ಮೆಹೆಂದಿ ಶಾಸ್ತ್ರದಂದೇ ನಾಪತ್ತೆಯಾಗಿದ್ದ ವರನ ಸುಳಿವು ಲಭ್ಯ ; ನಾನು ಬದುಕಿದ್ದೇನೆ, ಮನೆಗೆ ಬರಲ್ಲವೆಂದು ತಂಗಿಗೆ ಸಂದೇಶ ಕಳಿಸಿದ ಯುವಕ  

05-06-23 12:20 pm       Mangalore Correspondent   ಕರಾವಳಿ

ಮೆಹಂದಿ ಶಾಸ್ತ್ರದಂದೇ ನಾಪತ್ತೆಯಾಗಿದ್ದ ವರ್ಕಾಡಿ ಗ್ರಾಮದ ವರನ ಇರುವಿಕೆಯ ಸುಳಿವು ಲಭ್ಯವಾಗಿದೆ. ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ತಂಗಿಗೆ ಸಂದೇಶ ಕಳಿಸಿ ತಕ್ಷಣ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾನೆ.

ಉಳ್ಳಾಲ, ಜೂ.5: ಮೆಹಂದಿ ಶಾಸ್ತ್ರದಂದೇ ನಾಪತ್ತೆಯಾಗಿದ್ದ ವರ್ಕಾಡಿ ಗ್ರಾಮದ ವರನ ಇರುವಿಕೆಯ ಸುಳಿವು ಲಭ್ಯವಾಗಿದೆ. ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ತಂಗಿಗೆ ಸಂದೇಶ ಕಳಿಸಿ ತಕ್ಷಣ ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದಾನೆ. ಇತ್ತ ಮಗನ ಜೀವಕ್ಕೆ ಅಪಾಯ ಆಗಿಲ್ಲವೆಂದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಅವರ ಮಗ ಕಿಶನ್ ಶೆಟ್ಟಿ ಮೇ 31ರಂದು ತನ್ನ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದ್ದವ ನಾಪತ್ತೆಯಾಗಿದ್ದು ಹಲವು ಊಹಾಪೋಹಗಳನ್ನು ಸೃಷ್ಟಿಸಿತ್ತು. ಕಿಶನ್ ಶೆಟ್ಟಿ ಕುಂಜತ್ತೂರು ಬಳಿಯ ಅನ್ಯ ಜಾತಿಯ ಯುವತಿಯನ್ನು ಕಾಲೇಜು ಸಹಪಾಠಿಯಾಗಿದ್ದಾಗಲೇ ಪ್ರೀತಿಸಲಾರಂಭಿಸಿದ್ದರೂ ಇತ್ತೀಚೆಗಷ್ಟೇ ಬೇರೊಂದು ಯುವತಿಯ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆ ಬಳಿಕ ಪ್ರೀತಿಸಿದ ಯುವತಿಯನ್ನು ತಿರಸ್ಕರಿಸುತ್ತಾ ಬಂದಿದ್ದ ಎನ್ನಲಾಗಿದ್ದು ಅದರಿಂದ ಕೆರಳಿದ ಯುವತಿ ತನ್ನ‌ ಬಿಟ್ಟು ಬೇರೆ ಯಾರನ್ನೇ ಮದುವೆಯಾದರೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು‌ ಹಿಂಜರಿಯಲಾರೆ ಅಥವಾ ಮದುವೆ ಮಂಟಪಕ್ಕೆ ಬಂದು ಪ್ರೀತಿ ಕಥೆ ತಿಳಿಸುವುದಾಗಿ ಬೆದರಿಕೆ ಒಡ್ಡಿದ್ದಳು ಎನ್ನಲಾಗಿದ್ದು ಅದರಿಂದಾಗಿ ಮೆಹಂದಿ ಶಾಸ್ತ್ರದಂದೇ ಕಿಶನ್‌ ನಾಪತ್ತೆಯಾಗಿದ್ದ ಎನ್ನಲಾಗಿದೆ. 

ನಾಪತ್ತೆ ಬಳಿಕ ಆ ಯುವತಿ ಕಮೀಷನರ್ ಕಚೇರಿಯಲ್ಲೂ ಅದೇ ಮಾತನ್ನು ಉಲ್ಲೇಖಿಸಿದ್ದು ಮೂರು ಪುಟದಲ್ಲಿ ಕಿಶನ್ ಪ್ರೀತಿಗೆ ವಂಚನೆ ಮಾಡಿದ್ದಾನೆ ಎಂಬುದಾಗಿ ದೂರು ನೀಡಿದ್ದಾಳೆ ಎನ್ನಲಾಗಿದೆ. ಕಿಶನ್ ನಾಪತ್ತೆ ಪ್ರಕರಣ ಬೇರೆ ಬೇರೆ ಆಯಾಮ ಪಡೆದುಕೊಂಡಿದ್ದು ಆತ ಪತ್ತೆಯಾದ ಬಳಿಕವೇ ವಾಸ್ತವಾಂಶ ಹೊರಬರಲಿದೆ.
ಭಾನುವಾರ ಮಧ್ಯಾಹ್ನ ತಂಗಿಯ ಮೊಬೈಲ್ಗೆ ಕಿಶನ್ ಸಂದೇಶ ಕಳಿಸಿದ್ದಾನೆ. ಈ ಬಗ್ಗೆ ಕೊಣಾಜೆ ಪೊಲೀಸರು ಲೊಕೇಶನ್ ಸರ್ಚ್ ಮಾಡಿದಾಗ ಬಳ್ಳಾರಿಯ ಗ್ರಾಮಾಂತರ ಭಾಗವೊಂದರ ಟವರ್ ಲೊಕೇಶನ್ ತೋರಿಸಿದೆ. ಕಿಶನ್ ನನ್ನು ಕರೆ ತರಲು ಪೊಲೀಸರು ಸಜ್ಜಾಗಿದ್ದಾರೆ.

Mangalore Ullal Bridegroom misisng on mehndi day found, texts sister of never coming back home. Kishan shetty who went missing on the day of his Mehndi who went to buy fruits has now texted his sister and has switched his phone off.