ವಿಶ್ವ ಸಾಗರ ದಿನ ; ಸುಯೆಝ್ ಸಂಸ್ಥೆ ವತಿಯಿಂದ ಸಸಿಹಿತ್ಲು ಬೀಚ್ ನಲ್ಲಿ ಸ್ವಚ್ಛತಾ ಅಭಿಯಾನ, ಜಲಚರಗಳ ಅವನತಿಗೆ ಮನುಷ್ಯರೇ ಕಾರಣ ! 

09-06-23 05:22 pm       Mangalore Correspondent   ಕರಾವಳಿ

ವಿಶ್ವ ಸಾಗರ ದಿನದಂಗವಾಗಿ ಸುಯೆಝ್ ಸಂಸ್ಥೆ, ಆಂಜನೇಯ ಗುಡಿ ಮತ್ತು‌‌ ವ್ಯಾಯಾಮ ಶಾಲೆಯ ಜಂಟಿ ಆಶ್ರಯದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ ಸುರತ್ಕಲ್ ನ ಸಸಿಹಿತ್ಲು ಬೀಚ್ ಕಿನಾರೆಯಲ್ಲಿ‌ ಹಮ್ಮಿಕೊಳ್ಳಲಾಯಿತು.‌

ಮಂಗಳೂರು, ಜೂನ್ 9: ವಿಶ್ವ ಸಾಗರ ದಿನದಂಗವಾಗಿ ಸುಯೆಝ್ ಸಂಸ್ಥೆ, ಆಂಜನೇಯ ಗುಡಿ ಮತ್ತು‌‌ ವ್ಯಾಯಾಮ ಶಾಲೆಯ ಜಂಟಿ ಆಶ್ರಯದಲ್ಲಿ ಬೀಚ್ ಸ್ವಚ್ಛತಾ ಅಭಿಯಾನ ಸುರತ್ಕಲ್ ನ ಸಸಿಹಿತ್ಲು ಬೀಚ್ ಕಿನಾರೆಯಲ್ಲಿ‌ ಹಮ್ಮಿಕೊಳ್ಳಲಾಯಿತು.‌

ಸಿಕ್ಕ ಸಿಕ್ಕ‌ ಕಸಗಳನ್ನು ಸಮುದ್ರಕ್ಕೆ ಎಸೆಯುತ್ತಿರುವುದರಿಂದ ಜಲಚರಗಳ ಅವನತಿಗೆ ಮನುಷ್ಯರೇ ಕಾರಣವಾಗುತ್ತಿರುವುದಲ್ಲದೆ ಹವಾಮಾನ ವೈಪರೀತ್ಯಕ್ಕೂ ಮಾರಕ‌‌ ಕೊಡುಗೆ ನೀಡುತ್ತಿದ್ದೇವೆ. ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ‌ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಅತ್ಯಂತ ಅಮೂಲ್ಯವಾಗಿರುವ ಸಾಗರ ಸಂಪತ್ತನ್ನು ಸಂರಕ್ಷಿಸುವುದು ನಮ್ಮ ಮುಖ್ಯ ಕರ್ತವ್ಯ. ಈ ನಿಟ್ಟಿನಲ್ಲಿಯೇ ಪ್ರತಿಯೊಬ್ಬರಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೂನ್ 8 ಅನ್ನು ವಿಶ್ವ ಸಾಗರ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪರಿಸರ ಸಮತೋಲನ, ಜೀವವೈವಿದ್ಯತೆ, ಆಹಾರ ಭದ್ರತೆ, ಹವಾಮಾನ ಬದಲಾವಣೆ, ಸಮುದ್ರ ಸಂಪನ್ಮೂಲಗಳ ವಿವೇಚನಾರಹಿತ ಬಳಕೆ ಇತ್ಯಾದಿಗಳ ವಿಷಯಗಳನ್ನು ಎತ್ತಿ ತೋರಿಸುವುದು ಮತ್ತು ಸಾಗರಗಳು ಒಡ್ಡುವ ಸವಾಲುಗಳ ಬಗ್ಗೆ ಜಗತ್ತಿನಲ್ಲಿ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ.

​​​​​​​

ವಿಶ್ವ ಸಾಗರ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಮೊದಲು 1992 ರಲ್ಲಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ಪ್ರಸ್ತಾಪಿಸಲಾಯಿತು. ಇದು ಪ್ರಪಂಚದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಸಾಗರವನ್ನು ನೋಡಲು ಸಂಭ್ರಮಿಸುವ ಮತ್ತು ನಮ್ಮ ಜೀವನದಲ್ಲಿ ಅದು ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುವ ಗುರಿಯನ್ನು ಹೊಂದಿದೆ.​​​​​​​

Mangalore Suez Company holds cleaning campaign at Sasihithlu beach in Surathkal on ocean day