ಫೈಬರ್ ಸಲಾಕೆಯಲ್ಲಿ ಅಡಿಕೆ ಕೀಳುತ್ತಿದ್ದಾಗ ವಿದ್ಯುತ್ ಶಾಕ್ ; ಯುವಕ ಸ್ಥಳದಲ್ಲೇ ಮೃತ್ಯು 

09-06-23 05:37 pm       Mangalore Correspondent   ಕರಾವಳಿ

ಅಡಿಕೆ ಮರದಿಂದ ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಬಂಟ್ವಾಳ, ಜೂನ್ 9: ಅಡಿಕೆ ಮರದಿಂದ ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಸಾವನ್ನಪ್ಪಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಲಾಯಿಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ (29) ಮೃತ ಯುವಕ. ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಎಂಬವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದಾಗ ಘಟನೆ ನಡೆದಿದೆ. ಶಾಫಿ ಅವರು ಅನೇಕ ವರ್ಷಗಳಿಂದ ಅಡಿಕೆ ಮರದಿಂದ ಅಡಿಕೆ ಕೀಳುವುದು, ಖರೀದಿಸುವ ವ್ಯವಹಾರ ನಡೆಸುತ್ತಿದ್ದರು ಎನ್ನಲಾಗಿದೆ. ಅಡಿಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ತಾವೇ ಅಡಿಕೆ ಕೀಳುವ ಕೆಲಸ ಮಾಡುತ್ತಿದ್ದರು. 

ಈ ಬಾರಿ ಅಡಿಕೆ ಕೀಳಲು ಹೊಸತಾಗಿ ಫೈಬರ್ ಸಲಾಕೆಯನ್ನು ಖರೀದಿ ಮಾಡಿದ್ದರು. ಇಂದು ಅದೇ ಹೊಸ ಸಲಾಕೆಯಲ್ಲಿ ಅಡಿಕೆ ಕೀಳುತ್ತಿದ್ದಾಗ ಶಾಫಿ ಅವರ ಕೈಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ತಾಗಿದೆ. ಮಳೆಯಿಂದ ಒದ್ದೆಯಾಗಿದ್ದ ಕಾರಣ ಫೈಬರ್ ಸಲಾಕೆಯ ತುದಿಗೆ ಅಡಿಕೆ ಕೀಳಲು ಅಳವಡಿಸಿದ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಹರಿದಿದ್ದು ಹಿಡಿದುಕೊಂಡಿದ್ದ ಶಾಫಿ ಶಾಕ್ ಒಳಗಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Bantwal 29 year old dies after current shock while plucking Arecanut in Mangalore.