ನನ್ನ ಸ್ಪರ್ಧೆಗೆ ಅಪಸ್ವರ ಎತ್ತಿದ್ದಾರೆ, ಇನ್ನು ಚುನಾವಣೆ ಸ್ಪರ್ಧಿಸೋಲ್ಲ, ಪಕ್ಷದಲ್ಲಿ ಸಕ್ರಿಯ ಇರುತ್ತೇನೆ ; ರಮಾನಾಥ ರೈ 

16-05-23 02:43 pm       Mangalore Correspondent   ಕರಾವಳಿ

ನನಗಿಂತಲೂ ಹಿರಿಯರು ಚುನಾವಣೆಗೆ ಸ್ಪರ್ಧಿಸಿದವರಿದ್ದಾರೆ. ಆದರೆ ನಾನು ಚುನಾವಣೆ ನಿಲ್ಲೋದಕ್ಕೆ ಪಕ್ಷದಲ್ಲೇ ಅಪಸ್ವರ ಇದೆ. ಈಗಾಗಲೇ ನನ್ನ ಕೊನೆಯ ಚುನಾವಣೆ ಎಂದಿದ್ದೇನೆ.

ಮಂಗಳೂರು, ಮೇ 16 :  ನನಗಿಂತಲೂ ಹಿರಿಯರು ಚುನಾವಣೆಗೆ ಸ್ಪರ್ಧಿಸಿದವರಿದ್ದಾರೆ. ಆದರೆ ನಾನು ಚುನಾವಣೆ ನಿಲ್ಲೋದಕ್ಕೆ ಪಕ್ಷದಲ್ಲೇ ಅಪಸ್ವರ ಇದೆ. ಈಗಾಗಲೇ ನನ್ನ ಕೊನೆಯ ಚುನಾವಣೆ ಎಂದಿದ್ದೇನೆ. ಹೀಗಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ ಎಂದು ಮಾಜಿ ಸಚಿವ, ಬಂಟ್ವಾಳದಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ಬಳಿಕ ಮಂಗಳೂರಿನಲ್ಲಿ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ವೇಳೆ ಹೇಳಿದಂತೆ ತಾನು ಚುನಾವಣಾ ರಾಜಕೀಯದಿಂದ ದೂರವಿರುತ್ತೇನೆ. ಆದರೆ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯ ಇರುತ್ತೇನೆ. ಪಕ್ಷ ಎಂಎಲ್ಸಿ ಇನ್ನಿತರ ಅವಕಾಶ ಕೊಟ್ಟರೆ ಪಡೆಯಲು ಸಿದ್ಧನಿದ್ದೇನೆ ಎಂದರು. ಲೋಕಸಭಾ ಚುನಾವಣೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ, ಪಕ್ಷ ಸೂಚಿಸಿದಲ್ಲಿ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ತನಗೆ ಸಣ್ಣ ಅಂತರದಲ್ಲಿ ಸೋಲಾಗಿದೆ. ಪಕ್ಷದಲ್ಲಿ ನನಗಿಂತಲೂ ಹಿರಿಯರು ಇದ್ದಾರೆ. ಆದರೆ ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಮ್ಮ ಪಕ್ಷದಿಂದಲೇ ಅಪಸ್ವರ ಕೇಳಿ ಬರುತ್ತಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷದ ವಿರುದ್ಧ ನಾನು ಈವರೆಗೆ ಯಾವುದೇ ಅಪಸ್ವರ ಎತ್ತಿಲ್ಲ. ಪಕ್ಷದ ಋಣವನ್ನು ಜೀವನ ಪರ್ಯಂತ ತೀರಿಸುತ್ತೇನೆ. ಈ ಬಾರಿಯ ನನ್ನ ಸೋಲಿನ ಅವಲೋಕನವನ್ನು ಮಾಡಿದ್ದೇನೆ. ಚುನಾವಣೆ ನಾವು ಗ್ರಹಿಸಿದ ರೀತಿಯಿಲ್ಲ. ನನಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು. ಸಮೀಕ್ಷೆಗಳೂ ಗೆಲ್ಲುವ ರೀತಿಯೇ ಇದ್ದವು. ಆದರೆ ಯಾಕೋ ಹಿನ್ನಡೆಯಾಗಿದೆ ಎಂದು ರಮಾನಾಥ್ ರೈ ನೋವು ತೋಡಿಕೊಂಡಿದ್ದಾರೆ.‌

ಜನರು ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಸೋಲಿನ ಬಗ್ಗೆ ಎದೆಗುಂದಬಾರದು. ಬಿಜೆಪಿ ರಾಜ್ಯದಲ್ಲಿ ಸ್ಪಷ್ಟ ಬಹುಮತವನ್ನು ಯಾವತ್ತೂ ಪಡೆದಿಲ್ಲ. ಜನಸಂಘ ಇರುವಾಗಲೂ ಬಾಹ್ಯ ಬೆಂಬಲದಿಂದಲೇ ಗೆದ್ದಿದ್ದರು. ಜಿಲ್ಲೆಯಲ್ಲಿ ಸೋತರೂ ಗೆದ್ದರೂ ಪಕ್ಷವನ್ನು ಪ್ರಬಲವಾಗಿ ಕಟ್ಟಿದ್ದೇವೆ ಎಂದರು. 

ಇದು ಬಸವಣ್ಣ ಹುಟ್ಟಿದ ನಾಡು, ಇಲ್ಲಿ ಜ್ಯಾತ್ಯಾತೀತ ನಿಲುವಿನ ಜನರಿಗೆ ಜನ ಮಣೆ ಹಾಕುತ್ತಾರೆ. ಭವಿಷ್ಯದಲ್ಲಿ ಬಿಜೆಪಿ ಖಂಡಿತ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಲಿದೆ. ಗ್ಯಾರಂಟಿ ಕಾರ್ಯಕ್ರಮ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಅನುಷ್ಠಾನಕ್ಕೆ ಬರಲಿದೆ. ಕಾಂಗ್ರೆಸ್‌ನ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಯೋಜನ ತಂದಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಕೋಡಿಜಾಲ್ ಇಬ್ರಾಹಿಂ ಮತ್ತಿತರರಿದ್ದರು.

Mangalore Will not contest upcoming elections says Ramanath Rai after losing from Bantwal Constieuncy. Will take part actively in the works of congress party he added.