BL Santosh, Naleen Kateel: ಮಂಗಳೂರಿನಲ್ಲಿ ಬಿಎಲ್ ಸಂತೋಷ್ ಬಿಜೆಪಿ ಪ್ರಮುಖರ ಸಭೆ ; ರಾಜ್ಯಾಧ್ಯಕ್ಷ ನಳಿನ್ ಬಗ್ಗೆ ಸಮರ್ಥನೆ, ಸಂಸದ ಸ್ಥಾನ ಬದಲಾವಣೆ ಇಲ್ವಂತೆ! ಪುತ್ತೂರು ಯಾವ ಸೀಮೆ ಲ್ಯಾಬೊರೇಟರಿ ಎಂದು ಪ್ರಶ್ನೆ 

05-06-23 06:40 pm       Mangalore Correspondent   ಕರಾವಳಿ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಎದುರಾದ ಬಳಿಕ ಬಿಜೆಪಿ ಹೈಕಮಾಂಡ್ ಕಂಗೆಟ್ಟು ಹೋಗಿದೆ. ಗೆದ್ದೇ ಗೆಲ್ತೀವಿ ಎಂಬ ಹುಮ್ಮಸ್ಸಿನಲ್ಲಿದ್ದ ರಾಜ್ಯ ಬಿಜೆಪಿ ನಾಯಕರು ಗಾಢ ಮೌನಕ್ಕೆ ಶರಣಾಗಿದ್ದಾರೆ.

ಮಂಗಳೂರು, ಜೂನ್ 5: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಎದುರಾದ ಬಳಿಕ ಬಿಜೆಪಿ ಹೈಕಮಾಂಡ್ ಕಂಗೆಟ್ಟು ಹೋಗಿದೆ. ಗೆದ್ದೇ ಗೆಲ್ತೀವಿ ಎಂಬ ಹುಮ್ಮಸ್ಸಿನಲ್ಲಿದ್ದ ರಾಜ್ಯ ಬಿಜೆಪಿ ನಾಯಕರು ಗಾಢ ಮೌನಕ್ಕೆ ಶರಣಾಗಿದ್ದಾರೆ. ಸೋಲಿನ ಬಗ್ಗೆ ವಿಮರ್ಶೆ ಮಾಡೋದಕ್ಕೂ ಹೈಕಮಾಂಡ್ ನಾಯಕರು ಮುಂದಾಗಿಲ್ಲ. ಸೋಲಿನ ಹೊಣೆ ಹೊತ್ತು ಯಾರೊಬ್ಬರೂ ರಾಜಿನಾಮೆ ನೀಡುವುದಕ್ಕೂ ಹೋಗಿಲ್ಲ. ಇದರ ಮಧ್ಯೆ, ಮಂಗಳೂರಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಚುನಾವಣಾ ಸಮಿತಿ ಸದಸ್ಯರ ಸಭೆ ಕರೆದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪರವಾಗಿ ಬ್ಯಾಟಿಂಗ್ ನಡೆಸಿದ್ದಾರೆಂದು ತಡವಾಗಿ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಬಗ್ಗೆ ಕರಾವಳಿಯಲ್ಲದೆ, ಇಡೀ ರಾಜ್ಯದಲ್ಲಿ ಭಾರೀ ವಿರೋಧ ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಂತೂ ಯಾವಾಗ ರಾಜಿನಾಮೆ ಎಂದೇ ಕಾರ್ಯಕರ್ತರು ಬಹಿರಂಗ ಪ್ರಶ್ನೆ ಮುಂದಿಡುತ್ತಿದ್ದಾರೆ. ಸೋಲಿನ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ಮುಂದಿನ ಬಾರಿ ಸಂಸದ ಸ್ಥಾನಕ್ಕೆ ನಳಿನ್ ಕುಮಾರ್ ಗೆ ಟಿಕೆಟ್ ಇಲ್ಲವೆಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ನಾಲ್ಕು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಬಿ.ಎಲ್.ಸಂತೋಷ್, ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಸಮಿತಿಯ ಸಭೆ ನಡೆಸಿದ್ದಾರೆ. ಖಾಸಗಿ ಹೊಟೇಲ್ ನಲ್ಲಿ ನಡೆದ ಈ ಸಭೆಯಲ್ಲಿ ಕೆಲವು ಶಾಸಕರು ಸೇರಿ ಜಿಲ್ಲಾ ಮಟ್ಟದ ನಾಯಕರು ಪಾಲ್ಗೊಂಡಿದ್ದರು.

Kateel challenges Congress to announce Lingayat Karnataka CM | Deccan Herald

ವಿಧಾನಸಭೆ ಚುನಾವಣೆ ಸೋಲಿನಿಂದ ಚಿಂತೆಗೊಳಗಾಗಿದ್ದ ಜಿಲ್ಲೆಯ ನಾಯಕರೆಲ್ಲ ಚಿಂತೆಯಲ್ಲೇ ಸಭೆಗೆ ತೆರಳಿದ್ದರು. ಸಭೆಯಲ್ಲಿ ಕುಳಿತವರ ಮುಖ ಗಂಟಿಕ್ಕಿದ್ದನ್ನು ನೋಡಿ, ಏನ್ರೀ ಎಲ್ಲರ ಮನೆಯಲ್ಲಿ ಎರಡೆರಡು ಹೆಣ ಬಿದ್ದ ರೀತಿ ಕುಳಿತಿದ್ದೀರಲ್ಲಾ ಎಂದು ಸಂತೋಷ್ ಪ್ರಶ್ನೆ ಮಾಡಿದ್ದಾರೆ. ಎಂಟರಲ್ಲಿ ಆರು ಸೀಟು ಗೆದ್ದಿದೆಯಲ್ಲ.. ಸಾಕು, ನೀವು ನಿಮ್ಮ ಕೆಲಸ ಮಾಡಿದ್ದೀರಿ. ಬೇರೆ ಕಡೆ ಅಷ್ಟೂ ಬಂದಿಲ್ಲ. ಒಂದೂ ಸೀಟು ಗೆಲ್ಲದ ಜಿಲ್ಲೆಗಳಿವೆ. ಅದಕ್ಕಿಂತ ವಾಸಿಯಲ್ಲ ಎಂಬ ರೀತಿಯ ಮಾತುಗಳನ್ನು ಆಡಿದ್ದಾರೆ ಎನ್ನುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಪಾಪ ಅವನೇನು ಮಾಡೋದು.. ಎಲ್ಲರೂ ರಾಜಿನಾಮೆ ಕೇಳಿದರೆ ಅವನೇನು ಮಾಡೋದು. ಅವ ಪಕ್ಷದ ಕೆಲಸ ಮಾಡಿದ್ದಾನೆ ಎಂದು ನಳಿನ್ ಕುಮಾರ್ ಪರ ವಹಿಸ್ಕೊಂಡು ಸಂತೋಷ್ ಮಾತನಾಡಿದ್ದಾರಂತೆ.

ಪುತ್ತೂರು ಯಾವ ಸೀಮೆಯ ಲ್ಯಾಬೊರೇಟರಿ ?

ಇದೇ ವೇಳೆ, ಪುತ್ತೂರಿನಲ್ಲಿ ರಾಜ್ಯಾಧ್ಯಕ್ಷರ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ್ದನ್ನು ಒಬ್ಬರು ಪ್ರಸ್ತಾಪ ಮಾಡಿದ್ದು ಯಾವುದೇ ಶಾಸಕರು ಅದನ್ನು ಖಂಡಿಸಿ ಮಾತನಾಡಿಲ್ಲ ಎಂದಿದ್ದಾರೆ. ಅದಕ್ಕೆ, ನೀವೇನು ಜವಾಬ್ದಾರಿ ಹೊಂದಿದ್ದೀರಿ.. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾನೆ. ಶಾಸಕರು ಬಿಡಿ, ನೀವೇನು ಕೆಲಸ ಮಾಡಿದ್ದೀರಿ ಎಂದು ಅವರನ್ನೇ ಮರು ಪ್ರಶ್ನೆ ಹಾಕಿದ್ದಾರಂತೆ ಸಂತೋಷ್. ಪುತ್ತೂರಿನ ಬಂಡಾಯ ವಿಚಾರದ ಪ್ರಶ್ನೆಗೆ, ಪುತ್ತೂರು ಯಾವ ಸೀಮೆಯ ಲ್ಯಾಬೊರೇಟರ್ರೀ ಅದು. ಅಲ್ಲಿ ಹಿಂದಿನಿಂದಲೂ ಬಂಡಾಯ ಇತ್ತು. ಹಿಂದೆ ರಾಮ ಭಟ್, ಶಕುಂತಳಾ ಶೆಟ್ಟಿ, ಈಗ ಅರುಣ್ ಪುತ್ತಿಲ ಬಂಡಾಯ ಎದ್ದಿದ್ದಾರೆ. ಅದರಲ್ಲೇನು ನಷ್ಟ ಆಯ್ತು.. ಅದೆಲ್ಲ ಆಗುತ್ತೆ ಹೋಗುತ್ತೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

BJP offered Puttur on a platter to Congress by denying ticket to Arun Kumar  Puthila - The Hindu

ಕೆಲವು ಮಾಧ್ಯಮಗಳಲ್ಲಿ ಸಂಸದರ ಬದಲಾವಣೆ ಸುದ್ದಿ ಗಮನಿಸಿದ್ದೇನೆ. ನಾನು ಮೇಲಿನಿಂದ ಮೂರನೇ ಸ್ಥಾನದಲ್ಲಿದ್ದೇನೆ, ಬದಲಾವಣೆ ಮಾಡೋದಕ್ಕೆ ನಾನಿದ್ದೀನಲ್ಲ ಎಂದು ನಳಿನ್ ಕುಮಾರ್ ಸೇರಿದಂತೆ 12 ಸಂಸದರಿಗೆ ಈ ಬಾರಿ ಟಿಕೆಟ್ ಇಲ್ಲವೆಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಬಿ.ಎಲ್ ಸಂತೋಷ್ ಸ್ಪಷ್ಟನೆ ನೀಡಿದ್ದಾರಂತೆ. ಆಮೂಲಕ ಸಂಸದ ನಳಿನ್ ಕುಮಾರ್ ಮುಂದಿನ ಬಾರಿಯೂ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಜಿಲ್ಲಾ ಮಟ್ಟದ ನಾಯಕರಿಗೆ ನೀಡಿದ್ದಾರೆ ಎನ್ನುವ ಅಂಶ ತೀವ್ರ ಚರ್ಚೆಗೊಳಗಾಗಿದೆ. ಈಗಾಗಲೇ ನಳಿನ್ ಕುಮಾರ್ ಬದಲಾವಣೆ ಆಗದೇ ಇದ್ದರೆ, ಲೋಕಸಭೆ ಚುನಾವಣೆಗೂ ಬಂಡಾಯ ಎದುರಾಗಲಿದೆ ಎನ್ನುವ ಮಾತು ಕೇಳಿಬರುತ್ತಿರುವಾಗಲೇ ಬಿಎಲ್ ಸಂತೋಷ್ ಈ ರೀತಿ ಸಂದೇಶ ಕೊಟ್ಟು ಹೋಗಿರುವುದು ಮತ್ತೊಂದು ಬಿರುಗಾಳಿ ಏಳುವುದಕ್ಕೆ ಕಾರಣವಾಗಲಿದೆ.

A Look at the BJP's Tainted History: Several Members Face Allegations of  Sexual Offences | NewsClick

ರಾಜ್ಯಾಧ್ಯಕ್ಷ ಸ್ಥಾನವೂ ಬದಲಾವಣೆ ಇಲ್ಲ !

ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಬಳಿಕ ಕೇಂದ್ರ ನಾಯಕರು ತುಟಿ ಪಿಟಿಕ್ ಎಂದಿಲ್ಲ. ರಾಜ್ಯ ಬಿಜೆಪಿಯನ್ನು ಸರ್ಜರಿ ಮಾಡೋದಕ್ಕೂ ಮುಂದಾಗಿಲ್ಲ. ರಾಜ್ಯ ಬಿಜೆಪಿ ಸಮಿತಿಯನ್ನು ತನ್ನ ಮುಷ್ಟಿಯಲ್ಲಿ ಇಟ್ಕೊಂಡಿರುವ ಬಿ.ಎಲ್.ಸಂತೋಷ್, ಸೋಲಿನ ಬಗ್ಗೆ ರಾಜ್ಯ ಮಟ್ಟದಲ್ಲಿ ಆತ್ಮಾವಲೋಕನ ಸಭೆ ಮಾಡುವುದರ ಬದಲು ಮಂಗಳೂರಿನಲ್ಲಿ ಕುಳಿತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪರವಾಗಿ ಸಮರ್ಥಿಸಿ, ಜಿಲ್ಲಾ ಮಟ್ಟದ ಸಭೆ ನಡೆಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಎಲ್ಲ ರಾಜ್ಯಗಳ ಪಕ್ಷದ ಸಮಿತಿಗಳಿಗೆ ಸಂಘಟನಾತ್ಮಕವಾಗಿ ಮುಖ್ಯಸ್ಥ ಹುದ್ದೆಯಲ್ಲಿರುವ ಬಿ.ಎಲ್.ಸಂತೋಷ್, ಒಂದು ರಾಜ್ಯದ ಸಂಸದನ ಬಗ್ಗೆ ವಿಶೇಷ ಮಮಕಾರ ಇಟ್ಟುಕೊಂಡು ಆತನ ಜಿಲ್ಲೆಯಲ್ಲೇ ಜಿಲ್ಲಾ ಮಟ್ಟದ ಸಭೆ ನಡೆಸಿರುವುದು, ಅಸೆಂಬ್ಲಿ ಚುನಾವಣೆಯ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎನ್ನುವ ರೀತಿ ಆಡಿದ್ದಾರೆಂಬ ಮಾತು ಈಗ ಪಕ್ಷದಲ್ಲೇ ಚರ್ಚೆಗೆ ಗ್ರಾಸವಾಗಿದೆ. ಇವರ ಮಾತು ಕೇಳಿದರೆ, ಲೋಕಸಭೆ ಚುನಾವಣೆ ವರೆಗೂ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂಬುದನ್ನು ಸೂಚಿಸುತ್ತದೆ ಎನ್ನುವ ಮಾತೂ ಕೇಳಿಬಂದಿದೆ.

BL Santosh holds meeting in Mangalore, says no change of BJP State president Nalin Kateel, slams Arun Puthila. Also BL Santosh has praised and appreciated Nalin for his good leadership in State. Puttur Arun Puthila contesting as MLA or MP will bring no loss to BJP party he added in the meeting.