ಕೋಗಿಲು ಬಡಾವಣೆ ವಿವಾದ ನಡುವೆಯೇ ಕೇರಳ ಸಿಎಂ ಪಿಣರಾಯಿ - ಸಿದ್ದರಾಮಯ್ಯ ಭೇಟಿ ; ಕೆಸಿ ವೇಣುಗೋಪಾಲ್, ಬಿಕೆ ಹರಿಪ್ರಸಾದ್ ಜೊತೆಗೆ ಕೇರಳ ಪ್ರವಾಸ 

31-12-25 02:35 pm       Bangalore Correspondent   ಕರ್ನಾಟಕ

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರ ಮನೆಗಳು, ಶೆಡ್​ಗಳ ತೆರವು ವಿಚಾರದಲ್ಲಿ ವಾಗ್ದಾಳಿ ನಡೆಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಭೇಟಿಯಾಗಿ ಕುಶಲೋಪರಿ ಮಾತನಾಡಿದ್ದಾರೆ.

ಬೆಂಗಳೂರು, ಡಿ.31 : ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರ ಮನೆಗಳು, ಶೆಡ್​ಗಳ ತೆರವು ವಿಚಾರದಲ್ಲಿ ವಾಗ್ದಾಳಿ ನಡೆಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಭೇಟಿಯಾಗಿ ಕುಶಲೋಪರಿ ಮಾತನಾಡಿದ್ದಾರೆ. ಕೇರಳದ ವರ್ಕಳದಲ್ಲಿ ನಾರಾಯಣ ಗುರುಗಳ ಕಾರ್ಯಕ್ರಮಕ್ಕಾಗಿ ತೆರಳಿರುವ ಸಿದ್ದರಾಮಯ್ಯ ಅವರನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿಯಾಗಿದ್ದಾರೆ. 

ಕೋಗಿಲು ಬಡಾವಣೆಯ ಅಕ್ರಮ ತೆರವಿನ ಬಗ್ಗೆ ಸರ್ಕಾರದ ಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡು ಕೇರಳ ಸಿಎಂಗೆ ತಿರುಗೇಟು ನೀಡಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಕೋಗಿಲು ಬಡಾವಣೆ ನಿರಾಶ್ರಿತರಿಗೆ ತಕ್ಷಣವೇ ಮನೆಗಳನ್ನು ನೀಡುವುದಾಗಿ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೇ ಸಂದರ್ಭದಲ್ಲಿ ಕೇರಳ ಪ್ರವಾಸ ತೆರಳಿದ ಸಿಎಂ ಸಿದ್ದರಾಮಯ್ಯ, ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಿರುವನಂತಪುರದಲ್ಲಿ ಭೇಟಿಯಾಗಿದ್ದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.‌ ಈ ಭೇಟಿ ವೇಳೆ, ಹೈಕಮಾಂಡ್ ಪ್ರತಿನಿಧಿ ಕೆಸಿ ವೇಣುಗೋಪಾಲ್ ಕೂಡ ಜೊತೆಗಿದ್ದರು. 

ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿಗೆ ಗೌರವ ಸಲ್ಲಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಠಾಧೀಶರಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ ಉಪಸ್ಥಿತರಿದ್ದರು. ಈ ವೇಳೆ ವೇದಿಕೆಯಲ್ಲಿ ಪಿಣರಾಯಿ ವಿಜಯನ್​​​​, ಸಿದ್ದರಾಮಯ್ಯ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. 

ಈ ಬಗ್ಗೆ ಎಕ್ಸ್ ನಲ್ಲಿ ಸಂದೇಶ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ, ಒಂದು ಕಾಲದಲ್ಲಿ ಜಾತಿಯಾಧಾರಿತ ಶೋಷಣೆ, ಅಸಮಾನತೆಗಳಿಂದ ನರಳುತ್ತಿದ್ದ ಕೇರಳದಲ್ಲಿ ಸಮಾನತೆಯ ಬೆಳಕು ಹರಿಸಿದ ನಾರಾಯಣ ಗುರುಗಳು ನಡೆದಾಡಿದ ನೆಲದಲ್ಲಿ ಜರುಗಲಿರುವ ಯಾತ್ರಾರ್ಥಿಗಳ ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದೇನೆ. ಶಿವಗಿರಿ ಮಠದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮೀಜಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್, ನನ್ನ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಗಣ್ಯರು ಈ ವೇಳೆ ಹಾಜರಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

Karnataka Chief Minister Siddaramaiah met Kerala CM Pinarayi Vijayan in Thiruvananthapuram even as tensions continue over the eviction of alleged illegal settlers in Bengaluru’s Kogilu area. The meeting took place during Siddaramaiah’s visit to attend the Narayana Guru event in Varkala, accompanied by KC Venugopal and BK Hariprasad.