ತಿದ್ದಾರೆ. 25 ಶೇಕಡ ಭಾಗದಲ್ಲಿಯೂ ಭೂಸ್ವಾಧೀನ ಆಗಿಲ್ಲ. 75 ಶೇಕಡಾ ಭೂಸ್ವಾಧೀನ ಆಗದೇ, ಭೂಮಿ ಕಳಕೊಳ್ಳುವ ರೈತರಿಗೆ ಪರಿಹಾರವನ್ನೂ ನೀಡದೆ ಅಧಿಕಾರಿಗಳು ವಂಚಿಸುತ್ತಿದ್ದಾರೆ. ಇದಕ್ಕೆಲ್ಲ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಅಸಡ್ಡೆ ಮತ್ತು ನಿರ್ಲಕ್ಷ್ಯವೇ ಕಾರಣ. ಸಂಸದನಾಗಿ ಜನರ ಪರ ನಿಲ್ಲದ ಕಾರಣ ನಾವು ಅಧಿಕಾರಿಗಳ ಬಾಗಿಲು ಕಾಯುವ ಸ್ಥಿತಿಯಾಗಿದೆ ಎಂದು ಹೆದ್ದಾರಿಗೆ ಭೂಮಿ ಕಳಕೊಳ್ಳುವ ರೈತರ ಹೋರಾಟ ಸಮಿತಿ ಆರೋಪಿಸಿದೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಭೂಮಾಲೀಕರ ಹೋರಾಟ ಸಮಿತಿ ಅಧ್ಯಕ್ಷೆ ಮರಿಯಮ್ಮ ಥಾಮಸ್, ನಾವು ಕಳೆದ ಮಾರ್ಚ್ ತಿಂಗಳಲ್ಲಿ ನಂತೂರಿನ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದಾಗ, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಅಂದಿನ ಯೋಜನಾ ಪ್ರಾಧಿಕಾರದ ಡೈರೆಕ್ಟರ್ ಲಿಂಗೇಗೌಡ ಹೇಳಿದ್ದರು. ಆನಂತರ, ಬಂದಿದ್ದ ದೊಡ್ಡ ಮನುಷ್ಯನೊಬ್ಬ ಒಂದು ತಿಂಗಳಲ್ಲಿ ಪರಿಹಾರ ತೆಗೆಸಿಕೊಡುತ್ತೇನೆ ಎಂದು ತಿಳಿಸಿದ್ದರು. ಆದರೆ ಈಗ ಐದು ತಿಂಗಳು ಕಳೆದರೂ ಭೂಸ್ವಾಧೀನ ಅಥವಾ ಪರಿಹಾರ ನೀಡುವ ಬಗ್ಗೆ ಯಾವುದೇ ಪ್ರಕ್ರಿಯೆ ಆಗಿಲ್ಲ. ಹೈಕೋರ್ಟಿನಲ್ಲಿ ಜಮೀನು ಕಳಕೊಳ್ಳುವವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆದೇಶ ಆಗಿದ್ದರೂ, ಹೈವೇ ಅಧಿಕಾರಿಗಳು ನಮ್ಮದೇ ಹಣದಲ್ಲಿ ಮತ್ತೆ ನಮ್ಮ ಮೇಲೆ ಕೇಸು ಹಾಕಿದ್ದಾರೆ.

ಇದು ಕೇವಲ ಕಾಲ ತಳ್ಳುವ ಪ್ರಯತ್ನ ಅಷ್ಟೇ. 2020ರ ಮಾರುಕಟ್ಟೆ ದರ ಪ್ರಕಾರ, ಭೂಮಿಗೆ ಪರಿಹಾರ ನೀಡಲು ಆದೇಶ ಆಗಿತ್ತು. ಈಗ ಮೂರು ವರ್ಷ ಕಳೆದಿದ್ದು ಭೂಮಿಯ ದರ ಮತ್ತೆ ಹೆಚ್ಚಳವಾಗಿದೆ. ಸೂಕ್ತ ಪರಿಹಾರಕ್ಕಾಗಿ ನಾವು ಮತ್ತೆ ಧರಣಿ ನಡೆಸುತ್ತೇವೆ. ಆಗಸ್ಟ್ 22ರಿಂದ 29ರ ವರೆಗೆ ಎಂಟು ದಿನಗಳ ಕಾಲ ಬೆಳಗ್ಗಿನಿಂದ ಸಂಜೆಯ ವರೆಗೆ ದಿನವೂ ಧರಣಿ ನಡೆಸಲಿದ್ದೇವೆ ಎಂದು ಮರಿಯಮ್ಮ ಥಾಮಸ್ ಹೇಳಿದರು.

ಇದರ ಮಧ್ಯೆ ಸಂಸದ ನಳಿನ್ ಕುಮಾರ್ ಕಟೀಲು ಹೆಸರಲ್ಲಿ ಬಿಜೆಪಿ ಐಟಿ ಸೆಲ್ಲಿನವರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಪದವು ಗ್ರಾಮದ ಎರಡೂವರೆ ಎಕ್ರೆ ಜಾಗದ ಸ್ವಾಧೀನಕ್ಕೆ 200 ಕೋಟಿ ಬಿಡುಗಡೆ ಆಗಿದೆ ಎಂದು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದಾರೆ. ಈ ಬಗ್ಗೆ ಅವರಲ್ಲಿ ಹಣ ಮಂಜೂರು ಆಗಿರುವುದಕ್ಕೆ ದಾಖಲೆ ಕೊಡಿ ಎಂದು ಕೇಳಿದರೆ, ತಮಗೇನೂ ಗೊತ್ತಿಲ್ಲ ಎಂದಿದ್ದಾರೆ. ಇವರು ಸುಳ್ಳು ಹೇಳಿ ಯಾಕೆ ಜನರನ್ನು ಮೋಸ ಮಾಡುವುದು. ಇಂಥ ಬೇಜವಾಬ್ದಾರಿ ಜನಪ್ರತಿನಿಧಿಗಳಿಂದಲೇ ನಮಗೆ ಇಂಥ ದುರ್ಗತಿ ಬಂದಿರುವುದು. ನಾಲ್ಕು ವರ್ಷಗಳಲ್ಲಿ 12 ಮಂದಿ ಭೂಸ್ವಾಧೀನಾಧಿಕಾರಿಯನ್ನು ಬದಲು ಮಾಡಿದ್ದಾರೆ. ಒಬ್ಬ ಅಧಿಕಾರಿ ಬಂದು ತಿಂಗಳು ಕಳೆಯುವಾಗ ಮತ್ತೊಬ್ಬ ಬರುತ್ತಾನೆ ಎಂದು ರತ್ನಾಕರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

2016ರಲ್ಲಿ ನೋಟಿಫಿಕೇಶನ್ ಸಂದರ್ಭದಲ್ಲಿ ಭೂಮಿ ಪರಿಹಾರದ ಮೊತ್ತ 485 ಕೋಟಿ ಇತ್ತು. ಈಗ 1073 ಕೋಟಿ ಆಗಿದೆ. ಇದರ ಬಗ್ಗೆ ಮೇಲಿನ ಅಧಿಕಾರಿಗಳಿಗೆ ತಿಳಿಸಲು ಇಲ್ಲಿನ ಸಂಸದರಿಗೆ ಸಾಧ್ಯವಾಗುತ್ತಿಲ್ಲ. ಇವರು 2024ರಲ್ಲಿ ಹೆದ್ದಾರಿ ಸಂಪೂರ್ಣ ಆಗಲಿದೆ ಎಂದು ಸುಳ್ಳು ಮಾಹಿತಿ ಕೊಟ್ಟು ಜನರನ್ನು ನಂಬಿಸುತ್ತಾರೆ. ಹೆದ್ದಾರಿ ಕಾಮಗಾರಿ ಆಗಬೇಕು ಎನ್ನುವ ಕಾಳಜಿಯೇ ಇವರಿಗೆ ಇಲ್ಲ. ಕೇವಲ 45 ಕಿಮೀ ಉದ್ದದ ಹೆದ್ದಾರಿಯನ್ನು ಮಾಡಲು ಇವರಿಗೆ ಸಾಧ್ಯವಾಗದಿದ್ದರೆ, ಇವರು ಇತರ ಯಾವುದಾದರೂ ಕೆಲಸ ಮಾಡಲು ಸಾಧ್ಯವೇ ಎಂದು ಮರಿಯಮ್ಮ ಥಾಮಸ್ ಪ್ರಶ್ನಿಸಿದರು. ಸುದ್ದಿಗೋಷ್ಟಿಯಲ್ಲಿ ವಿಶ್ವಜಿತ್, ಪ್ರಕಾಶ್ಚಂದ್ರ ಮತ್ತಿತರರು ಇದ್ದರು.

Mangalore 22 km of Sanur-Bikarnakatte highway widening project fraud, Land owners to protest over negligence of MP Nalin Kateel says Mariam Thomas. The Union government has sanctioned over ₹200 crore for acquiring land to widen a 2.5 km stretch in Padavu village for the project. The land acquisition in this stretch was pending coming in the way of widening the highway. The Union Finance Ministry has agreed to sanction over ₹200 crore to acquire the land on the stretch.